ರೈತರ ಜಾಥಾ: ಟ್ರಾಕ್ಟರ್ ನಂಬರ್ ಸಂಗ್ರಹಿಸುತ್ತಿರುವ ಪೊಲೀಸರು
ಬೆಂಗಳೂರು, ಜನವರಿ 26: ಕೃಷಿ ಮಸೂದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಜಾಥಾ ಹಮ್ಮಿಕೊಂಡಿರುವ ರೈತರ ಟ್ರ್ಯಾಕ್ಟರ್ ಗಳ ನಂಬರ್ ಗಳನ್ನು ಪೊಲೀಸರು ಸಂಗ್ರಹ ಮಾಡುತ್ತಿದ್ದಾರೆ. ಬೆಂಗಳೂರಿನ ರೈತರ ಜಾಥಾದಲ್ಲಿ 125 ಟ್ರಾಕ್ಟರ್ ಗಳು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಹೀಗಾಗಿ ವಿವಿಧ ಮಾರ್ಗಗಳಿಂದ ಬರುತ್ತಿರುವ ಟ್ರಾಕ್ಟರ್ ಗಳ ನಂಬರ್ ಗಳನ್ನು ಪೊಲೀಸರು ಸಂಗ್ರಹ ಮಾಡುತ್ತಿದ್ದು, ಹೆಚ್ಚುವರಿಯಾಗಿರುವ ಬರುವ ಟ್ರ್ಯಾಕ್ಟರ್ ಗಳನ್ನು ತಡೆಯಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅನುಮತಿ ನೀಡಿರುವ ಟ್ರಾಕ್ಟರ್ ಗಳಿಗೆ ಹೊಯ್ಸಳ ವಾಹನ ಮೂಲಕವೇ ಮಾರ್ಗ ತೋರಿಸಲಾಗುತ್ತದೆ. ಸೂಚಿಸಿದ ಮಾರ್ಗದಲ್ಲಿ ಟ್ರಾಕ್ಟರ್ ಗಳು ಸಂಚರಿಸಬೇಕು. ಈ ಮೂಲಕ ಬೆಂಗಳೂರಿನ ಸಂಚಾರ ಸಮಸ್ಯೆ ಉದ್ಭವವಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ರೈಲ್ವೆ ನಿಲ್ದಾಣದ ಮೂಲಕ ಫ್ರೀಡಂ ಪಾರ್ಕ್ ನತ್ತ ರೈತರು
ಆದರೆ ಬೆಂಗಳೂರಿನ ಏಳು ಮಾರ್ಗಗಳಿಂದ ರೈತರು ವಿವಿಧ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ಹೀಗಾಗಿ ಅವರನ್ನು ತಡೆಯಲು ಪೊಲೀಸರಿಗೆ ಆಗುತ್ತಿಲ್ಲ. ಈಗಾಗಲೇ ನೂರಾರು ರೈತರು ಸ್ವಾತಂತ್ರ್ಯ ಉದ್ಯಾನವನ ಬಳಿ ಜಮಾಯಿಸಿದ್ದಾರೆ. ಕೆಲವೇ ತಾಸಿನಲ್ಲಿ ನೂರಾರು ಟ್ರಾಕ್ಟರ್ ಗಳು, ರೈತರಿಗೆ ಬೆಂಬಲ ನೀಡಿರುವ ವಿದ್ಯಾರ್ಥಿ, ದಲಿತ ಸಂಘಟನೆ ಕಾರ್ಯಕರ್ತರು ಕೂಡ ಪಾಲ್ಗೊಳ್ಳಲಿದ್ದಾರೆ.
ರೈತರ ಜಮಾವಣೆ: ಇನ್ನು ಮೈಸೂರು ರಸ್ತೆಯ ಬೈರಮಂಗಲ ಕ್ರಾಸ್ ಸಮೀಪ ಸಾವಿರಾರು ರೈತರು ಜಮಾವಣೆಯಾಗಿದ್ದಾರೆ. ಚಾಮರಾಜನಗರ, ಮೈಸೂರು, ಮಂಡ್ಯದಿಂದ ಬಂದಿರುವ ರೈತರು ಸೇರಿದ್ದು, ಜಾಥಾ ಮೂಲಕ ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಲಿವೆ. ಎಲ್ಲಾ ಕಡೆ ರೈತರ ಟ್ರಾಕ್ಟರ್ ಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಪೊಲೀಸರ ಗೊಡ್ಡು ಬೆದರಿಕೆಗಳಿಗೆ ರೈತರು ಹೆದರುವುದಿಲ್ಲ. ಸ್ವಾತಂತ್ರ್ಯ ಉದ್ಯಾನವನ ಬಳಿ ರಾಷ್ಟ್ರಧ್ವಜ ಹಾರಿಸಿದ ಬಳಿಕ ಮುಂದಿನ ಹೋರಾಟದ ರೂಪರೇಷೆಗಳನ್ನು ಕೈಗೊಳ್ಳುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
Recommended Video