ಮಾಸಲು ಬಟ್ಟೆಯ ರೈತರಿಗೆ ತೆರೆಯುವುದೇ ರಾಜಭವನದ ಭವ್ಯ ಗೇಟು?
ಬೆಂಗಳೂರು, ಅಕ್ಟೋಬರ್ 19: 'ಮಳೆ-ಗಾಳಿ, ಚಳಿ-ಬಿಸಿಲು ಕತ್ತಲ-ಹಗಲಾ ಎಣಿಸ್ದೆ ಇಲ್ಲೇ ಕುಂತೀವಿ, ನಮಗೇನು ಇದು ಹಕೀಕತ್ತಾಗೇತೇನು?, ನಮಗಾಗಿ, ನಮ್ಮ ಜನರಿಗಾಗಿ ಅಲ್ಲೇನು ನಾವು ಕುಂತೀರೋದು' ರಾತ್ರಿಯೆಲ್ಲಾ ಮಳೆಯಲ್ಲಿ ನೆನೆಯುತ್ತಾ ಧರಣಿ ಕೂತಿದ್ದ ವೃದ್ಧ ರೈತ ಮಹಿಳೆ ಆಕ್ರೋಶ ಭರಿತ ಮಾತುಗಳು ಇವು.
ಉತ್ತರ ಕರ್ನಾಟಕದಿಂದ ರೈತರು ಬೆಂಗಳೂರಿಗೆ ಬಂದು ಇಂದಿಗೆ ನಾಲ್ಕು ದಿನವಾಯ್ತು, ಅವರನ್ನು ರೈಲ್ವೆ ನಿಲ್ದಾಣದಲ್ಲಿಯೇ ತಡೆ ಹಿಡಿಯಲಾಗಿದೆ. ನೂರಾರು ಸಂಖ್ಯೆಯಲ್ಲಿರುವ ರೈತರು ರೈಲ್ವೆ ನಿಲ್ದಾಣದಲ್ಲಿಯೇ ಪ್ರತಿಭಟನೆ ಶುರುಹಚ್ಚಿಕೊಂಡಿದ್ದಾರೆ. ಚಳಿ-ಮಳೆ ಎನ್ನದೆ ರೈಲ್ವೆ ನಿಲ್ದಾಣದ ಮುಂದೆಯೇ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಹಲವರು ಅಸ್ವಸ್ಥಗೊಂಡಿದ್ದಾರೆ. ಆದರೆ ಸರ್ಕಾರದ ಯಾವೊಬ್ಬ ಸಚಿವರೂ ರೈತರತ್ತ ಕಣ್ಣೆತ್ತಿಯೂ ನೋಡಿಲ್ಲ.
ಲಕ್ಷ್ಮಣ ಸವದಿಗೆ ಪರಿಹಾರ ಕೊಡಲು ಭಿಕ್ಷೆ ಎತ್ತಿದ ರೈತರು!
ರೈತ ಹೋರಾಟಗಾರ ವೀರೇಶ್ ಸೊಬರದಮಠ ನೇತೃತ್ವದಲ್ಲಿ ರೈತರು ಬೆಂಗಳೂರಿಗೆ ಬಂದಿದ್ದಾರೆ. 16 ನೇ ತಾರೀಖು ಹುಬ್ಬಳ್ಳಿ ಇಂದ ಹೊರಟು ಬೆಂಗಳೂರಿಗೆ ಬಂದಿರುವ ರೈತರನ್ನು ರೈಲ್ವೆ ನಿಲ್ದಾಣದಲ್ಲಿ ತಡೆಯಲಾಗಿದೆ. ಅವರನ್ನು ಮರಳಿ ಕಳಿಸುವ ಪ್ರಯತ್ನವೂ ಮಾಡಲಾಗಿದೆ ಆದರೆ ಅದಕ್ಕೆ ಜಗ್ಗದ ರೈತರು ರೈಲ್ವೆ ನಿಲ್ದಾಣದ ಮುಂದೆಯೇ ಧರಣಿ ಕೂತಿದ್ದಾರೆ.
ಗೆಜೆಟ್ ನೋಟಿಫಿಕೇಶನ್ಗೆ ಒತ್ತಾಯಿಸಿ ಪ್ರತಿಭಟನೆ
ಮಹದಾಯಿ ನೀರು ಹಂಚಿಕೆ ಕುರಿತಂತೆ ನ್ಯಾಯಾಧಿಕರಣ ತೀರ್ಪನಿ ಗೆಜೆಟ್ ನೋಟಿಫಿಕೇಶನ್ ಅನ್ನು ಅತಿ ಶೀಘ್ರವಾಗಿ ಹೊರಡಿಸುವಂತೆ ಒತ್ತಾಯಿಸಲೆಂದು ರೈತರು ಬೆಂಗಳೂರಿಗೆ ಬಂದಿದ್ದಾರೆ. ಆಗಸ್ಟ್ ಎರಡನೇ ವಾರದಲ್ಲಿ ಮಹದಾಯಿ ನ್ಯಾಯಾಧಿಕರಣ ತೀರ್ಪು ಬಂದಿದೆ. ಆದರೆ ಅದನ್ನು ಇಲ್ಲಿಯವರೆಗೆ ಗೆಜೆಟ್ ನೋಟಿಫಿಕೇಶನ್ನಲ್ಲಿ ತಂದು ಅದನ್ನು ಅಧಿಕೃತ ಆದೇಶವನ್ನಾಗಿ ಬದಲಾಯಿಸಲಾಗಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಚಳಿ-ಮಳೆ ಲೆಕ್ಕಿಸದೆ ರಸ್ತೆಯಲ್ಲೇ ಮಲಗುತ್ತಿರುವ ರೈತರು
ಕಳೆದ ನಾಲ್ಕು ದಿನದಿಂದಲೂ ರೈತರು ರಸ್ತೆಗಳಲ್ಲಿ ಮಲಗುತ್ತಿದ್ದಾರೆ. ಸುರಿಯುತ್ತಿರುವ ಮಳೆ, ಗಳಿಗೆಗೊಮ್ಮೆ ಬದಲಾಗುತ್ತಿರುವ ಬೆಂಗಳೂರಿನ ಚಂಚಲ ವಾತಾವರಣಕ್ಕೆ ಮೈಯೊಡ್ಡಿ ಸರ್ಕಾರ ಕೃಪಾ ಕಟಾಕ್ಷಕ್ಕೆ ಕಾಯುತ್ತಿದ್ದಾರೆ. ಅವರ ಮೈಮೇಲನ ಹಸಿರು ಶಾಲೊಂದೆ ಅವರನ್ನು ಎಲ್ಲದರಿಂದಲೂ ರಕ್ಷಿಸುತ್ತಿದೆ! ಚಳಿಯಾದರೆ ಭುಜದ ಸುತ್ತಾ ಸುತ್ತಿಕೊಳ್ಳುತ್ತಾರೆ, ಬಿಸಿಲು-ಮಳೆಯಾದರೆ ತಲೆಯ ಮೇಲೆ ಹೊದ್ದುಕೊಳ್ಳುತ್ತಾರೆ.
ರೈತರು ಕೇಳಿದಷ್ಟು ಪರಿಹಾರ ಕೊಡಲು ಆಗದು: ಡಿಸಿಎಂ ಲಕ್ಷ್ಮಣ ಸವದಿ
ಅಂತಿಮ ಹೋರಾಟಕ್ಕೆ ಮನಸ್ಸು ಮಾಡಿರುವ ರೈತರು
ಇಂದು ಅಂತಿಮ ಹಂತದ ಹೋರಾಟಕ್ಕೆ ರೈತರು ಮನಸ್ಸು ಮಾಡಿದ್ದಾರೆ. ಇಂದು 11 ಗಂಟೆ ಒಳಗಾಗಿ ರೈತರಿಗೆ ರಾಜ್ಯಪಾಲದ ಭೇಟಿಗೆ ಅವಕಾಶ ಕೊಡದಿದ್ದರೆ 11 ಗಂಟೆ ನಂತರ ಒಂದು ಅಗುಳೂ ಆಹಾರ ಸೇವಿಸುವುದಿಲ್ಲವೆಂದು ಅನ್ನದಾತರು ನಿಶ್ಚಯಿಸಿದ್ದಾರೆ. ಲೋಕಕೆ ಅನ್ನ ನೀಡುವವರು ತಮ್ಮ ಭವಿಷ್ಯದ ಅನ್ನಕ್ಕಾಗಿ ಉಪವಾಸ ಮಾಡಲಿದ್ದಾರೆ.
ತೆರೆಯುವದೇ ರಾಜಭವನದ ದೊಡ್ಡ ಗೇಟು
ರಾಜ್ಯಪಾಲರ ನಿವಾಸ ರಾಜಭವನದ ದೊಡ್ಡ ಗೇಟು, ಮಾಸಲು ಅಂಗಿ-ಸೀರೆಯ ರೈತರಿಗೆ ತೆರೆಯುತ್ತದೆಯೇ? ಉಪವಾಸ ಕೂರುತ್ತೇವೆಂಬ ಶಾಂತಿಯುತ ಬೆದರಿಕೆ, ಕರುಳು ರಹಿತ ಸರ್ಕಾರಕ್ಕೆ ಕರುಣೆ ಉಕ್ಕಿಸಬಲ್ಲುದೆ? ಕಾದುನೋಡಬೇಕಿದೆ.