ಸ್ತ್ರೀಶಕ್ತಿ ಯೋಜನೆ ರೂವಾರಿ ಮೋಟಮ್ಮರ ಜೀವನಗಾಥೆ 'ಬಿದಿರು ನೀನಾರಿಗಲ್ಲದವಳು' ಬಿಡುಗಡೆ
ಬೆಂಗಳೂರು, ಜೂನ್ 11: ಮಾಜಿ ಸಚಿವೆ ಮೋಟಮ್ಮರವರು ಬರೆದಿರುವ ಆತ್ಮ ಚರಿತ್ರೆ 'ಬಿದಿರು ನೀನಾರಿಗಲ್ಲದವಳು' ಪುಸ್ತಕವನ್ನು ರವೀಂದ್ರ ಕಲಾಕ್ಷೇತದಲ್ಲಿ ಬಿಡುಗಡೆ ಮಾಡಲಾಯಿತು. ಮಾಜಿ ಸಿಎಂ ಎಸ್ಎಂ ಕೃಷ್ಣ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಡಾ. ಜಿ ಪರಮೇಶ್ವರ್ , ಬಿಟಿ ಲಲಿತಾ ನಾಯಕ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮಾಜಿ ಸಿಎಂ ಎಸ್ ಎಮ್ ಕೃಷ್ಣ ಮಾತು
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಾತನಾಡಿ "ಮೋಟಮ್ಮರವರು ಎಂದು ತನ್ನನ್ನು ಮಂತ್ರಿ ಮಾಡಿ ಎಂದು ಕೇಳಿದವರಲ್ಲ. ಎಂದೂ ಸಹ ಅಹಂನಿಂದ ವರ್ತಿಸಿದವರಲ್ಲ. ಮಾಜಿ ಪ್ರಧಾನಿ ದಿ. ಇಂದಿರಾಗಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರಿಗೆ ನಿಷ್ಠರಾಗಿದ್ದವರು. ನಾನು ಮುಖ್ಯಮಂತ್ರಿಯಾಗಿದ್ದಾಗ ಮೂಡಿಗೆರೆಯಂತಹ ಸೂಕ್ಷ್ಮ ಪ್ರದೇಶದಿಂದ ಗೆದ್ದು ಬಂದವರು. ಮಂಡ್ಯದ ಸೊಸೆ ಎಂಬ ಮಮಕಾರದಿಂದ ಮಂತ್ರಿಯನ್ನು ಮಾಡಲಾಗಿತ್ತು'' ಎಂದು ಮೋಟಮ್ಮರವರ ಕಾರ್ಯವನ್ನು ಹೊಗಳಿದರು.
ಜ್ಞಾನವಾಪಿ ಪ್ರಕರಣ: ನ್ಯಾ| ಅಜಯ್ ಕೃಷ್ಣ ವಿಶ್ವೇಶ ಅವರ ಬಗ್ಗೆ ತಿಳಿಯಿರಿ
ಮೊಟಮ್ಮ ಅನುಷ್ಠಾನ ತಂದ ಸ್ತ್ರೀಶಕ್ತಿ ಯೋಜನೆ
ಇದೊಂದು ಅಪರೂಪದ ಕಾರ್ಯಕ್ರಮ. ನಮ್ಮ ಮನೆಯ, ಕುಟುಂಬದ ಹೆಣ್ಣು ಮಗಳ ಕಾರ್ಯಕ್ರಮ ಎಂದು ಭಾವಿಸಿ ಬಂದಿದ್ದೇನೆ. ನಿಮ್ಮ ಜತೆ ನಾನು ಎಂದೆಂದಿಗೂ ಇರುತ್ತೇನೆ ಎಂದು ಹೇಳಲು ಬಂದಿದ್ದೇನೆ. ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಯೋಜನೆಯ ಚಿಂತನೆ ಬಂತು. ಈ ಜವಾಬ್ದಾರಿಯನ್ನು ಮೋಟಮ್ಮನವರಿಗೆ ವಹಿಸಲಾಯ್ತು. ಆಗ ಅನುಷ್ಠಾನಕ್ಕೆ ಬಂದ ಸ್ತ್ರೀ ಶಕ್ತಿ ಯೋಜನೆ ಇಂದು ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿದೆ. ಸಹಕಾರ ಕ್ಷೇತ್ರವಲ್ಲದೆ ಖಾಸಗೀಯವರೂ ಜಾರಿಗೆ ತಂದಿದ್ದಾರೆ. ಧರ್ಮಸ್ಥಳ ಗ್ರಾಮೀಣ ಯೋಜನೆಯಲ್ಲೂ ಸ್ತ್ರೀಶಕ್ತಿ ಗುಂಪುಗಳಿವೆ. ಅಂತಹ ಮಹಾನ್ ಯೋಜನೆ ಎಸ್.ಎಂ. ಕೃಷ್ಣ, ನಾವು, ಮೋಟಮ್ಮ ಎಲ್ಲ ಸೇರಿ ಯಶಸ್ವಿಗೊಳಿಸಿದೆವು.
ಮೋಟಮ್ಮ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು..?
ಮೋಟಮ್ಮ ಅವರ ಮಗಳು ನಯನ ಹೇಳಿದಂತೆ ನಾನು ಅವರ ರಾಜಕೀಯ ಗುರು ಎಂಬ ಮಾತುಗಳು ಒಪ್ಪಲು ಸಿದ್ದನಿಲ್ಲ. ಈ ಜಗತ್ತಿನಲ್ಲಿ ತಾಯಿಯೇ ಮೊದಲ ಗುರು. ಅಮ್ಮನ ನೆನಪು ಪ್ರೀತಿಯ ಮೂಲ. ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಸ್ನೇಹದ ನೆನಪು ಸಂಬಂಧದ ಮೂಲ, ಈ ನಾಲ್ಕರ ನೆನಪು ಮನುಷ್ಯತ್ವದ ಮೂಲ. ಹಾಗೆ ನಾವೆಲ್ಲಾ ನಮ್ಮದೇ ಆದ ಪ್ರೀತಿ, ಸ್ನೇಹ, ಸಂಬಂಧದ ಆಧಾರದ ಮೇಲೆ ಬದುಕು ನಡೆಸುತ್ತಿದ್ದೇವೆ.
1978 ರಲ್ಲೇ ಶಾಸಕರಾದ ತಮ್ಮ ತಾಯಿ ಮೋಟಮ್ಮ ಅವರಿಂದ ಜನರ ಜತೆ ಒಡನಾಡುವ ಬಗೆ, ವರ್ತನೆಯನ್ನು ನಯನ ಕಲಿತಿದ್ದಾರೆ. ಮೋಟಮ್ಮ ಅವರು ಕೆತ್ತಿ, ಕೆತ್ತಿ ಅವರನ್ನು ವಿಗ್ರಹ ಮಾಡಿದ್ದಾರೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಹೀಗಾಗಿ ಅವರಿಗೆ ತಾಯಿಯೇ ಗುರು ಎಂದು ಡಿಕೆ ಶಿವಕುಮಾರ್ ಹೇಳಿದರು.