ರೈಲ್ವೆ ನಿಲ್ದಾಣದ ಮೂಲಕ ಫ್ರೀಡಂ ಪಾರ್ಕ್ ನತ್ತ ರೈತರು
ಬೆಂಗಳೂರು ಜನವರಿ 26: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಕೈಗೊಂಡಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಕೈಗೊಂಡಿರುವ ರೈತರ ಟ್ರ್ಯಾಕ್ಟರ್ ಜಾಥಾಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜಧಾನಿಯ ಸಪ್ತ ದಿಕ್ಕಿನಿಂದಲೂ ರೈತರು, ರೈತ ಮಹಿಳೆಯರು, ದಲಿತ ಪರ ಸಂಘಟನೆಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.
ಹೊಸಕೋಟೆಯ ಬಳಿ ರೈತರ ಟ್ರಾಕ್ಟರ್ ಗಳಿಗೆ ತಡೆಯೊಡ್ಡಿದ್ದಾರೆ. ಪೊಲೀಸರ ಕ್ರಮ ಖಂಡಿಸಿ ರೈತರು ಘೋಷಣೆಗಳನ್ನು ಕೂಗಿದರು. ಹೊಸಕೋಟೆ ಟೋಲ್ ಬಳಿ ನೂರಾರು ರೈತರು ಜಮಾವಣೆಯಾಗಿದ್ದಾರೆ. ರೈತರು ಮಾರುಕಟ್ಟೆಗೆಂದು ತಂದಿದ್ದ ತರಕಾರಿ ಬೆಳೆಗಳನ್ನು ಬೆಂಗಳೂರಿಗೆ ರವಾನಿಸಲು ಅವಕಾಶ ನೀಡದೇ ವಾಪಸು ಕಳಿಸಿದ್ದಾರೆ.
ರೈತರ ಹೋರಾಟಕ್ಕೆ ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡಿರುವ ಪೊಲೀಸರು
ಇನ್ನೊಂದಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಹೆಬ್ಬಾಳದ ಸಮೀಪ ಜಮಾವಣೆಯಾಗಿದ್ದಾರೆ. ಅಲ್ಲಿ ರೈತರ ಟ್ರಾಕ್ಟರ್ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರೈತರು ನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಈಗಾಗಲೇ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿರುವ ಕೆಲ ರೈತರು ಕಾಲ್ನಡಿಗೆ ಜಾಥಾ ಮೂಲಕ ಸ್ವಾತಂತ್ರ್ಯ ಉದ್ಯಾನವದ ಬಳಿ ಆಗಮಿಸುತ್ತಿದ್ದಾರೆ. ಎಲ್ಲೆಲ್ಲೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಬೆಳಗಾವಿ, ಗುಲ್ಬರ್ಗಾದಿಂದಲೂ ರೈತರು ಆಗಮಿಸಿರುವುದು ವಿಶೇಷ. ಕೆಲವೇ ಕ್ಷಣಗಳಲ್ಲಿ ವಿವಿಧ ಕಡೆಯಿಂದ ರೈತರು ಆಗಮಿಸುತ್ತಿದ್ದು, ಸಾವಿರಾರು ಸಂಖ್ಯೆಯ ರೈತರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಲಿದ್ದಾರೆ.
Recommended Video