ಪರಮೇಶ್ವರ್ ರನ್ನು 'ಚಮಚ' ಎಂದ ಉತ್ತರ ಕರ್ನಾಟಕದ ಪ್ರಭಾವಿ ಕೈ ಮುಖಂಡ
ಬೆಂಗಳೂರು, ಜನವರಿ 09: "ಏಯ್ ಅಧ್ಯಕ್ಷ, ಏಯ್ ಚಮಚ. ನಿಂತ್ಕೊಳ್ಳೊ"- ಹೀಗೆ ಕರೆಸಿಕೊಂಡವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ. ಮಾಧ್ಯಮದ ಎದುರು ಹೀಗೆ ಅವರನ್ನು ಏಕವಚನದಲ್ಲಿ ಕರೆದವರು ಮಾಜಿ ಸಚಿವ ವೈಜನಾಥ ಪಾಟೀಲ್.
ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದಿದ್ದರು ಪರಮೇಶ್ವರ್. ಆ ನಂತರ ಅಲ್ಲಿಂದ ಹೊರಡುತ್ತಿದ್ದ ಅವರ ಬಳಿ, ವೈಜನಾಥ್ ಪಾಟೀಲರು ತಮ್ಮ ಮಗ ವಿಕ್ರಮ್ ಪಾಟೀಲ್ ಗೆ ಶಿಕ್ಷಕರ ಪದವೀಧರ ಕ್ಷೇತ್ರದಿಂದ ಟಿಕೆಟ್ ಕೇಳಿದರು.
ಈ ವೇಳೆ ಪತ್ರಿಕಾಗೋಷ್ಠಿ ಮುಗಿಸಿದ್ದ ಪರಮೇಶ್ವರ್ ಅಲ್ಲಿಂದ ಹೊರಟಿದ್ದರು. ಈ ವೇಳೆ ವೈಜನಾಥ್ ಪಾಟೀಲ್, ಮೊದಲಿಗೆ ನಿಂತ್ಕೊಳ್ರಿ, ಮಾತನಾಡಿರಿ ಅಂದರು. ಆ ನಂತರ, ಏಯ್ ಅಧ್ಯಕ್ಷ, ಏಯ್ ಚಮಚ. ನಿಂತ್ಕೊಳ್ಳೊ ಎಂದು ಏಕವಚನದಲ್ಲಿ, ಜೋರು ಧ್ವನಿಯಲ್ಲಿ ಕರೆದರು.
ಏಕವಚನ ಪ್ರಯೋಗ: ಬಿಎಸ್ವೈಗೆ ಸಿದ್ದು ಓಪನ್ ಚಾಲೆಂಜ್
ವೈಜನಾಥ್ ಅವರು ಕರೆದದ್ದು ಕೇಳಿದರೂ ಮುಜುಗರದಿಂದ ತಪ್ಪಿಸಿಕೊಳ್ಳಲು ಪರಮೇಶ್ವರ್ ಅವರು ಹಾಗೇ ಹೊರಟು ಹೋದರು. ಅಲ್ಲೇ ಇದ್ದ ಕೆಪಿಸಿಸಿಯ ಮಾಧ್ಯಮ ಪ್ರತಿನಿಧಿಗಳು ವೈಜನಾಥ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.
ಧರಂ ಸಿಂಗ್, ಖರ್ಗೆ ಮಕ್ಕಳಿಗೆ ಟಿಕೆಟ್ ಕೊಡ್ತೀರಿ
ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೈಜನಾಥ ಪಾಟೀಲ್, 'ಧರಂಸಿಂಗ್, ಖರ್ಗೆ ಅವರ ಮಕ್ಕಳಿಗೆ ಯಾವುದೇ ಶಿಫಾರಸುಗಳಿಲ್ಲದೆ ಚುನಾವಣಾ ಟಿಕೆಟ್ ನೀಡುತ್ತಾರೆ. ನನ್ನ ಮಗನಿಗೆ ಟಿಕೆಟ್ ನೀಡಲು ಮಾತ್ರ ಹಿಂದೆ ಮುಂದೆ ನೋಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಬ್ಬರೂ ದಕ್ಷಿಣ ಕರ್ನಾಟಕದವರು
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ದಕ್ಷಿಣ ಕರ್ನಾಟಕ ಭಾಗಕ್ಕೆ ಸೇರಿದವರು. ಹಾಗಾಗಿ ಉತ್ತರ ಕರ್ನಾಟಕದ ಭಾಗದ ರಾಜಕಾರಣಿಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎಂದ ಅವರು, ಇಬ್ಬರಲ್ಲಿ ಒಬ್ಬರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ಆ ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದ ಸದಸ್ಯರನ್ನು ನೇಮಿಸಬೇಕು ಎಂದರು.
ಎಐಸಿಸಿಗೆ ದೂರು
ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರೂ ಆಗಿದ್ದ ಅವರು, ಹೈ-ಕ ಭಾಗದಲ್ಲಿ ಸರ್ಕಾರಿ ನೇಮಕಾತಿಗಳು ಸರಿಯಾಗಿ ಆಗದಿರುವ ಬಗ್ಗೆ ಹಾಗೂ ಮಗನಿಗೆ ಟಿಕೆಟ್ ನೀಡಲು ಸತಾಯಿಸುತ್ತಿರುವ ಬಗ್ಗೆ ಎಐಸಿಸಿಗೆ ದೂರು ನೀಡುವುದಾಗಿ ಹೇಳಿದರು.
ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ
ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದ್ದು, ಇಂಥ ಸನ್ನಿವೇಶದಲ್ಲಿ ಬಂಡಾಯ ಕಾವು ಎಬ್ಬಿಸಬಹುದಾದ ವಿಚಾರಗಳನ್ನು ವೈಜನಾಥ ಪಾಟೀಲ್ ರಂಥ ಹಿರಿಯ ಮುಖಂಡರು ಎತ್ತಿರುವುದು ಇಂಥದ್ದೇ ಆಕ್ಷೇಪಗಳನ್ನು ಇತರರು ಸಹ ತೆಗೆಯುವ ಸಾಧ್ಯತೆ ಇದೆ. ಈ ಬೆಂಕಿ ಮತ್ತೂ ಹೆಚ್ಚಾದರೆ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.