ಖೋಟಾ ನೋಟು ಜಾಲ ಪತ್ತೆ ಮಾಡಿದ ಆಟೋ ಡ್ರೈವರ್ ಗೆ ಸಲಾಂ!
ಬೆಂಗಳೂರು, ಡಿಸೆಂಬರ್ 26: ಪೊಲೀಸರು ಯಾವುದಾದರೂ ಕೇಸು ಪತ್ತೆ ಮಾಡಿದರೆ ಅವರಿಗೆ ಸಲಾಂ ಹೊಡೆಯುವ ಮೂಲಕ ಗೌರವ ಅರ್ಪಿಸುತ್ತೇವೆ. ಇಲ್ಲೊಬ್ಬ ಆಟೋ ಚಾಲಕ ಅದೇ ಗೌರವಕ್ಕೆ ಅರ್ಹರಾಗಿದ್ದಾರೆ. ಆಟೋ ಚಾಲಕ ತೋರಿದ ಪ್ರಾಮಾಣಿಕತೆ ಮತ್ತು ಬುದ್ಧಿವಂತಿಕೆಯಿಂದ ಖೋಟಾ ನೋಟು ತಯಾರಿಸಿ ಸಾರ್ವಜನಿಕರಿಗೆ ಚಲಾವಣೆ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಜೈಲು ಪಾಲಾಗಿದ್ದಾರೆ. ಆಟೋ ಬಾಡಿಗೆಗೆ ಖೋಟಾ ನೋಟು ನೀಡಿದ ವ್ಯಕ್ತಿಗೆ ಚಿಲ್ಲರೆ ಕೊಡುವ ನೆಪದಲ್ಲಿ ಪೊಲೀಸರಿಗೆ ಒಪ್ಪಿಸುವ ಮೂಲಕ ಆಟೋ ಚಾಲಕ ಖೋಟಾ ನೋಟು ದಂಧೆಯನ್ನು ಬಯಲಿಗೆ ಎಳೆದಿದ್ದಾರೆ. ಆಟೋ ಚಾಲಕನ ಈ ಕೆಲಸವನ್ನು ಪೊಲೀಸರು ಪ್ರಶಂಸೆ ಮಾಡಿದ್ದಾರೆ.
ಆಟೋ ರಾಜಾ!
ವಿನಾಯಕ ನಗರದ ನಿವಾಸಿ, ಮಂಜುನಾಥ್ ಖೋಟಾನೋಟು ದಂಧೆ ಪತ್ತೆ ಮಾಡಿದ ಆಟೋ ಚಾಲಕ. ತಂದೆ ರಾಮಕೃಷ್ಣ ಇಲ್ಲ. ತಾಯಿ ಜತೆ ವಿನಾಯಕನಗರ ಪುಟ್ಟ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಜೀವನೋಪಾಯಕ್ಕಾಗಿ ಸ್ನೇಹಿತ ಅರುಣ್ ಅವರ ಆಟೋವನ್ನು ಬಾಡಿಗೆಗೆ ಪಡೆದು ರಾತ್ರಿ ವೇಳೆ ಓಡಿಸಿ ಬಂದ ಹಣದಲ್ಲಿ ತಾಯಿ ಜತೆ ಜೀವನ ನಡೆಸುತ್ತಿದ್ದಾರೆ.
ಪುಟ್ಟ ಅನುಮಾನ
ಗುರುವಾರ ರಾತ್ರಿ ಆಟೋ ಚಾಲನೆ ಮಾಡಲು ಮಂಜುನಾಥ್ ಕೆ.ಆರ್. ಮಾರ್ಕೆಟ್ ಗೆ ಹೋಗಿ ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಶುಕ್ರವಾರ ಬೆಳಗಿನ ಜಾವ 1.15 ರ ಸುಮಾರಿಗೆ ಅಪರಿಚಿತ ವ್ಯಕ್ತಿ ಆಟೋ ಹತ್ತಿದ್ದು, ಶಾಂತಿನಗರದ ಬಸ್ ನಿಲ್ದಾಣದ ಬಳಿ ಬಿಡಲು ಸೂಚಿಸಿದ್ದಾರೆ. ಆಟೋ ಓಡಿಸಿಕೊಂಡ ಬಂದ ಮಂಜುನಾಥ್ ಗೆ ಬಾಡಿಗೆಗಾಗಿ ನೂರು ರೂಪಾಯಿ ನೋಟು ಕೊಟ್ಟಿದ್ದಾನೆ. ನೋಟಿನ ಬಗ್ಗೆ ಅನುಮಾನಗೊಂಡ ಮಂಜುನಾಥ್, ತನ್ನ ಜೇಬಿನಲ್ಲಿದ್ದ ಅಸಲಿ ನೂರು ರೂಪಾಯಿ ನೋಟು ಪರಿಶೀಲಿಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ನೀಡಿದ ನೋಟಿನ ಬಗ್ಗೆ ಅನುಮಾನಗೊಂಡಿದ್ದಾರೆ.
ಚಿಲ್ಲರೆ ನೆಪ
ನನ್ನ ಬಳಿ ಚಿಲ್ಲರೆ ಇಲ್ಲ. ಮುಂದೆ ಅಲ್ಲಿ ಪರಿಚಯದವರು ಇದ್ದಾರೆ ಎಂದು ಆಟೋದಲ್ಲಿಯೇ ಅಪರಿಚಿತ ವ್ಯಕ್ತಿಯನ್ನು ಕೂರಿಸಿಕೊಂಡು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕರೆ ತಂದು ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಜಮಾಲ್ ಅಕ್ತರ್ ಎಂದು ಗೊತ್ತಾಗಿದ್ದು, ಮೂವರು ಸೇರಿಕೊಂಡು ಖೋಟಾನೋಟು ಮುದ್ರಿಸಿ ಸ್ವಂತಕ್ಕೆ ಬಳಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇದರ ಜಾಡು ಹಿಡಿದು ಕಾರ್ಯಾಚರಣೆ ನಡೆಸಿರುವ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 19800 ರೂ. ಮೌಲ್ಯದ ನೂರು ರೂಪಾಯಿ ಮುಖ ಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಖೋಟಾ ಕಸೂತಿ
ಶಾಮಣ್ಣ ಗಾರ್ಡನ್ ನಿವಾಸಿ ಮಹಮದ್ ಇಮ್ರಾನ್, ಮುಬಾರಕ್ ಮತ್ತು ಜಮಾಲ್ ಅಕ್ತರ್ ಬಂಧಿತರು. ಮುಬಾರಕ್ ಸಹಾಯದಿಂದ ಮಹಮದ್ ಇಮ್ರಾನ್ ಶಾಮಣ್ಣ ಗಾರ್ಡನ್ ತನ್ನ ಮನನೆಯಲ್ಲಿಯೇ ಖೋಟಾ ನೋಟು ತಯಾರಿಸುತ್ತಿದ್ದ. ಹತ್ತನೇ ತರಗತಿ ವರೆಗೂ ಓದಿರುವ ಇಮ್ರಾನ್, ಜೀವನೋಪಾಯಕ್ಕಾಗಿ ಫ್ರಿಡ್ಜ್ ರಿಪೇರಿ ಮಾಡುತ್ತಿದ್ದ. ಎರಡನೇ ಆರೋಪಿ ಮುಬಾರಕ್ ಗಂಗೊಂಡನಳ್ಳಿ ನಿವಾಸಿಯಾಗಿದ್ದು ಜೀವನೋಪಾಯಕ್ಕಾಗಿ ಸ್ಕ್ರೀನ್ ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದ. ಖೋಟಾ ನೋಟು ಮುದ್ರಿಸಲು ಇಮ್ರಾನ್ ಗೆ ಸ್ಕ್ರೀನ್ ಪ್ರಿಂಟಿಂಗ್ ನೆರವು ನೀಡಿದ್ದ. ಜಮಾಲ್ ಅಕ್ತರ್ ಮೂಲತಃ ಉತ್ತರ ಪ್ರದೇಶದವನಾಗಿದ್ದು, ಸೀರೆ ಕಸೂತಿ ಕೆಲಸ ಮಾಡುತ್ತಿದ್ದ. ಅಸಲಿ ನೋಟುಗಳ ಮಧ್ಯೆದಲ್ಲಿ ಬರುವ ಗೆರೆಯನ್ನು ಖೋಟಾ ನೋಟುಗಳಿಗೆ ಎಳೆಯಲು ನೆರವು ಮಾಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಮೂವರು ಸೇರಿಕೊಂಡು ಖೋಟಾ ನೋಟು ತಯಾರಿಸಿ ಬೇರೆ ಯಾರಿಗೂ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ ಇವರೇ ಸಾರ್ವಜನಿಕರಿಗೆ ನೀಡುತ್ತಿದ್ದರು. ಹೀಗಾಗಿ ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನಷ್ಟೇ ಮುದ್ರಿಸುತ್ತಿದ್ದರು. ಸಾಮಾನ್ಯ ಬಿಳಿ ಹಾಳೆಗಳಲ್ಲೇ ಮುದ್ರಿಸಿ ಸಾರ್ವಜನಿಕರಿಗೆ ಚಲಾವಣೆ ಮಾಡುತ್ತಿದ್ದರು. ಬಂಧಿತ ಮೂವರು ಆರೋಪಿಗಳ ಬಗ್ಗೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Recommended Video
ರಿಯಲ್ ಹೀರೋ
ಆಟೋ ಚಾಲಕರು ಅವಕಾಶ ಸಿಕ್ಕರೆ ಸಾಕು ಎರಡು ಪಟ್ಟು ಶುಲ್ಕ ವಿಧಿಸಿ ವಸೂಲಿ ಮಾಡುತ್ತಾರೆ. ಇನ್ನೂ ಕೆಲವರು ಮೀಟರ್ ಗಿಂತಲೂ ಮೂರು ಪಟ್ಟು ಬಾಡಿಗೆ ತೆಗೆದುಕೊಂಡು ಮೋಸ ಮಾಡುತ್ತಾರೆ. ಕೆಎಸ್ ಆರ್ ಟಿಸಿ ಬಸ್ ಮುಷ್ಕರ ವೇಳೆ ಆಟೋಗಳ ವಿರುದ್ಧ ಪೊಲೀಸರೇ ಕಾರ್ಯಾಚರಣೆ ನಡೆಸಿದ್ದರು. ಆದರೆ, ಪುಟ್ಟ ಜೀವನಕ್ಕಾಗಿ ಸ್ನೇಹಿತನ ಆಟೋ ಬಾಡಿಗೆ ಪಡೆದು ಬರುವ ಸಂಪಾದನೆಯಲ್ಲಿ ತಾಯಿಯನ್ನು ಸಾಕುತ್ತಿದ್ದಾನೆ ಮಂಜುನಾಥ್. ಮಾತ್ರವಲ್ಲ, ಪ್ರಾಮಾಣಿಕತೆಯಿಂದ ಕೋಟಾ ನೋಟು ಚಲಾವಣೆ ಮಾಡಲು ಯತ್ನಿಸಿದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಒಬ್ಬ ನಿಜವಾದ ನಾಗರಿಕ ಎಂಬುದನ್ನು ನಿರೂಪಿಸಿದ್ದಾರೆ. ಮಂಜುನಾಥ್ ಕಾರ್ಯ ಇಡೀ ಆಟೋ ಚಾಲಕ ಸಮುದಾಯವನ್ನೇ ಗೌರವದಿಂದ ನೋಡುವಂತಾಗಿದೆ.