ಫಾರ್ಮಾಥಾನ್: ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಂದ ರೈತರಿಗೋಸ್ಕರ ಓಟ
ಬೆಂಗಳೂರು ಜೂನ್ 23: ನಗರದ ಯುವ ಜನರೊಂದಿಗೆ ರೈತರು ಬೆರೆಯುವ ಅವಕಾಶವನ್ನು ಇಂದು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ನ್ಯಾಷನಲ್ ಫಾರ್ಮಾಥಾನ್ ಒದಗಿಸಿತು. ನಗರದಲ್ಲಿರುವ ಅನೇಕರಿಗೆ ಕೃಷಿಯ ವಿಧಾನಗಳು ಹಾಗೂ ರೈತ ಸಮುದಾಯ ಎದುರಿಸುವ ಸವಾಲುಗಳು ಹಾಗೂ ಕಷ್ಟಗಳನ್ನು ಅರಿಯುವ ಅವಕಾಶ ದೊರೆಯುವುದಿಲ್ಲ.
ರಾಷ್ಟ್ರೀಯ ಫಾರ್ಮಥಾನ್, ಬೆಂಗಳೂರಿನ ಐಟಿ ಉದ್ಯಮಿಗಳಿಗೆ ಇಂತಹ ರೈತರ ದಣಿವರಿಯದ ಪ್ರಯತ್ನ ಹಾಗೂ ಶ್ರಮದ ಕುರಿತು ಅರಿಯಲು ಅವಕಾಶ ಕಲ್ಪಿಸಿತ್ತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ, ಅದೊಂದು ಸಂಸ್ಕೃತಿಗಳ ಮಿಶ್ರಣವಾಗಿತ್ತು. ಇದರಲ್ಲಿ ಪಾಲ್ಗೊಂಡ ಅನೇಕರು ಸಹಜ ಹಾಗೂ ಸಮಗ್ರ ಕೃಷಿಯ ವಿಧಾನಗಳನ್ನು ಅರಿತುಕೊಳ್ಳುವಲ್ಲಿ ಯಶಸ್ವಿಯಾದರು.
ಎಲೆಕ್ಟ್ರಾನಿಕ್ ಸಿಟಿಯ ಸೆಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಕಾಲೇಜಿನಲ್ಲಿ ಪ್ರಾರಂಭವಾದ ಎರಡು ದಿನಗಳ ಕಾರ್ಯಕ್ರಮ ಸುಸ್ಥಿರ ಕೃಷಿ, ಸಮುದಾಯ ಕೃಷಿ ಹಾಗೂ ಕೃಷಿಯ ಹಂಚಿಕೆಯ ಸಂಪನ್ಮೂಲಗಳ ಮೇಲೆ ವಿಶೇಷ ಬೆಳಕು ಚೆಲ್ಲಿತು. ಇದು ಸಹಜ ಕೃಷಿಯಲ್ಲಿ ತೊಡಗಿರುವರು ಹಾಗೂ ಅದನ್ನು ಬೆಂಬಲಿಸುವರನ್ನು ಒಟ್ಟಿಗೆ ತರುವ ಮೊಟ್ಟ ಮೊದಲ ಪ್ರಯತ್ನವಾಗಿತ್ತು.
ಕಾರ್ಯಕ್ರಮದಲ್ಲಿ ಎಸ್ ಎಫ್ ಎಸ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ರಾಯ್, ಇಸ್ತಾ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷರಾದ ಅಚ್ಯುತ ರಾವ್, ಎಲ್ಸಿಯಾ ಕಂಪನಿಯ ಸಿಇಓ ಎನ್ ಎಸ್ ರಮಾ ಫಾರ್ಮಾಥಾನ್ ಗೆ ಚಾಲನೆ ನೀಡಿದರು.
ಈ ನ್ಯಾಷನಲ್ ಫಾರ್ಮಥಾನ್, ಎಸ್ತಾ ಸೊಸೈಟಿ ಸ್ವಯಂ ಸೇವಾ ಸಂಘಟನೆಯ ಸಂಸ್ಥಾಪಕ ಅಚ್ಯುತ ಅವರ ಕನಸಿನ ಕೂಸಾಗಿದ್ದು, ಭಾರತೀಯ ಕೃಷಿಗರ ಜೀವನ ಸುಧಾರಣೆಗಾಗಿ ಭಾರತಾದ್ಯಂತಹ ಉತ್ರಮ ಮನಸ್ಸುಗಳನ್ನು ಒಂದಾಗಿಸುವ ಗುರಿ ಹೊಂದಿದೆ.
ಅನುಭವ ಹಂಚಿಕೊಂಡ ಐಟಿ ಉದ್ಯಮಿ ರಾಘವೇಂದ್ರ
ಫಾರ್ಮಥಾನ್ಗಾಗಿ ಮೊದಲು 5 ಕಿಲೋಮೀಟರ್ ಓಟವನ್ನು ಆಯೋಜಿಸಲಾಗಿತ್ತು. ಈ ಫಾರ್ಮಥಾನ್ ಓಟದಲ್ಲಿ ಹಲವು ಐಟಿ ಕಂಪನಿಗಳ ಉದ್ಯೋಗಿಗಳು ಪಾಲ್ಗೊಂಡು, ರೈತರೊಂದಿಗೆ ಸಹಯೋಗ ವ್ಯಕ್ತಪಡಿಸಿದರು.
ತಮ್ಮ ಅನುಭವ ಹಂಚಿಕೊಂಡ ಐಟಿ ಉದ್ಯಮಿ ರಾಘವೇಂದ್ರ, ನಮ್ಮಲ್ಲಿ ಅನೇಕರು ಕೇವಲ ಗ್ರಾಹಕರಾಗಿದ್ದು, ರೈತರು ಎದುರಿಸುವ ನೋವು, ಸವಾಲುಗಳು, ವಿಶೇಷವಾಗಿ ಪರಿಸರದ ವಿವಿಧ್ಯತೆಗಳ ಕುರಿತು ತಿಳಿದಿಲ್ಲ. ರೈತರು ಭಾರತವನ್ನು ಆರ್ಥಿಕವಾಗಿ ಸ್ವತಂತ್ರ ಹಾಗೂ ಸ್ವ ಅವಲಂಬಿತವನ್ನಾಗಿಸಲು ಹೆಚ್ಚಿನ ಶ್ರಮಪಡುತ್ತಾರೆ. ಇಂದು ರೈತರನ್ನು ಭೇಟಿಯಾಗಿ ಅವರ ಶ್ರಮವನ್ನು ಅರಿಯಲು ಸಾಧ್ಯವಾಗಿದ್ದು ಸಂತಸ ತಂದಿದೆ ಎಂದರು.
ಕೃಷಿ ತಂತ್ರಜ್ಞಾನ ಕೂಡ ವಿಕಸನಗೊಂಡಿದೆ
ಕಾಲ ಸರಿದಂತೆ ಕೃಷಿ ತಂತ್ರಜ್ಞಾನ ಕೂಡ ವಿಕಸನಗೊಂಡಿದೆ. ಇಂದು ಎಸ್ತಾ 5 ದಕ್ಷಿಣ ಭಾರತದ ರಾಜ್ಯಗಳ 1200 ರೈತರಿಗೆ ನೆರವು ಒದಗಿಸುತ್ತಿದೆ. ಮುಂದಿನ ಒಂದು ವರ್ಷದಲ್ಲಿ ರಾಷ್ಟ್ರೀಯ ಫಾರ್ಮಥಾನ್ ಅನ್ನು ಭಾರತದ 12 ನಗರಗಳಲ್ಲಿ ಆಯೋಜಿಸಲು ಯೋಜಿಸಿದ್ದು, ಈ ಮೂಲಕ ರೈತರಿಗೆ ವೈಜ್ಞಾನಿಕ ವಿಧಾನದ ಅರಿವು ಮೂಡಿಸಲಿದೆ.
ರೈತರು ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದರೆ ಹೈಬ್ರೀಡ್ ಹಾಗೂ ಕುಲಾಂತರಿ ಬೀಜಗಳು. ಇವುಗಳು ರೈತರಿಗೆ ತಮ್ಮ ಭವಿಷ್ಯದ ಕ್ರಿಯೆಯನ್ನು ನಿರ್ಧರಿಸಲು ಸ್ವಾತಂತ್ರವನ್ನು ಕಸಿದುಕೊಳ್ಳುತ್ತದೆ. ಈ ಫಾರ್ಮಥಾನ್ ಗಳು ರೈತರನ್ನು ಪ್ರತಿ ವರ್ಷ ಅತಿ ಹೆಚ್ಚು ಲಾಭ ಮಾಡಿಕೊಳ್ಳುವ ಬಹುರಾಷ್ಟ್ರೀಯ ಕೃಷಿ ಸಂಸ್ಥೆಗಳ ಅಡಿಯಾಳಾಗದಂತೆ ತಡೆಯುತ್ತದೆ.
ನೀರಿನ ಸಂರಕ್ಷಣೆಯ ತಂತ್ರಜ್ಞಾನದತ್ತ ಗಮನ
ಸಂಘಟಕರ ಪ್ರಕಾರ, ನಮಗೆ ಹಾಗೂ ಮುಂದಿನ ಜನಾಂಗಕ್ಕೆ ಹಿಂದಿನ ಕೃಷಿ ಪದ್ಧತಿಗಳ ಕುರಿತು ನೆನಪಿಸುವ ಅಗತ್ಯವಿದೆ. ಅದಕ್ಕೂ ಮುಖ್ಯವಾಗಿ ಕುಸಿಯುತ್ತಿರುವ ರೈತರ ಸಮುದಾಯವನ್ನು ರಕ್ಷಿಸುವ ಅಗತ್ಯವಿದೆ. ಕೃಷಿ ಭೂಮಿಯ ಇಳಿಮುಖ ಹಾಗೂ ನೀರಿನ ಸಮಸ್ಯೆಯಿಂದ ದೇಶದಲ್ಲಿ ಆಹಾರದ ಭದ್ರತೆ ಒದಗಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಫಾರ್ಮಥಾನ್ , ಆಧುನಿಕ ಕೃಷಿಗೆ ಅಗತ್ಯವಿರುವ ನೀರಿನ ಸಂರಕ್ಷಣೆಯ ತಂತ್ರಜ್ಞಾನದತ್ತ ಕೂಡ ಗಮನ ಹರಿಸುತ್ತದೆ.
ರೈತ ಕೃಷ್ಣ ರೆಡ್ಡಿ ಮಾತನಾಡಿ
ರೈತ ಕೃಷ್ಣ ರೆಡ್ಡಿ ಮಾತನಾಡಿ, ರೈತರು ನೀರು ಸಂರಕ್ಷಿಸಿ, ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿತಗೊಳಿಸಬೇಕು. ಜೊತೆಗೆ, ಇಳುವರಿ ಹೆಚ್ಚಳಕ್ಕೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಬೇಕು ಎಂದು ಹೇಳಿದರು. ಹೈದಾರಾಬಾದ್ ಮೂಲದ ಎಸ್ ವಿ ಆರ್ ತಂಡದ ಪ್ರಾಯೋಜಿತ ಫಾರ್ಮಥಾನ್ ರೈತ ಸಮುದಾಯಕ್ಕೆ ಹೊಸ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲು ಯೋಜಿಸಿದೆ. ಈ ಸಂಸ್ಥೆ ತಂತ್ರಜ್ಞಾನ ಬಳಕೆಯಿಂದ ರೈತರಿಗೆ ನೈಸರ್ಗಿಕ ವೈಪರಿತ್ಯಗಳನ್ನು ಎದುರಿಸಲು ನೆರವಾಗಲಿದೆ.
ಫಾರ್ಮಾಥಾನ್ ನಲ್ಲಿ ವಿಜೇತರು
ಐದು ಕಿಲೋಮೀಟರ್ ಗಳ ಈ ಫಾರ್ಮಾಥಾನ್ ನಲ್ಲಿ ತುಷಾರ್ ಎನ್ ಮೊದಲ ಬಹುಮಾನ, ನಿರಂಜನ್ ರೆಡ್ಡಿ ಎರಡನೇ ಬಹುಮಾನ ಹಾಗೂ ಪ್ರವೀಣ್ ಎಂ ಮೂರನೇ ಸ್ಥಾನ ಪಡೆದುಕೊಂಡರು.
ಫಾರ್ಮಾಥಾನಲ್ಲಿ ಭಾಗವಹಿಸಿದ್ದವರಿಗೆ ಬೆಳಗಿನ ಉಪಹಾರವಾಗಿ ರೈತರು ಬೆಳೆದ ಹಸಿ ಮೂಲಂಗಿ, ಸೌತೆಕಾಯಿ ಹಾಗೂ ಕ್ಯಾರೆಟ್ ನೀಡಿದ್ದ ವಿಶೇಷವಾಗಿತ್ತು.