ಮಾರ್ಚ್ 1ರಿಂದ ಬ್ಯಾಂಕ್ ಶುಲ್ಕ ವಿಧಿಸುವ ಸುದ್ದಿ ಸುಳ್ಳು ಕಣ್ರೀ
ಮಾರ್ಚ್ 1ರಿಂದ ಬ್ಯಾಂಕ್ ನವರು ಹಣ ವಿಥ್ ಡ್ರಾಗೆ, ವರ್ಗಾವಣೆಗೆ ಮಿತಿ ನಿಗದಿ ಮಾಡಿ, ಶುಲ್ಕ ವಿಧಿಸುತ್ತಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಏನು ಹೇಳಿದ್ದಾರೆ ಎಂಬುದನ್ನು ಓದಿ
ಬೆಂಗಳೂರು, ಫೆಬ್ರವರಿ 10: ಸಾಮಾಜಿಕ ಜಾಲತಾಣಗಳಲ್ಲಿ ಅದ್ಯಾರು ಹುಳ ಬಿಟ್ಟರೋ ಏನೋ ಬ್ಯಾಂಕ್ ಗಳಲ್ಲಿ ಅಧಿಕಾರಿಗಳಿಗೆ ತಲೆ ನೋವಾಗಿದೆ. ಮಾರ್ಚ್ 1ರಿಂದ ಜಾರಿಗೆ ಬರುವ ಹಾಗೆ ವೇತನ ಖಾತೆದಾರರು ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣ ಡ್ರಾ ಮಾಡಬಹುದು. ಅ ನಂತರ ಪ್ರತಿ ವ್ಯವಹಾರಕ್ಕೆ 150 ರುಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.
ಅಷ್ಟೇ ಅಲ್ಲ, ಉಳಿತಾಯ ಖಾತೆದಾರರು ಆರನೇ ವ್ಯವಹಾರದಿಂದ ಆಚೆಗೆ 150 ರುಪಾಯಿ ಶುಲ್ಕ ವಿಧಿಸಲಾಗುತ್ತದಂತೆ. ಅದೇ ರೀತಿ ನಗದು ವ್ಯವಹಾರಕ್ಕೆ, ಇತರ ಬ್ಯಾಂಕ್ ಗಳಿಗೆ ಹಣ ವರ್ಗಾವಣೆಗೆ ಹೀಗೆ ಇಂಥ ವ್ಯವಹಾರಗಳಿಗೆ ಇಷ್ಟು ಮಿತಿ ದಾಟಿದರೆ 150 ರುಪಾಯಿ ಶುಲ್ಕ ಎಂದು, ಇದು ಎಚ್ ಡಿಎಫ್ ಸಿ ಬ್ಯಾಂಕ್ ನವರ ಪ್ರಕಟಣೆ ಅಂತಲೂ ಸುದ್ದಿ ಜೋರಾಗಿ ಹರಿದಾಡುತ್ತಿದೆ.['ಫೆ.28ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ']
ಆದರೆ, ಈ ವಿಚಾರವನ್ನು ಎಚ್ ಡಿಎಫ್ ಸಿ ಬ್ಯಾಂಕ್ ನ ಅಧಿಕಾರಿಗಳನ್ನು ಕೇಳಿದರೆ, ನಕ್ಕು, ಇಂಥ ಯಾವ ಸೂಚನೆಯೂ ನಾವು ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಅಂಥ ಯಾವುದೇ ಸೂಚನೆ ನೀಡುವ ಹಾಗಿದ್ದರೆ ಗ್ರಾಹಕರಿಗೆ ಮೇಲ್ ಮಾಡ್ತೀವಿ. ಅಥವಾ ಸಂದೇಶ ಕಳಿಸ್ತೀವಿ. ರಿಸರ್ವ್ ಬ್ಯಾಂಕ್ ನ ನಿಯಮದ ಪ್ರಕಾರ ಕನಿಷ್ಠ ಒಂದು ತಿಂಗಳ ಮುಂಚೆ ಗ್ರಾಹಕರಿಗೆ ಈ ವಿಷಯ ತಿಳಿಸಬೇಕಾಗುತ್ತದೆ ಎನ್ನುತ್ತಾರೆ ಅವರು.[ಹುಬ್ಬಳ್ಳಿಯಲ್ಲಿ 10 ರೂ. ನಾಣ್ಯ ವದಂತಿ ಬಗ್ಗೆ ಬ್ಯಾಂಕ್ ಸ್ಪಷ್ಟನೆ]
ಇನ್ನೂ ಮುಂದುವರಿದು, ನೋಟು ನಿಷೇಧದ ನಂತರ ಫೇಸ್ ಬುಕ್, ವಾಟ್ಸ್ ಅಪ್ ನಲ್ಲಿ ಇಂಥ ಸುದ್ದಿ ಹರಡುವುದು ಹೆಚ್ಚಾಗಿದೆ. ಯಾವುದೇ ಬ್ಯಾಂಕ್ ನಿಂದ ಅಧಿಕೃತವಾಗಿ ಇಂಥ ಮಾಹಿತಿ ಬರುವವರೆಗೆ ಸಾರ್ವಜನಿಕರು ನಂಬಬಾರದು ಎಂದು ಹೇಳಿದ್ದಾರೆ.