ಬೆಂಗಳೂರಿನ ಖ್ಯಾತ ವೀಣಾ ವಾದಕನಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು, ಫೆಬ್ರವರಿ 25: ಪತ್ನಿ ಹಾಗೂ ನಾದಿನಿಯನ್ನು ಹತ್ಯೆ ಮಾಡಿ ವಿಕೃತ ಮೆರೆದಿದ್ದ ಆರೋಪ ಎದರಿಸುತ್ತಿದ್ದ ಖ್ಯಾತ ವೀಣಾ ವಾದಕ ಬಿ.ಎಂ. ಚಂದ್ರಶೇಖರ್ ಗೆ ಜೀವಾವಧಿ ಶಿಕ್ಷೆ ನೀಡಿ 70 ನೇ ಸಿಟಿ ಸಿವಿಲ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಅಪರಾಧಿಗೆ ಮರಣದಂಡನೆ ಶಿಕ್ಷೆ ನೀಡುವಂತೆ ಸರ್ಕಾರಿ ಅಭೀಯೋಜಕಿ ಎಚ್.ಆರ್. ಸತ್ಯವತಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ವೀಣೆ ನುಡಿಸುವುದರಲ್ಲಿ ಖ್ಯಾತ ಹೆಸರು ಮಾಡಿದ್ದ ಬಿ.ಎಂ. ಚಂದ್ರಶೇಖರ್ ಅಲಿಯಾಸ್ ಚಂದ್ರು ಗಿರಿನಗರದಲ್ಲಿ ವಾಸವಾಗಿದ್ದರು. ಕುಡಿಯಲಿಕ್ಕೆ ಹಣ ಕೊಡಲಿಲ್ಲ ಎಂದು ಪತ್ನಿ ಪ್ರೀತಿ ಆಚಾರ್ಯ ಜತೆ ಜಗಳ ತೆಗೆದಿದ್ದ ವೀಣಾ ವಾದಕ ವಿಕೃತವಾಗಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು ಆರೋಪಿ ಚಂದ್ರಶೇಖರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2013 ರಲ್ಲಿ ಡಬಲ್ ಮರ್ಡರ್ ಪ್ರಕರಣ ವರದಿಯಾಗಿತ್ತು. ಸರ್ಕಾರಿ ಅಭಿಯೋಜಕಿ ಎಚ್.ಆರ್. ಸತ್ಯವತಿ ಮೃತಳ ಪರ ವಾದ ಮಂಡಿಸಿದ್ದರು.
Recommended Video
ಪ್ರಕರಣದ ವಾದ ಮತ್ತು ಪ್ರತಿವಾದ ಆಲಿಸಿದ ಬಳಿಕ ತೀರ್ಪು ಪ್ರಕಟಿಸಿರುವ 70 ನೇ ಸಿಸಿ ಸಿವಿಲ್ ನ್ಯಾಯಾಲಯದ ನ್ಯಾ. ಗುರುರಾಜ್ ಸೋಮಕಳ್ಳರ್ ಅವರು, ಅಪರಾಧಿ ಚಂಧ್ರಶೇಖರ್ ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಮೃತ ಪ್ರೀತಿ ಆಚಾರ್ಯ ಹಾಗೂ ಅವರ ಪುತ್ರಿ ವೇದ ಅವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಹಣ ನೀಡುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಸೂಚಿಸಿದ್ದಾರೆ. ಪರಿಹಾರ ಮೊತ್ತ ಆಪಾದಿತ ಚಂದ್ರಶೇಖರ್ ನೀಡದಿದ್ದಲ್ಲಿ, ಅವರ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಂಡು ಮಗುವಿನ ಭವಿಷ್ಯಕ್ಕಾಗಿ ನೀಡುವಂತೆ ನ್ಯಾಯಾಧೀಶರು ತೀರ್ಪಿನಲ್ಲಿಯೇ ಉಲ್ಲೇಖಿಸಿದ್ದಾರೆ. ಇನ್ನು ಇಬ್ಬರನ್ನು ಹತ್ಯೆ ಮಾಡಿದ್ದ ಚಂದ್ರಶೇಖರ್ ಗೆ ಮರಣ ದಂಡನೆ ನೀಡುವುದೇ ಸೂಕ್ತ ಶಿಕ್ಷೆ. ಸಿಟಿ ಸಿವಿಲ್ ನ್ಯಾಯಾಲಯ ನೀಡಿರುವ ಶಿಕ್ಷೆ ಪ್ರಮಾಣ ಪ್ರಶ್ನಿಸಿ ಮರಣ ದಂಡನೆಗೆ ಮನವಿ ಮಾಡಲಾಗುವುದು ಎಂದು ಸರ್ಕಾರಿ ಅಭಿಯೋಜಕಿ ಸತ್ಯವತಿ ತಿಳಿಸಿದ್ದಾರೆ.