ಎಚ್ಚರ.. ಎಚ್ಚರ..! ಬೆಂಗಳೂರಲ್ಲಿ ಹಬ್ಬಿದೆ ನಕಲಿ ನೋಟ್ ಜಾಲ..!
ನೀವು ಬೆಂಗಳೂರಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಶಾಪಿಂಗ್ಗೆ ಓಡಾಡ್ತೀರಾ..? ಹಾಗಾದ್ರೆ ಕೊರೊನಾ ವೈರಸ್ನಂತೆ ನಕಲಿ ನೋಟುಗಳ ಬಗ್ಗೆಯೂ ಎಚ್ಚರವಾಗಿರಿ. ಏಕೆಂದರೆ ರಾಜ್ಯ ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ನಗರದ ಹೊರವಲಯ ಆನೇಕಲ್ನಲ್ಲಿ ಹೀಗೆ ನಕಲಿ ನೋಟು ಪ್ರಿಂಟ್ ಮಾಡಿ, ಸಂತೆಗಳು, ಜನಸಂದಣಿ ಇರುವ ಪ್ರದೇಶಗಳಲ್ಲಿ ಚಲಾವಣೆ ಮಾಡುತ್ತಿದ್ದವರ ಹೆಡೆಮುರಿ ಕಟ್ಟಲಾಗಿದೆ.
ಆನೇಕಲ್ ತಾಲೂಕಿನ ಸೂರ್ಯಸಿಟಿ ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಹಾಗೂ ರಾಜಸ್ಥಾನದ ನರೇಶ್ ಅರೆಸ್ಟ್ ಆಗಿದ್ದಾರೆ. ಇದು ಬೆಂಗಳೂರಿಗರಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಬಂಧಿತರ ಬಳಿ ಸುಮಾರು 5 ಸಾವಿರ ಮೌಲ್ಯದ ನಕಲಿ ನೋಟು ಹಾಗೂ ನೋಟ್ ಪ್ರಿಂಟ್ ಮಾಡಲು ಬಳಸುತ್ತಿದ್ದ ಮಷಿನ್ ಕೂಡ ಸಿಕ್ಕಿದೆ.
ಇದನ್ನೆಲ್ಲಾ ವಶಕ್ಕೆ ಪಡೆದ ಖಾಕಿ ಪಡೆ, ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಆರೋಪಿಗಳು ನಕಲಿ ನೋಟ್ನ ವಿಚಾರವಾಗಿ ಹಲವು ವಿಚಾರಗಳನ್ನು ಮರೆಮಾಚುತ್ತಿರುವ ಸಂಶಯವಿದ್ದು, ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
ಜನ ಹೆಚ್ಚಿರುವ ಜಾಗದಲ್ಲಿ ಚಲಾವಣೆ
ಆನೇಕಲ್ ಬೆಂಗಳೂರಿನಿಂದ ಹೊರವಲಯದಲ್ಲಿ ಇದ್ದರೂ, ಈ ಭಾಗದಲ್ಲಿ ಜನಸಂಖ್ಯೆ ಹೆಚ್ಚಾಗಿಯೇ ಇದೆ. ಇಲ್ಲಿ ಸಾವಿರಾರು ಕಾರ್ಖಾನೆಗಳು ಇದ್ದು, ಮುಖ್ಯವಾಗಿ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಕೂಡ ಇಲ್ಲೇ ಇದೆ. ಹೀಗಾಗಿ ಲಕ್ಷಾಂತರ ಜನರು ಆನೇಕಲ್ ತಾಲೂಕಿನಲ್ಲಿ ವಾಸ ಮಾಡುತ್ತಿದ್ದಾರೆ.
ಅದರಲ್ಲೂ ಹಲವು ಸಂತೆಗಳು ಇಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಾ ಬಂದಿವೆ. ಇಂತಹ ಜಾಗಗಳನ್ನೇ ಈ ಕಿರಾತಕರು ಟಾರ್ಗೆಟ್ ಮಾಡಿ ತಮ್ಮ ನಕಲಿ ನೋಟ್ಗಳನ್ನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಜನ ಹೆಚ್ಚಿರುವ ಕಡೆ ವ್ಯಾಪಾರಿಗಳು ನೋಟ್ ಸರಿಯಾಗಿ ಗಮನಿಸುವುದಿಲ್ಲ ಎಂಬುದು ಕಿರಾತಕರ ಪ್ಲಾನ್ ಆಗಿತ್ತು.
ವ್ಯಾಪಾರಿಗಳು ಅನುಮಾನ ವ್ಯಕ್ತಪಡಿಸಿದ್ದರು..!
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ನಕಲಿ ನೋಟ್ ಹಾವಳಿಯಿಂದ ವ್ಯಾಪಾರಿಗಳು ರೋಸಿ ಹೋಗಿದ್ದರು. ಅಲ್ಲದೆ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸುತ್ತಮುತ್ತಲ ಪ್ರದೇಶದಲ್ಲಿ ನಕಲಿ ನೋಟ್ ಜಾಲ ಇರಬಹುದೆಂದು ಅನುಮಾನಪಟ್ಟಿದ್ದರು.
ಸೂರ್ಯಸಿಟಿ ಪೋಲಿಸರಿಂದ ಕಾರ್ಯಾಚರಣೆ
ಸೂರ್ಯಸಿಟಿ ಪೋಲಿಸರು ನಕಲಿ ನೋಟ್ ಜಾಲದ ಬೆನ್ನುಬಿದ್ದು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸ್ಥಳೀಯ ಅಂಗಡಿಯಲ್ಲಿ ನೋಟ್ ಚಲಾಯಿಸುವಾಗ ಆರೋಪಿಗಳು ಲಾಕ್ ಆಗಿದ್ದು ಪ್ರಿಂಟಿಂಗ್ ಮಷಿನ್ ಸೇರಿ 200, 100, ಹಾಗೂ 50 ರೂಪಾಯಿ ಮುಖಬೆಲೆ ನಕಲಿ ನೋಟ್ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
ಚಂದಾಪುರ ಸಂತೆಯೇ ಟಾರ್ಗೆಟ್..!
ಆನೇಕಲ್ ತಾಲೂಕಿನಲ್ಲಿ ಚಂದಾಪುರ ಸಂತೆ ದೊಡ್ಡದಾಗಿ ನಡೆಯುತ್ತದೆ. ಪ್ರತಿ ಶನಿವಾರ ನಡೆಯುವ ಸಂತೆಗೆ ಹತ್ತಾರು ಸಾವಿರ ಜನ ವ್ಯಾಪಾರ ಹಾಗೂ ವಹಿವಾಟು ನಡೆಸಲು ಬರುತ್ತಾರೆ. ಆದರೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಹಾಗೂ ರಾಜಸ್ಥಾನದ ನರೇಶ್, ನಕಲಿ ನೋಟ್ಗಳನ್ನ ಸಂತೆಯಲ್ಲಿ ಚಲಾವಣೆ ಮಾಡುತ್ತಿದ್ದರು. ಆದ್ರೆ ಇದೇ ರೀತಿ ಸಂತೆಯಲ್ಲಿ ನಕಲಿ ನೋಟ್ ಚಲಾವಣೆ ಮಾಡುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನಾದರೂ ನೋಟ್ ಪಡೆಯುವ ಮುನ್ನ ಒಮ್ಮೆ ಅವುಗಳನ್ನು ಸರಿಯಾಗಿ ಪರಿಶೀಲಿಸಿ ಪಡೆದರೆ ಒಳ್ಳೆಯದು.