ಅಲೋಕ್ ಕುಮಾರ್ ಸಿಬಿಐ ಮುಂದಿಟ್ಟ ಸ್ಫೋಟಕ ಮಾಹಿತಿ
Recommended Video
ಬೆಂಗಳೂರು, ಸೆಪ್ಟೆಂಬರ್ 27: ಟೆಲಿಫೋನ್ ಕದ್ದಾಲಿಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಯಲ್ಲಿರುವ ಅಲೋಕ್ ಕುಮಾರ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಒಟ್ಟು 600 ವ್ಯಕ್ತಿಗಳ ದೂರವಾಣಿ ಕರೆಯನ್ನು ಕದ್ದಾಲಿಕೆ ಮಾಡಲಾಗಿದೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಳಿದ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಸಿಬಿಐ ದಾಳಿ ಮಾಡಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಯಾರು
ಈ ಹಿನ್ನೆಲೆಯಲ್ಲಿ ಸಿಬಿಐ ತಂಡ ಅಲೋಕ್ಕುಮಾರ್ ಅವರನ್ನು ಇನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಅವರನ್ನು ವಶಕ್ಕೆ ಪಡೆದರೆ ಯಾವುದೇ ಕ್ಷಣದಲ್ಲಿ ಸೇವೆಯಿಂದ ಅಮಾನತ್ತಾಗುವ ಸಾಧ್ಯತೆ ಇದೆ ಎನ್ನುವ ಸುದ್ದಿಯೂ ಕೇಳಿಬಂದಿದೆ.
ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ದಾಳಿ
ಸೂಕ್ತ ದಾಖಲೆಗಳಿಲ್ಲದೆ ವಿಚಾರಣೆಗೊಳಪಡಿಸಿದರೆ ನ್ಯಾಯಾಲಯದ ಮುಂದೆ ಛೀಮಾರಿ ಹಾಕಿಸಿಕೊಳ್ಳಬಹುದೆಂಬ ಭೀತಿ ಹಿನ್ನೆಲೆಯಲ್ಲಿ ತನಿಖಾ ತಂಡ ಸರಿಯಾದ ಸಂದರ್ಭದಲ್ಲೇ ದೊಡ್ಡವರಿಗೆ ಖೆಡ್ಡಾ ತೋಡಿಸಲು ಸಿಬಿಐ ಸಜ್ಜಾಗಿದೆ.
ಅಲೋಕ್ ಕುಮಾರ್ ಮನೆಯಲ್ಲಿ 8ಕ್ಕೂ ಹೆಚ್ಚು ಗಂಟೆಗಳ ಕಾಲ ಪರಿಶೀಲನೆ
ಗುರುವಾರ ಬೆಳಗ್ಗೆಯಿಂದ ಹೈದರಾಬಾದಿನ ಎಡಿಜಿಪಿ ದರ್ಜೆಯ ಸಿಬಿಐನ 20 ಮಂದಿ ತನಿಖಾ ತಂಡ ಎಂಜಿ ರಸ್ತೆ ಮತ್ತು ಜಾನ್ಸನ್ ಮಾರುಕಟ್ಟೆಯಲ್ಲಿರುವ ನಿವಾಸಗಳಲ್ಲಿ ಸುಮಾರು 8 ಗಂಟೆಗೂ ಹೆಚ್ಚು ಕಾಲ ಅಲೋಕ್ಕುಮಾರ್ ಅವರನ್ನು ವಿಚಾರಣೆಗೊಳಪಡಿಸಿದ್ದರು.
600ಕ್ಕೂ ಹೆಚ್ಚು ವ್ಯಕ್ತಿಗಳ ಕರೆ ಕದ್ದಾಲಿಕೆ?
ಅಂದಿನ ಸಮ್ಮಿಶ್ರ ಸರ್ಕಾರದ ಪ್ರಮುಖರೊಬ್ಬರ ಸೂಚನೆಯಂತೆ ನಾಡಿನ ಪ್ರಮುಖ ಮಠಗಳ ಮಠಾಧೀಶರು, ಸಚಿವರು, ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಸಕರ ಆಪ್ತರು(ಪಿಎ), ವಿಶೇಷ ಕರ್ತವ್ಯ ಅಧಿಕಾರಿಗಳು(ಒಎಸ್ಡಿ), ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು, ಪತ್ರಕರ್ತರು, ರಿಯಲ್ ಎಸ್ಟೇಟ್ ಉದ್ಯಮಿಗಳು 600ಕ್ಕೂ ಹೆಚ್ಚು ವ್ಯಕ್ತಿಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿದ್ದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಮೊದಲು ರೌಡಿಗಳ ದೂರವಾಣಿ ಕರೆ ಕದ್ದಾಲಿಕೆ
ಮೊದಲು ರೌಡಿಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದೆವು. ಆದರೆ ಇದರಲ್ಲಿ ಕೆಲವರು ಪ್ರಮುಖ ಪಕ್ಷಗಳ ಜೊತೆ ಒಡನಾಟ ಹೊಂದಿದ್ದರಿಂದ ಅನಿವಾರ್ಯವಾಗಿ ಸಚಿವರು, ಶಾಸಕರ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ಬಾಯ್ಬಿಟ್ಟಿದ್ದಾರೆ.
ಆ ದೊಡ್ಡವರ್ಯಾರು?
ವಿಚಾರಣೆ ವೇಳೆ ಅಲೋಕ್ಕುಮಾರ್ ದೊಡ್ಡವರ ನಿರ್ದೇಶನ ಎಂದು ಸಾರಿ ಸಾರಿ ಹೇಳಿದ್ದರಿಂದ ಸಿಬಿಐ ಅವರ್ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟಿತ್ತಾದರೂ ಸದ್ಯ ಆ ಹೆಸರನ್ನು ಬಹಿರಂಗಪಡಿಸಿಲ್ಲ ಎನ್ನಲಾಗುತ್ತಿದೆ.
ಇನ್ನು ಟೆಲಿಫೋನ್ ಕದ್ದಾಲಿಕೆಯಲ್ಲಿ ನಾಡಿನ ಪ್ರಭಾವಿ ಮಠಾಧೀಶರೊಬ್ಬರ ದೂರವಾಣಿ ಕರೆಗಳನ್ನು ಸತತ ಆರು ತಿಂಗಳ ಕಾಲ ಕದ್ದಾಲಿಕೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ ಆದರೆ ಯಾವ ಶ್ರೀಗಳು ಎನ್ನುವ ಕುರಿತು ಮಾಹಿತಿ ಇನ್ನೂ ಬಂದಿಲ್ಲ.