ಸರ್ಕಾರಿ ನೌಕರರಿಗೆ ರಜೆಯ ಕೊಡುಗೆ ನೀಡಿದ ರಾಜ್ಯ ಸಂಪುಟ
ಬೆಂಗಳೂರು, ಫೆಬ್ರವರಿ 4: ತಿಂಗಳ ನಾಲ್ಕನೇ ಶನಿವಾರ ರಜೆ ಸೌಲಭ್ಯ ಅನ್ವಯವಾಗದ ಸರ್ಕಾರಿ ನೌಕರರಿಗೆ ಹೆಚ್ಚುವರಿ ರಜೆ ಸೌಲಭ್ಯ ಒದಗಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ನಾಲ್ಕನೆ ಶನಿವಾರದ ರಜೆ ಅನ್ವಯವಾಗದ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಸಾಂದರ್ಭಿಕ ರಜೆಯನ್ನು (ಸಿಎಲ್) 10 ದಿನಗಳ ಬದಲು 15 ದಿನಕ್ಕೆ ವಿಸ್ತರಿಸಲು ಅನುಮೋದನೆ ನೀಡಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದ ಎಲ್ಐಸಿ ನೌಕರರು
ಸಾಂದರ್ಭಿಕ ರಜೆ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ಈ ಹಿಂದೆ ಅವರಿಗೆ ಹತ್ತು ದಿನ ಮಾತ್ರ ಸಿಎಲ್ ಸಿಗುತ್ತಿತ್ತು. ಇನ್ನು ಮುಂದೆ ಅವರಿಗೆ ಹದಿನೈದು ದಿನಗಳ ಸಿಎಲ್ ಸಿಗಲಿದೆ. ನಾಲ್ಕನೆಯ ಶನಿವಾರದ ರಜೆ ಪಡೆಯುವವರು 10 ಸಾಂದರ್ಭಿಕ ರಜೆ ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ನೀಡಿದರು.
ಅನುದಾನ ಬಿಡುಗಡೆಗೆ ಅನುಮೋದನೆ
ಬೆಂಗಳೂರಿನ ನಿರ್ವಚನಾ ನಿಲಯದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 13.50 ಕೋಟಿ ರೂ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ವಿವಿಧ ಜಿಲ್ಲೆಗಳಲ್ಲಿ 120 ಆಂಬುಲೆನ್ಸ್ ಖರೀದಿಗೆ 32 ಕೋಟಿ ರೂ., ಶಿಕ್ಷಣ ಇಲಾಖೆಯ ನಲಿ-ಕಲಿ ಕಾರ್ಯಕ್ರಮದಲ್ಲಿ ಕಲಿಕಾ ಸಾಮಗ್ರಿ ವಿತರಿಸಲು 27 ಕೋಟಿ ರೂ., ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ವಿದ್ಯಾಲಯ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 263 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಫೆಬ್ರವರಿಯಲ್ಲಿ 29 ದಿನ; ಬ್ಯಾಂಕ್ ರಜೆಗಳ ಪಟ್ಟಿ
ರೈತರ ಮೇಲಿನ ಪ್ರಕರಣ ವಾಪಸ್
ಕಳಸಾ-ಬಂಡೂರಿ ಹೋರಾಟದ ವೇಳೆ ರೈತರ ಮೇಲೆ ದಾಖಲಾದ ಪ್ರಕರಣಗಳು, ಮಂಡ್ಯದ ಮಾದೇಗೌಡರ ಹೋರಾಟ ಮತ್ತು ರೈತರ ಮೇಲಿನ ವಿವಿಧ 35 ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.
ಅಶ್ಲೀಲ ಸಿ.ಡಿ ಪ್ರಕರಣ ತನಿಖೆ
ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅಶ್ಲೀಲ ಸಿ.ಡಿ. ಬಿಡುಗಡೆ ಮಾಡಿ ಅವರ ಘನತೆಗೆ ಧಕ್ಕೆ ತಂದವರ ವಿರುದ್ಧ 2015ರಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಿಂದಿನ ಸರ್ಕಾರ ಈ ದೂರನ್ನು ಹಿಂದಕ್ಕೆ ಪಡೆಯಲು ಮುಂದಾಗಿತ್ತು. ಆದರೆ ಈ ಸರ್ಕಾರ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ಅಕ್ಕಿ ಮತ್ತು ಗೋಧಿ ಪೂರೈಕೆ
ಅನ್ನದಾಸೋಹ ಯೋಜನೆಯಡಿ 351 ಸಂಸ್ಥೆಗಳಿಗೆ ಅಕ್ಕಿ ಮತ್ತು ಗೋಧಿ ಪೂರೈಸಲಾಗುತ್ತಿತ್ತು. ಇದನ್ನು ಖಾಸಗಿ ಶಾಲೆಗಳಿಗೆ ನಿರ್ಬಂಧಿಸಲಾಗಿತ್ತು. ಅದಕ್ಕೆ ಈಗ 18 ಕೋಟಿ ರೂ. ಸಬ್ಸಿಡಿ ನೀಡಿ ಅಕ್ಕಿ ಮತ್ತು ಗೋಧಿ ವಿತರಣೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.