ಅಮಲಲ್ಲಿ ವೇಶ್ಯೆಯ ಸಂಗ ಬಯಸಿದವರಿಗೆಲ್ಲ ಪಂಗನಾಮ!
ಬೆಂಗಳೂರು, ಡಿ, 17: ಕುಡಿದ ಅಮಲಿನಲ್ಲಿ ಬಾರ್ ನಿಂದ ಹೊರಕ್ಕೆ ಬರುವವನಿಗೆ ಇಂದು ರಾತ್ರಿಗೆ ನಿಮಗೆ ಹುಡುಗಿ ಬೇಕೆ? ಎಂಬ ಪ್ರಶ್ನೆ ಎದುರಾಗುತ್ತದೆ. ಅಮಲಿನಲ್ಲಿದ್ದವ ಅವರು ತೋರಿಸಿದ ಫೋಟೋ ನೋಡಿ ಯಾವುದೋ ಒಂದಕ್ಕೆ 'ಒಕೆ' ಎನ್ನುತ್ತಾನೆ. ಹಾಗಾದರೆ ಅಡ್ವಾನ್ಸ್ ಕೊಡಿ ಎಂದು ಹಣ ಪಡೆದುಕೊಂಡವರು ನಾಪತ್ತೆಯಾಗುತ್ತಾರೆ.
ಗಂಡಸರ ದೌರ್ಬಲ್ಯವನ್ನೇ ತಮ್ಮ ಲಾಭಕ್ಕೆ ಉಪಯೋಗಿಸಿಕೊಂಡು ವೇಶ್ಯೆರನ್ನು ಸರಬರಾಜು ಮಾಡುತ್ತೇವೆ ಎಂದು ನಂಬಿಸಿ ವಂಚಿಸುತ್ತಿದ್ದ 4 ಜನರ ತಂಡವೊಂದನ್ನು ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್ ಪೊಲೀಸರು ದಸ್ತಗಿರಿ ಮಾಡಿದ್ದಾರೆ.[ಮದುವೆ ಮಂಟಪದಿಂದ ಸಾಫ್ಟ್ ವೇರ್ ವರ ಪರಾರಿ]
ಟ್ಯಾನರಿ ರಸ್ತೆ, ವೆಂಕಟೇಶಪುರದ ಇಮ್ರಾನ್ (34), ಡಿಜಿ ಹಳ್ಳಿ ಮೋದಿ ರಸ್ತೆಯ ಸೈಯ್ಯದ್ (31), ಟ್ಯಾನರಿ ರಸ್ತೆ, ಜುನೇದಾ ಮಸೀದಿ ಹತ್ತಿರದ ಶೇಖ್ ಆದಿಲ್ (30) ಮತ್ತು, ವಿಜಯನಗರ್ ಪೈಪ್ ಲೈನ್ ರಸ್ತೆಯ ಸಲೀಂ ಪಾಷಾ (24) ಬಂಧಿತರು.
ಬಾರ್ ಎದುರು ನೋಂದಣಿ ಇಲ್ಲದ ಆಟೋದಲ್ಲಿ ಕುಳಿತು ಕುಡಿದು ಹೊರಬರುವ ಗ್ರಾಹಕರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದರು. 'ವೇಶ್ಯೆಯರನ್ನು' ಸರಬರಾಜು ಮಾಡಲಾಗುವುದೆಂದು ಹೇಳಿ ಹುಡುಗಿಯರ ಫೋಟೋಗಳನ್ನು ತೋರಿಸಿ ಹಣ ಪಡೆದು ಮಾಯವಾಗುತ್ತಿದ್ದರು. ಇತ್ತ ಹಣ ಕೊಟ್ಟವ ನಷ್ಟವಾದುದ್ದನ್ನು ಹೇಳಿಕೊಳ್ಳಲೂ ಸಾಧ್ಯವಾಗದೇ ತೆಪ್ಪಗೆ ಮನೆ ಸೇರುತ್ತಿದ್ದ.[ಕಿವೀಸ್ ಮಹಿಳೆ ವಂಚನೆ ಜಾಲ ಬೆಂಗಳೂರಲ್ಲಿ ಬಯಲು]
ಈ ಬಗ್ಗೆ ಮಾಹಿತಿ ಪಡೆದ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ಆಟೋ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಡುಗಿಯರನ್ನು ಸರಬರಾಜು ಮಾಡುವಂತೆ ಕೋರಿ ಹಣ ನೀಡಿದ್ದ 'ಗ್ರಾಹಕರ' ವಿರುದ್ಧವು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಅಮರನಾಥ್ ರೆಡ್ಡಿ, ಇನ್ಸ್ ಪೆಕ್ಟರ್ ಬಾಲಕೃಷ್ಣ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.