ಕಾನೂನು ಶಿಕ್ಷಣ ಪಿತಾಮಹ ಮಾಧವ್ ಮೆನನ್ ನಿಧನ
ಬೆಂಗಳೂರು, ಮೇ 8: ಖ್ಯಾತ ಶಿಕ್ಷಣ ತಜ್ಞ ಹಾಗೂ ಭಾರತೀಯ ಆಧುನಿಕ ಕಾನೂನು ಶಿಕ್ಷಣದ ಪಿತಾಮಹ ಡಾ. ಎನ್ಆರ್ ಮಾಧವ್ ಮೆನನ್(84) ನಿಧರಾಗಿದ್ದಾರೆ.
ಬೆಂಗಳೂರಿನಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಆರಂಭಿಸಲು ಪ್ರಮುಖ ಕಾರಣರಾಗಿದ್ದ ಮಾಧವ್ ಮೆನನ್ ಐದು ವರ್ಷದ ಎಲ್ಎಲ್ಬಿ ಕೋರ್ಸ್ನ್ನು ಆರಂಭಿಸಿದ ವ್ಯಕ್ತಿಯಾಗಿದ್ದಾರೆ.
1935ರಲ್ಲಿ ಕೇರಳದಲ್ಲಿ ಜನಿಸಿದ ಮೆನನ್ ಬಿಎಸ್ಸಿ ಹಾಗೂ ಬಿಎಲ್ ಪದವಿಯನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದಿದ್ದರು. ಎಲ್ಎಲ್ಎಂ ಹಾಗೂ ಪಿಎಚ್ಡಿ ಪದವಿಯನ್ನು ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಎಂಎ ಪದವಿಯನ್ನು ಪಂಜಾಬ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.
ಕೇರಳ ಹೈಕೋರ್ಟ್ಗೆ 1956ರಲ್ಲಿ ವಕೀಲರಾಗಿ ನೋಂದಣಿಯಾದ ಅವರು, 1960ರಲ್ಲಿ ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ಸೇರಿಕೊಂಡರು.
ನಂತರದ ದಿನಗಳಲ್ಲಿ ವಕೀಲ ವೃತ್ತಿ ಬದಲು ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಆಸಕ್ತಿ ತೋರಿದರು. ಪರಿಣಾಮವಾಗಿ ಬೆಂಗಳೂರಿನಲ್ಲಿ ನ್ಯಾಷನಲ್ ಲಾ ಸ್ಕೂಲ್ ಆರಂಭಿಸುವಂತೆ ಮಾಧವ್ ಮೆನನ್ ಗೆ ಬಾರ್ ಕೌನ್ಸಿಲ್ ಮನವಿ ಮಾಡಿತು.
ಹೀಗಾಗಿ ಬೆಂಗಳೂರಿನಲ್ಲಿ ನ್ಯಾಷನಲ್ ಲಾ ಸ್ಕೂಲ್ ಆರಂಭಿಸಿ ಮೊದಲ 12 ರ್ಷಗಳ ಕಾಲ ಸಂಸ್ಥಾಪಕ ಕುಲಪತಿಗಳಾಗಿ ಮೆನನ್ ಕೆಲಸ ನಿರ್ವಹಿಸಿದರು. ಭಾರತದ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಕ ಕ್ರಮವಾಗಿದೆ.
ಬಳಿಕ ಪಶ್ಚಿಮ ಬಂಗಾಳ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೂ ಕುಲಪತಿಯಾಗಿ ಅವರು ಸೇವೆ ಸಲ್ಲಿಸಿದರು. ರಾಷ್ಟ್ರೀಯ ಕಾನೂನು ಆಯೋಗಕ್ಕೆ ಎರಡು ಬಾರಿ ಸದಸ್ಯರಾಗಿದ್ದ ಮೆನನ್ ಗೆ 2003ರಲ್ಲಿ ಪದ್ಮಶ್ರೀ ಪುರಸ್ಕಾರ ಲಭ್ಯವಾಗಿದೆ.