ಅಂಕ ಪಟ್ಟಿ ಅಡವಿಟ್ಟುಕೊಂಡು ಪ್ರಶ್ನೆ ಪತ್ರಿಕೆ ನೀಡಿದ್ದ ಕಿರಾತರು !
ಬೆಂಗಳೂರು, ಜನವರಿ 29: ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಿಸಿಬಿ ತನಿಖೆಯಲ್ಲಿ ಸ್ಪೋಟಕ ಸಂಗತಿಗಳು ಹೊರ ಬಿದ್ದಿವೆ. ಹಣ ಕೊಡದ ಅಭ್ಯರ್ಥಿಗಳಿಂದ ಖಾಲಿ ಚೆಕ್ ಹಾಗೂ ಎಸ್ ಎಸ್ಎಲ್ ಸಿ ಮತ್ತು ಪಿಯುಸಿ ಅಸಲಿ ಅಂಕಪಟ್ಟಿಗಳ್ನು ತೆಗೆದುಕೊಂಡು ಆರೋಪಿಗಳು ತಮ್ಮ ಬಳಿ ಇಟ್ಟುಕೊಂಡಿದ್ದರು ! ಮಾತ್ರವಲ್ಲ, ಪರೀಕ್ಷೆ ಬರೆದ ಬಳಿಕವೂ ಹಣ ಕೊಡಲು ಅವಕಾಶ ನೀಡಿದ್ದರು!
ಎಫ್ಡಿಎ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಡೆಸಿದ ತನಿಖೆ ವೇಳೆ ಆರೋಪಿಗಳಿಂದ ಹೊರ ಬಿದ್ದಿರುವ ಸತ್ಯಗಳಿವು. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅದರ ಲಾಭ ಪಡೆದವರ ಪೈಕಿ ಈವರೆಗೂ 24 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಪ್ರಮುಖ ಆರೋಪಿ ರಾಚಪ್ಪನನ್ನು ಮತ್ತೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಸನಾ ಬೇಡಿಯಿಂದ ಪ್ರಶ್ನೆ ಪತ್ರಿಕೆ ಲೀಕ್ ಬಳಿಕ ಅದು ಚಂದ್ರು ಕೈ ಸೇರಿತ್ತು. ರಾಚಪ್ಪ ಮತ್ತು ಇತರರು ಕಮೀಷನ್ ಅಸೆಗಾಗಿ ವಿದ್ಯಾರ್ಥಿಗಳಿಂದ ತಲಾ ಹತ್ತು ಲಕ್ಷ ರೂ. ನಂತೆ ಡೀಲ್ ಕುದುರಿಸಿದ್ದ. ಚಂದ್ರುಗೆ ಐದು ಲಕ್ಷ ರೂಪಾಯಿ ನೀಡಿ ಬಾಕಿ ಐದು ಲಕ್ಷ ರೂ. ತಾನೇ ಜೇಬಿಗೆ ಇಳಿಸಿದ್ದ. ತನ್ನ ಪರಿಚಿತ ಐವರನ್ನು ಕರೆದು ಎಫ್ ಡಿಎ ಪ್ರಶ್ನೆ ಪತ್ರಿಕೆ ಡೀಲ್ ಕುದುರಿಸಿದ್ದ ಎಂಬ ಸಂಗತಿ ಬಯಲಾಗಿದೆ.
ಪ್ರಮುಖ ಆರೋಪಿ ಚಂದ್ರು ಬಳಿ ಪ್ರಶ್ನೆ ಪತ್ರಿಕೆ ನೀಡುವಂತೆ ಕೆಲವು ಅಭ್ಯರ್ಥಿಗಳು ಗೋಗರೆದಿದ್ದರು. ಕಾಲಾವಕಾಶ ಕೇಳಿದ್ದ ಅಭ್ಯರ್ಥಿಗಳಿಂದ ಒಂದೆರಡು ಲಕ್ಷ ಮುಂಗಡ ಪಡೆದು, ಅವರ ಅಸಲಿ ಅಂಕ ಪಟ್ಟಿಗಳನ್ನು ಪಡೆದುಕೊಂಡಿದ್ದ. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಹಣ ನೀಡದೇ ಕಾಲವಕಾಶ ಕೇಳಿದ್ದ ಅಭ್ಯರ್ಥಿಗಳ ಅಂಕ ಪಟ್ಟಿಗಳನ್ನು ಅಡವಿಟ್ಟುಕೊಂಡಿರುವ ಸಂಗತಿ ಬಾಯಿ ಬಿಟ್ಟಿದ್ದಾನೆ. ಚಂದ್ರು ನೀಡಿದ ಮಾಹಿತಿ ಮೇರೆಗೆ ಆತನ ಮನೆಯಲ್ಲಿದ್ದ ಚೆಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಐವರು ಅಭ್ಯರ್ಥಿಗಳಿಗೆ ಸಂಬಂಧಿಸಿದ ಅಂಕ ಪಟ್ಟಿಗಳನ್ನು ಸಹ ಜಪ್ತಿ ಮಾಡಿದ್ದಾರೆ.
ಉಳ್ಳಾಲ ಉಪಕಾರ್ ಬಡಾವಣೆಯಲ್ಲಿ ಪ್ಲಾಟ್ ಖರೀದಿಸಿದ್ದ ಚಂದ್ರು ಬಂದ ಹಣವನ್ನು ಪ್ಲಾಟ್ ಗೂ ವಿನಿಯೋಗಿಸಿದ್ದ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಬಗ್ಗೆ ತನಗೆ ಪರಿಚಿತ ಸನಾ ಬೇಡಿ ಜತೆ ಸೇರಿ ಮೊದಲೇ ಪ್ಲಾನ್ ರೂಪಿಸಿದ್ದರು. ಕೆಪಿಎಸ್ ಸಿ ಯಲ್ಲಿ ಪ್ರಶ್ನೆ ಪತ್ರಿಕೆ ಸಿಗುವುದು ಖಚಿತವಾಗುತ್ತಿದ್ದಂತೆ, ಚಂಧ್ರು ತನ್ನ ಪರಿಚಿತರ ಮೂಲಕ ಸರ್ಕಾರಿ ಹುದ್ದೆ ಆಕಾಂಕ್ಷಿಗಳನ್ನು ಸಂಪರ್ಕಿಸಿದ್ದ. ನಿಮಗೆ ಪ್ರಶ್ನೆ ಪತ್ರಿಕೆ ಎರಡು ದಿನ ಮುನ್ನ ಕೊಡುತ್ತೇವೆ. ಒಂದು ವೇಳೆ ಆಗದಿದ್ದ ಪಕ್ಷದಲ್ಲಿ ನನಗೆ ಉನ್ನತ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಸಂಪರ್ಕವಿದೆ. ಪಕ್ಕಾ ನಿಮ್ಮ ಕೆಲಸ ಮಾಡಿಸುವ ಜವಾಬ್ಧಾರಿ ನನ್ನದು ಎಂದು ಭರವಸೆ ತುಂಬಿದ್ದರು. ಚಂದ್ರು ಸರ್ಕಾರಿ ಹುದ್ದೆಯಲ್ಲಿದ್ದಿದ್ದರಿಂದ ಬಹುತೇಕರು ನಂಬುತ್ತಿದ್ದರು. ಸರ್ಕಾರಿ ಕೆಲಸವಿದ್ದರೂ ಅತಿಯಾಸೆಗೆ ಬಿದ್ದು ಚಂದ್ರು ಜೈಲು ಸೇರಿದ್ದಾನೆ.