ಹೊಸಕೋಟೆ : ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ
ಹೊಸಕೋಟೆ, ಡಿಸೆಂಬರ್ 06 : ನಾಮಪಲಕ ಹಾಕುವ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ಘರ್ಷಣೆಗೆ ತಿರುಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆ ಮಾಡಲಾದ ಸೋಮೇಶ್ವರ ದೇವಾಲಯ ಕುರಿತ ನಾಮಫಲಕ ಹಾಕಬೇಕಾದರೆ ಉಭಯ ಪಕ್ಷಗಳ ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಿಗೆ ಕೂಡಿ ದೇಣಿಗೆ ಸಂಗ್ರಹ ಮಾಡಿ ದೇವಾಲಯದ ಜೀರ್ಣೋದ್ಧಾರ ಮಾಡಿಗಿದ್ದರು ಆದರೆ ನಂತರ ಕಾಂಗ್ರೆಸ್ ಕಾರ್ಯಕರ್ತರು ದೇವಾಲಯ ಉದ್ಘಾಟನಾ ಕಾರ್ಯಕ್ರಮ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಎನ್.ನಾಗರಾಜು (ಎಂಟಿಬಿ) ಅವರ ಚಿತ್ರಗಳಿರುವ ಫ್ಲೆಕ್ಸ್ ಹಾಕಲು ಮುಂದಾದ ಕಾರಣ ಬಿಜೆಪಿ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಎರಡೂ ಪಕ್ಷದವರು ಸೇರಿ ದೇಣಿಗೆ ಸಂಗ್ರಹಿಸಿದ್ದೇವೆ, ಒಬ್ಬ ಪಕ್ಷದ ನಾಯಕರ ಫ್ಲೆಕ್ಸ್ ಮಾತ್ರ ಏಕೆ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರದ್ದು, ಮೊದಲು ವಾದ ವಿವಾದದ ಹಂತದಲ್ಲಿದ್ದ ಜಗಳ ನಂತರ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಘಟನೆಯಲ್ಲಿ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆಯೇ ಹೊರತು ಯಾರಿಗೂ ಏನು ಅಪಾಯವಾಗಿಲ್ಲ, ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಎರಡೂ ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಹೊಸಕೋಟೆಯು ಚುನಾವಣಾ ಆಯೋಗದ ದೃಷ್ಠಿಯಲ್ಲಿ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗುತ್ತದೆ. ಇಬ್ಬರು ಅತ್ಯಂತ ಪ್ರಭಾವಿ ನಾಯಕರು ಹಾಗೂ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಮತ್ತು ಕಾಂಗ್ರೆಸ್ನ ಎನ್.ನಾಗರಾಜು (ಎಂಟಿಬಿ) ಸದಾ ಇಲ್ಲಿ ಮುಖಾಮುಖಿ ಆಗುವುದರಿಂದ ಚುನಾವಣೆ ಸಮಯದಲ್ಲಿ ಹೊಸಕೋಟೆ ಉದ್ವಿಗ್ನವಾಗುತ್ತದೆ.