ಬೆಂಗಳೂರು: ನ.26ರಿಂದ ದೆಹಲಿ 'ಸಿಂಘು' ಗಡಿಯಲ್ಲಿ ಮತ್ತೆ 'ರೈತರ ಹೋರಾಟ' ಆರಂಭ: ಬೇಡಿಕೆ ಈಡೇರಿಕೆಗೆ ಆಗ್ರಹ
ಬೆಂಗಳೂರು, ಸೆಪ್ಟಂಬರ್ 26: ಕನಿಷ್ಠ ಬೆಂಬಲ ಬೆಲೆ ಖಾತರಿ ಸಂಬಂಧ ರಚಿನೆಯಾದ ಸಮಿತಿಯಲ್ಲಿ ರೈತ ಮುಖಂಡರನ್ನು ಹೊರಗಿಟ್ಟ ಕೇಂದ್ರ ಸರ್ಕಾರದ ನಡೆ ವಿರುದ್ಧ ಹಾಗೂ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನವೆಂಬರ್ 26ರಿಂದ ದೆಹಲಿಯ ಸಿಂಘು ಗಡಿಯಲ್ಲಿ ಮತ್ತೆ ಹೋರಾಟ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ರೈತ ಮುಖಂಡರ ನೇತೃತ್ವದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಮುಂಖಡರು ಈ ನಿರ್ಧಾರ ಕೈಗೊಂಡರು.
ಸೆ.26ರಂದು 'ವಿಧಾನಸೌಧ ಚಲೋ' ನಡೆಸಲಿರುವ ಸಂಯುಕ್ತ ಕಿಸಾನ್ ಮೋರ್ಚಾ
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಸಭೆಯಲ್ಲಿ ಒಕ್ಕೋರಲಿನಿಂದ ಕೈಗೊಳ್ಳಲಾದ ನಿರ್ಣಯಗಳನ್ನು ತಿಳಿಸಿದರು. ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಲು ರಚಿತವಾದ 'ಸರ್ಕಾರದ ಕೃಪಾಪೋಷಿತ ಸಮಿತಿ'ಯಲ್ಲಿ ಕೇಂದ್ರ ರೈತ ಮುಖಂಡರಿಗೆ ಸ್ಥಾನ ನೀಡದೇ ಕಡೆಗಣಿಸಿದೆ. ಸಮಿತಿ ರಚಿಸಿ ಕಣ್ಣೊರೆಸುವ ನಾಟಕವಾಡುತ್ತಿರುವ ಕೇಂದ್ರದ ನಡೆ ವಿರುದ್ಧ ದೆಹಲಿಯಲ್ಲಿ ಮುಂದಿನ ನವೆಂಬರ್ 26ರಿಂದ ಹೋರಾಟ ನಡೆಸಲಿದ್ದೇವೆ ಎಂದು ಅವರು ಹೇಳಿದರು.
ಬೇಡಿಕೆ ಈಡೇರಿಕೆಗಾಗಿ ರೈತರ ಹೋರಾಟ
ರೈತರ ಹಿತ ದೃಷ್ಟಿಯಿಂದ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿ ಮಾಡಬೇಕು. ವಿದ್ಯುತ್ ಕಾಯ್ದೆ (2022) ಖಾಸಗಿಕರಣ ತಿದ್ದುಪಡಿ ಕೈಬಿಡುವುದು, ಕಬ್ಬಿನ ಎಫ್ಆರ್ಪಿ ದರ ಪುನರ್ ಪರಿಶೀಲನೆ ನಡೆಸಿ ವೈಜ್ಞಾನಿಕ ದರ ನಿಗದಿ, ಕೃಷಿ ಉತ್ಪನ್ನ ಹಾಗೂ ಉಪಕರಣಗಳ ಮೇಲಿನ ಜಿಎಸ್ಟಿ ರದ್ದುಗೊಳಿಸಬೇಕು. ರೈತರ ಸಾಲಮನ್ನಾ ಹಾಗೂ ಬೆಳೆ ವಿಮೆ ಯೋಜನೆಯ ಮಾನದಂಡದಲ್ಲಿ ಬದಲಾವಣೆ ತರುವುದು ಸೇರಿದಂತೆ ರೈತರ ಎಲ್ಲ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರು ಹೋರಾಟ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು.
ಮೊಕದ್ದಮೆ ವಾಪಸ್ಗೆ ಆಗ್ರಹ
ಕೇಂದ್ರ ಸರ್ಕಾರ ದೆಹಲಿ ಹೋರಾಟದ ಸಂದರ್ಭದಲ್ಲಿ ಮಡಿದ ರೈತರಿಗೆ ನೀಡಿದ ಭರವಸೆಯಂತೆ ಪರಿಹಾರ ನೀಡಬೇಕು. ರೈತರ ಮೇಲೆ ದಾಖಲಾಗಿದ ವಿವಿಧ ಮೊಕದ್ದಮೆ ಹಿಂಪಡೆಯಲು ಆದೇಶಿಸಬೇಕು. ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ರೈತರ ಮುಖಂಡರು ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ದುಂಡು ಮೇಜಿನ ಸಭೆಯಲ್ಲಿ ಪಂಜಾಬ್ನ ಜಗಜೀತಸಿಂಗ್ ದಲೇವಾಲ, ಮಧ್ಯ ಪ್ರದೇಶದ ಶಿವಕುಮಾರ ಕಕ್ಕಾಜಿ, ಹರಿಯಾಣದ ಅಭಿಮನ್ಯು ಕೊಹಾರ, ತಮಿಳುನಾಡಿನ ದೈವಸಿಗಾಮಣಿ, ಕೇರಳದ ಕೆ.ವಿ.ಬಿಜು, ಕರ್ನಾಟಕ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ, ತಮಿಳುನಾಡಿನ ರಾಮನ ಗೌಂಡರ್, ಉತ್ತರ ಪ್ರದೇಶದ ಸೇವಾಸಿಂಗ್, ಮಹಾರಾಷ್ಟ್ರದ ಶಂಕರ ದರೀಕರ್, ಗುಜರಾತ್ ನ ಜೆ.ಕೆ.ಪಟೇಲ್, ಒರಿಸ್ಸಾದ ಸಚಿನ್ ಮಹಾಪಾತ್ರ ಸೇರಿದಂತೆ ವಿವಿಧ ರಾಜ್ಯಗಳ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.