ಅ.13: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮತ್ತೆ ವಿದ್ಯುತ್ ಕಡಿತ
ಬೆಂಗಳೂರು, ಅಕ್ಟೋಬರ್ 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಚರಂಡಿ, ರಸ್ತೆಗಳು, ರಾಜ ಕಾಲುವೆಗಳೆಲ್ಲ ತುಂಬಿ ಹರಿಯುತ್ತಿವೆ. ಇದರಿಂದ ಉದ್ಯಾನ ನಗರಿಯ ಜನರು ಪರದಾಡುವಂತಾಗಿದೆ. ಭಾರೀ ಮಳೆಯಿಂದ ಮರಗಳು ಬಿದ್ದು, ವಿದ್ಯುತ್ ತಂತಿಗಳು ಕೂಡ ಕಟ್ ಆಗಿವೆ.
ಈ ಮಧ್ಯೆ ಬೆಸ್ಕಾಂ ಸಹ ಪವರ್ ಕಟ್ ಮಾಡುತ್ತಿದ್ದು, ಜನರ ಸಮಸ್ಯೆಯನ್ನು ದುಪ್ಪಟ್ಟು ಮಾಡುತ್ತಿದೆ. ಮಳೆಯ ಕಾರಣದಿಂದ ಫೀಡರ್ಗಳು ಹಾಳಾಗಿರುವ ಕಾರಣ ಅದರ ತುರ್ತು ನಿರ್ವಹಣೆಯನ್ನು ಮಾಡಬೇಕಾಗಿದ್ದು, ಬುಧವಾರ ಸಹ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದ್ದು, ಯಾವ್ಯಾವ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂಬ ಪಟ್ಟಿ ಈ ಕೆಳಗಿದೆ.
ರಾಜ್ಯದಲ್ಲಿ ವಿದ್ಯುತ್ ಕಡಿತ ಇಲ್ಲ; ಕಲ್ಲಿದ್ದಲು ಪೂರೈಕೆಗಾಗಿ ಕೇಂದ್ರಕ್ಕೆ ಬೇಡಿಕೆ: ಸಿಎಂ ಬೊಮ್ಮಾಯಿ
ಬುಧವಾರದಂದು ಬೆಂಗಳೂರಿನ ರಾಜಾಜಿನಗರ, ಆರ್ಆರ್ ನಗರ, ಕೆಂಗೇರಿ, ಜಯನಗರ, ಕೋರಮಂಗಲ, ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ, ಪೀಣ್ಯ, ಇಂದಿರಾ ನಗರ, ವೈಟ್ಫೀಲ್ಡ್, ಶಿವಾಜಿನಗರ, ವಿಧಾನಸೌಧ, ಎಚ್ಎಸ್ಆರ್ ಲೇಔಟ್, ಚಂದಾಪುರ, ಮಾಗಡಿ, ನೆಲಮಂಗಲ, ಹೊಸಕೋಟೆಯಲ್ಲಿ ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೋರಮಂಗಲ 1ನೇ ಬ್ಲಾಕ್ನಲ್ಲಿ ಎಫ್ 21 ಫೀಡರ್ ವಿಫಲ
ಜಕ್ಕಸಂದ್ರ ಎಕ್ಸ್ಟೆನ್ಷನ್, ಕೋರಮಂಗಲ 1ನೇ ಬ್ಲಾಕ್ನಲ್ಲಿ ಎಫ್ 21 ಫೀಡರ್ ವಿಫಲವಾಗಿದ್ದು, ಕೇಂಬ್ರಿಡ್ಜ್ ಲೇಔಟ್ ಎಫ್ 6 ಫೀಡರ್, ಕಾಳೆನ ಅಗ್ರಹಾರ, ಬನ್ನೇರುಘಟ್ಟ ರೋಡ್, ಬಸವನಪುರ, ಗೊಟ್ಟಿಗೆರೆ ಎಫ್ 4 ಫಿಡರ್ ಹಾಗೂ ಮಾರೇನಹಳ್ಳಿ, ವಿಜಯನಗರ ಎಫ್ 7 ಫೀಡರ್ ಹಾನಿಗೊಳಗಾಗಿದೆ. ಅದರ ನಿರ್ವಹಣೆ ಹಿನ್ನಲೆ ಈ ಏರಿಯಾಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ವಿದ್ಯುತ್ ಸಮಸ್ಯೆ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಅಂಬೇಡ್ಕರ್ ನಗರ, ಯಶವಂತಪುರ ಎಫ್ 9 ಫಿಡರ್ 250 ಕೆವಿ ಟ್ರಾನ್ಸ್ಫಾರ್ಮರ್ ಸಂಖ್ಯೆ 106, 11 ಸುಟ್ಟು ಹೋಗಿದ್ದು, ಮಲ್ಲತಹಳ್ಳಿ, ಬಾಲಾಜಿ ಲೇಔಟ್ 15ನೇ ಕ್ರಾಸ್, ಎಫ್ 8 ಫೀಡರ್ ದೊಡ್ಡಬಿದ್ರಕಲ್ಲು, ಎಫ್ 9 ಫೀಡರ್ ಜಂಪ್ಕಟ್ ಆಗಿದ್ದರೆ, ಜಕ್ಕೂರು, ಆರ್.ಕೆ. ಹೆಗ್ಡೆ ನಗರ ಎಫ್ 20 ಫೀಡರ್ ಹಾಳಾಗಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ಕೆಲವು ಕಡೆ ಟ್ರಾನ್ಸ್ಫಾರ್ಮರ್ ಹಾಳು
ತ್ಯಾಗರಾಜ ಲೇಔಟ್, ಮಂಗನಪಾಳ್ಯ, ರಾಜೀವ್ ಗಾಂಧಿನಗರ, ಮುನೇಶ್ವರ ಲೇಔಟ್, ಹೊಂಗಸಂದ್ರ, ಗಾರೆಬಾವಿ ಪಾಳ್ಯ, ತಾವರೆಕೆರೆ, ಚಿಕ್ಕ ಆಡುಗೋಡಿ, ಎಸ್.ಜಿ. ಪಾಳ್ಯ, ವಿನಾಯಕ ನಗರ, ಶಾಂತಿ ನಗರ, ಟಿ. ದಾಸರಹಳ್ಳಿ, ಪ್ರಶಾಂತ್ ನಗರ, ರಮೇಶ್ ರೋಡ್, ಕಾವಲ್ ಭೈರಸಂದ್ರ, ವಿರಾಟ ನಗರ, ರೂಪೇನ ನಗರ, ನಾಡಮ್ಮ ಲೇಔಟ್, ಬೊಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ಕೆಲವು ಕಡೆ ಟ್ರಾನ್ಸ್ಫಾರ್ಮರ್ ಹಾಳಾಗಿದ್ದರೆ ಮತ್ತೊಂದೆಡೆ ಫೀಡರ್ ಸಮಸ್ಯೆಯಾಗಿದ್ದು, ಜನರು ವಿದ್ಯುತ್ ಕಡಿತ ಸಮಸ್ಯೆ ಎದುರಿಸಬೇಕಾಗಿದೆ.
ಅದೇ ರೀತಿ ನಾಳೆ (ಅಕ್ಟೋಬರ್ 14) ಕೂಡ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ, ಪೀಣ್ಯ, ಜಯನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್ ವಿಭಾಗಗಳಲ್ಲಿ ನಾಳೆ ಪವರ್ ಕಟ್ ಇರಲಿದೆ. ಹಾಗೆಯೇ, ರಾಜಾಜಿನಗರ, ಆರ್.ಆರ್. ನಗರ, ಕೆಂಗೇರಿಯಲ್ಲಿ ಕೂಡ ಗುರುವಾರ ವಿದ್ಯುತ್ ವ್ಯತ್ಯಯಾಗಲಿದೆ.
ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?
ವಿದ್ಯುತ್ ವಲಯದ ಸಂಶೋಧನಾ ವಿಜ್ಞಾನಿ ನೀಡಿರುವ ಮಾಹಿತಿ ಪ್ರಕಾರ, ಬೆಸ್ಕಾಂ ಸೇರಿದಂತೆ ಇತರೆ ವಿತರಣಾ ವಲಯದ ವ್ಯವಸ್ಥೆ ದುರ್ಬಲವಾಗಿದೆ. ಸರಿಯಾದ ವಿತರಣಾ ಮೂಲಸೌಕರ್ಯದ ಕೊರತೆ, ಅದರ ಅಸಮರ್ಪಕ ಕಾರ್ಯಾಚರಣೆ ಮತ್ತು ನಿರ್ವಹಣೆ ಈ ಪವರ್ ಕಟ್ ಮಾಡಲು ಮೂಲಕ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಕಳಪೆ ನೆಟ್ವರ್ಕ್, ಓವರ್ಲೋಡ್ನಿಂದಾಗಿ ವಿತರಣಾ ಟ್ರಾನ್ಸ್ಫಾರ್ಮರ್ಗಳು ಪದೇ ಪದೇ ಕೈಕೊಡುತ್ತಿವೆ ಎನ್ನಲಾಗುತ್ತಿದೆ.
ಜನರ ಪರದಾಟ ಒಂದೆರೆಡಲ್ಲ
ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಬೆಸ್ಕಾಂನ ಸಾಮಾಜಿಕ ಜಾಲತಾಣಗಳಲ್ಲಂತೂ ಪೂರ್ತಿಯಾಗಿ ದಿನನಿತ್ಯ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ಮಾಹಿತಿಯೇ ತುಂಬಿರುತ್ತದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿದ್ಯುತ್ ಸಮಸ್ಯೆ ಹೆಚ್ಚಿನ ತೊಂದರೆ ಮಾಡುತ್ತಿದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ. ಅಲ್ಲದೇ ಲ್ಯಾಪ್ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.
Recommended Video
ಬೆಸ್ಕಾಂ ವಿರುದ್ಧ ಜನರ ಆಕ್ರೋಶ
ಹಾಗೆಯೇ ಎಲ್ಲರ ಮನೆಯಲ್ಲಿ ಯುಪಿಎಸ್ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನು ಸಹ ತಿಳಿಸದಿರುವುದು ಜನರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಹೇಗಾದರೂ ಸಂಭಾಳಿಸಬಹುದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ವಾರಗಳಿಂದ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಸಹಿಸಿಕೊಳ್ಳುವುದು ಅಸಾಧ್ಯ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.