ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ದಿನವೇ ರೈತರ ರಣ ಹೋರಾಟ!
ಬೆಂಗಳೂರು, ಜನವರಿ 25: ರೈತರು ಟ್ರ್ಯಾಕ್ಟರ್ ಮಹಾ ಹೋರಾಟಕ್ಕೆ ಅಣಿಯಾಗುತ್ತಿದ್ದಂತೆ ಬೆಂಗಳೂರು ಪೊಲೀಸರೇ ಗಾಬರಿಯಾಗಿದ್ದಾರೆ. ಕಾಲ್ನಡಿಗೆ ಜಾಥಾ, ಉಪವಾಸ ಸತ್ಯಾಗ್ರಹ ನಿಗ್ರಹಿಸಲು ಪೊಲೀಸರ ಲಾಠಿ ಸಾಕಿತ್ತು ! ಆದ್ರೆ ಈಗ ರಾಜ್ಯದ ಎಲ್ಲಾ ಕಡೆಯಿಂದ ಅನೆ ಮಾದರಿಯ ದೈತ್ಯ ಟ್ರಾಕ್ಟರ್ ಗಳು ರಸ್ತೆಗೆ ಇಳಿಯಲಿವೆ. ಇವನ್ನು ನಿಯಂತ್ರಿಸಲು ಪೊಲೀಸರಿಂದ ಯಾವ ಅಸ್ತ್ರವೂ ಇಲ್ಲ ! ಬ್ಯಾರೀಕೇಡ್, ಟೋಲ್, ಲಾಠಿ ಯಾವುವೂ ಟ್ರ್ಯಾಕ್ಟರ್ ಗಳಿಗೆ ಲೆಕ್ಕವಿಲ್ಲ ! ಇನ್ನು ಬಿಎಂಟಿಸಿ ಬಸ್ ನೊಳಗೆ ಕರೆದೊಯ್ದು ಮೈದಾನದಲ್ಲಿ ಬಿಡಲು ಸಾಧ್ಯವೇ?
ಒಂದಡೆ ಗಣರಾಜ್ಯೋತ್ಸವ ದಿನದ ಭದ್ರತೆಯ ಹೊಣೆ. ಮತ್ತೊಂದಡೆ ರೈತರ ಮಹಾ ಹೋರಾಟ. ಈ ಭಾರಿಯ ಗಣರಾಜ್ಯೋತ್ಸವ ದಿನ ಬೆಂಗಳೂರು ರೈತರ ಹೋರಾಟ ಕೇಂದ್ರವಾಗಿ ಬದಲಾಗಲಿದೆ. ರಾಜ್ಯ ರಾಜಧಾನಿ ಮಂಗಳವಾರ ಸಂಪೂರ್ಣ ಸ್ಥಗಿತಗೊಳ್ಳುವ ಲಕ್ಷಣ ಗೋಚರಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ಮೂಲಕ ರಾಜಧಾನಿಗೆ ಎಂಟ್ರಿ ಕೋಡಲು ರೈತರ ಸಾವಿರಾರು ಟ್ರ್ಯಾಕ್ಟರ್ ಗಳ ಸಜ್ಜಾಗಿವೆ. ಮಾಗಡಿ ರಸ್ತೆ ಮೈಸೂರು ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ, ಏರ್ಪೋರ್ಟ್ ರಸ್ತೆ ಹಾಗೂ ಹಳೇ ಮದ್ರಾಸು ರಸ್ತೆಯಿಂದ ಸಾವಿರಾರು ಟ್ರಾಕ್ಟರ್ ಗಳ ಮೂಲಕ ರೈತರು ಹೋರಾಟ ಆರಂಭಿಸಲು ತಯಾರಿ ನಡೆಸಿದ್ದಾರೆ. ಕೆಲ ದಶಕಗಳ ನಂತರ ಇಂತದ್ದೊಂದು ಹೋರಾಟಕ್ಕೆ ರಾಜ್ಯ ಅಣಿಯಾಗುತ್ತಿದೆ.
ಟ್ರ್ಯಾಕ್ಟರ್ ಮೆರವಣಿಗೆ: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಅಲರ್ಟ್
ಕೃಷಿ ಮಸೂದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧನಿಯಲ್ಲಿ ರೈತರು ಟ್ರ್ಯಾಕ್ಟರ್ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೋರಾಟದ ಬಿಸಿ ಜೋರಾಗಿದೆ. ಬೆಂಗಳೂರು ನಗರಕ್ಕೆ ಕೇವಲ ಒಂದು ಸಾವಿರ ಟ್ರ್ಯಾಕ್ಟರ್ ಎಂಟ್ರಿ ಕೊಟ್ಟರು ಸಂಚಾರ ನೀತಿ ಸ್ಥಬ್ಧವಾಗಲಿದೆ. ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಟ್ರಾಕ್ಟರ್ ಗಳು ಬಿದಿಗೆ ಇಳಿಯಲು ಸಜ್ಜಾಗಿರುವುದು ಪೊಲೀಸರಿಗೆ ತಲೆನೋವು ಉಂಟು ಮಾಡಿದೆ.
ಅನುಮತಿ ಇಲ್ಲ ಎಂದ ಆಯುಕ್ತರು: ಇನ್ನು ರೈತರ ಟ್ರ್ಯಾಕ್ಟರ್ ಹೋರಾಟದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಬಂದೋಬಸ್ತ್ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಎರಡು ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲು ತೀರ್ಮಾನಿಸಿದ್ದಾರೆ. ಇನ್ನು ಪರಿಸ್ಥಿತಿ ಅವಲೋಕಿಸಿ ನಿಷೇಧಾಜ್ಞೆ ಜಾರಿಗೊಳಿಸಿದರೂ ಅಚ್ಚರಿ ಪಡಬೇಕಿಲ್ಲ. ರೈತರ ಟ್ರ್ಯಾಕ್ಟರ್ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು, ಟ್ರ್ಯಾಕ್ಟರ್ ಜಾಥಾಗೆ ಯಾರೂ ಅನುಮತಿ ಕೇಳಿಲ್ಲ. ನಾವು ಕೊಟ್ಟೂ ಇಲ್ಲ. ಅನುಮತಿ ಕೇಳದೇ ಕೊಡಲಿಕ್ಕೆ ಬರುವುದಿಲ್ಲ. ಕೇವಲ ಪ್ರತಿಭಟನೆಗೆ ಅನುಮತಿ ಕೇಳಿದ್ದಾರೆ. ಅದಕ್ಕೆ ಷರತ್ತುಬದ್ಧ ಅವಕಾಶ ನೀಡಿದ್ದೇವೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಟ್ರ್ಯಾಕ್ಟರ್ ಮೆರವಣಿಗೆ: ರೈತರಿಗೆ ಡೀಸೆಲ್ ನೀಡದಂತೆ ಪೊಲೀಸರ ಸೂಚನೆ
ಮನವೊಲಿಕೆಗೆ ಯತ್ನ: ಇನ್ನು ರೈತರು ಟ್ರ್ಯಾಕ್ಟರ್ ಜಾಥಾ ಹೋರಾಟ ನಡೆಸದಂತೆ ಮನವೊಲಿಸಲು ಆಯಾ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ರೈತ ಮುಖಂಡರನ್ನು ಸಂಪರ್ಕಿಸಿ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಟ್ರ್ಯಾಕ್ಟರ್ ಬದಲಿಗೆ ಖಾಸಗಿ ವಾಹನ ಮತ್ತು ಬೈಕ್ ಬಳಸಲು ರೈತರಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಟ್ರಾಕ್ಟರ್ ಗಳು ಬೆಂಗಳೂರಿನ ಬೀದಿಗೆ ಇಳಿದರೆ ಪರಿಸ್ಥಿತಿ ಏನಾಗಬಹುದು ಎಂಬುದರ ಬಗ್ಗೆ ಪೊಲೀಸರು ರೈತ ಮುಖಂಡರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ರೈತ ಮುಖಂಡರು, ರೈತರು ಒಪ್ಪಿಲ್ಲ. ಹೀಗಾಗಿ ಪರಿಸ್ಥಿತಿ ಅವಲೋಕಿಸಿ ಸಂಜೆ ವೇಳೆಗೆ ರೈತರ ಹೋರಾಟಕ್ಕೆ ಕಡಿವಾಣ ಹಾಕುವ ಕೆಲವು ಆದೇಶಗಳು ಹೊರ ಬೀಳಬಹುದು ಎಂದೇ ಹೇಳಲಾಗುತ್ತಿದೆ.
Recommended Video