ಕೆಪಿಎಸ್ ಸಿ ಹೆಬ್ಬಾಗಿಲಿನಿಂದಲೇ ಪ್ರಶ್ನೆ ಪತ್ರಿಕೆ ಲೀಕ್ : ಆಯೋಗದ ಇಬ್ಬರು ನೌಕರರು ಸೆರೆ !
ಬೆಂಗಳೂರು, ಜನವರಿ 25: ಭಾನುವಾರ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕ ನೇಮಕಾತಿ ಪ್ರಶ್ನೆ ಪ್ರತ್ರಿಕೆ ಕರ್ನಾಟಕ ಲೋಕಸೇವಾ ಆಯೋಗದಿಂದಲೇ ಲೀಕ್ ಆಗಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಹೊರ ಬಿದ್ದಿದೆ. ಲೋಕ ಸೇವಾ ಆಯೋಗದ ಪರೀಕ್ಷಾ ವಿಭಾಗದಲ್ಲಿ ಕೆಲಸ ಮಾಡುವ ಕೆಳ ಹಂತದ ಇಬ್ಬರು ನೌಕರರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದರಲ್ಲಿ ಇತರೆ ಅಧಿಕಾರಿಗಳ ಕೈವಾಡ ಇರುವ ಬಗ್ಗೆ ತನಿಖೆ ಮುಂದುವರೆದಿದೆ. ಒಂದಲ್ಲಾ ಒಂದು ಅಕ್ರಮಕ್ಕೆ ನಾಂದಿ ಹಾಡುವ ಕೆಪಿಎಸ್ ಸಿ ನೇಮಕಾತಿ ಪರೀಕ್ಷೆಗಳ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ.
ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ವಿಭಾಗದ ಕಂಟ್ರೋಲರ್ ವಿಭಾಗದಲ್ಲಿ ಸೇನಾ ಬೇಡಿ ಎಂಬಾಕೆ ಕೆಲಸ ನಿರ್ವಹಿಸುತ್ತಿದ್ದಳು. ನೇಮಕಾತಿ ಸಂಬಂಧ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಕೈಗೆ ಸಿಗುತ್ತಿದ್ದವು. ಭಾನುವಾರ ನಡೆಯಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸೇನಾ ಬೇಡಿ ಆಯೋಗದಲ್ಲಿಯೇ ಕೆಲಸ ಮಾಡುವ ದ್ವಿತೀಯ ದರ್ಜೆ ಸಹಾಯಕ ರಮೇಶ್ ಎಂಬಾತನಿಗೆ ನೀಡಿದ್ದಾರೆ. ಪೂರ್ವ ನಿಯೋಜಿತ ಸಂಚಿನಂತೆ ಪ್ರಶ್ನೆ ಪತ್ರಿಕೆಯನ್ನು ರಮೇಶ್ ಕೈಗೆ ನೀಡಿದ್ದು, ಆತ ಅದನ್ನು ಚಂದ್ರು ಹಾಗೂ ಇತರರಿಗೆ ನೀಡಿ ಹಣ ಪಡೆದಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಯೋಗದಿಂದಲೇ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ನೋಡಿದರೆ, ಈ ಹಿಂದೆ ನಡೆದಿರುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಇದೇ ರೀತಿ ಲೀಕ್ ಆಗುತ್ತಿದ್ದವೇ ಎಂಬ ಅನುಮಾನ ವ್ಯಕ್ತವಾಗಿದೆ.
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 10 ಲಕ್ಷಕ್ಕೆ ಮಾರಾಟ!
ಸುದೀರ್ಘ ವಿಚಾರಣೆ: ಪ್ರಶ್ನೆ ಪತ್ರಿಕೆ ಮಾರಾಟ ದಂಧೆಯಲ್ಲಿ ತೊಡಗಿ ಸಿಕ್ಕಿಬಿದ್ದ ಚಂದ್ರು ನೀಡಿದ ಮಾಹಿತಿ ಮೇರೆಗೆ ಆಯೋಗದ ದ್ವಿತೀಯ ದರ್ಜೆ ಸಹಾಯಕ ರಮೇಶ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಎಸಿಪಿ ವೇಣುಗೋಪಾಲ್ ಅವರೇ ಖುದ್ದು ವಿಚಾರಣೆ ನಡೆಸುತ್ತಿದ್ದು, ಆಯೋಗದ ಪರೀಕ್ಷಾ ವಿಭಾಗದಿಂದ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಸಂಗತಿಯನ್ನು ಬಾಯಿಬಿಟ್ಟಿದ್ದಾನೆ. ಈ ಲೀಕ್ ದಂಧೆಯಲ್ಲಿ ಶಾಮೀಲಾಗಿರುವ ಇತರರ ಬಗ್ಗೆ ವಿಚಾರಣೆ ಮುಂದುವರೆದಿದೆ.
ಸಿಎಂಗೆ ಮನವಿ: ಕರ್ನಾಟಕ ಲೋಕ ಸೇವಾ ಆಯೋಗ ಅಕ್ರಮಗಳ ಕೂಪವಾಗಿದೆ. ಕೆಳ ಹಂತದ ಅಧಿಕಾರಿಗಳ ಬಂಧನದಿಂದ ಪ್ರಯೋಜನವಿಲ್ಲ. ಮೇಲಾಧಿಕಾರಿಗಳ ವಿಚಾರಣೆ ನಡೆಯಬೇಕು. ಉನ್ನತ ಅಧಿಕಾರಿಗಳು ಕೆಪಿಎಸ್ ಸಿ ಪ್ರಶ್ನೆ ಪತ್ರಿಕೆ ಲೀಕ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಆರೋಪಿಸಿದ್ದಾರೆ. ಕೆಪಿಎಸ್ ಸಿ ಹಿರಿಯ ಅಧಿಕಾರಿಗಳ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿಗೆ ಮನವಿ ನೀಡಿದ್ದಾರೆ.
Recommended Video
ಚಂದ್ರು ಡೀಲ್ ಕುದುರಿಸಿದ್ದ: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಚಂದ್ರುಗೆ ಮೊದಲಿನಿಂದಲೂ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಸಂಪರ್ಕವಿತ್ತು. ಹೀಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಅದನ್ನು ರಮೇಶ್ ಚಂದ್ರುಗೆ ನೀಡಿದ್ದ. ಚಂದ್ರು ತನ್ನ ಸಂಪರ್ಕ ಬಳಿಸಿ ಹಲವರಿಗೆ ಪ್ರಶ್ನೆ ಪತ್ರಿಕೆ ಆಃಗೂ ಉತ್ತರಗಳನ್ನು ನೀಡಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದ. ಈ ಕುರಿತು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚಂದ್ರು ಹಾಗೂ ರಾಚಪ್ಪನನ್ನು ಬಂಧಿಸಿದ್ದರು. ಅವರ ಕರೆಗಳ ಮಾಹಿತಿ ಆಧರಿಸಿ ಹದಿನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ 35 ಲಕ್ಷ ರೂಪಾಯಿ ಹಣ ವಶಪಡಿಸಿಕೊಂಡಿದ್ದರು. ತನಿಖೆ ಮುಂದುವರೆಸಿದಾಗ ಪ್ರಶ್ನೆ ಪತ್ರಿಕೆಯ ಲೀಕ್ ಆಗಿರುವುದು ಕೆಪಿಎಸ್ ಸಿ ಹೆಬ್ಬಾಗಿಲಿನಿಂದಲೇ ಎಂಬ ಸಂಗತಿ ಹೊರ ಬಿದ್ದಿದ್ದು ಆಯೋಗ ನಡೆಸಿರುವ , ನಡೆಸಲಿರುವ ಪರೀಕ್ಷೆಗಳ ಬಗ್ಗೆ ಸಂಶಯದಿಂದ ನೋಡುವಂತಾಗಿದೆ.