'ಕಾಂಗ್ರೆಸ್ ಕಾರ್ಪೋರೇಟರ್ ಗಳ ವಿರುದ್ಧ ಮಾನನಷ್ಟ ಮೊಕದ್ದಮೆ'
ಬೆಂಗಳೂರು, ಜುಲೈ 25: ಕೆರೆ ಜಾಗವನ್ನು ಕಬಳಿಸಿದ್ದೇನೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ನ ಕೆಲ ಕಾರ್ಪೋರೇಟರ್ ಗಳು ಆರೋಪ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಮಾಜಿ ಕಾರ್ಪೋರೇಟರ್ ಬಿ.ಆರ್.ನಂಜುಂಡಪ್ಪ ಹೇಳಿದ್ದಾರೆ.
ನಕಲಿ ಬಿಲ್ ಹಗರಣ, ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್
ಈ ಹಿಂದೆ ನಾನು ಕಾರ್ಪೋರೇಟರ್ ಆಗಿದ್ದ ಸಂದರ್ಭದಲ್ಲಿ ಜೆಪಿ ಉದ್ಯಾನವನದ ಕೆರೆಯ 28 ಎಕರೆ ಜಾಗವನ್ನು ಕಬಳಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಜೆಪಿ ಉದ್ಯಾನ ಕೆರೆಯ ವಿಸ್ತೀರ್ಣದ ಬಗ್ಗೆ ಸದನ ಸಮಿತಿ ಸರ್ವೇ ನಡೆಸಿದೆ. ಅದರಂತೆ ಕೆರೆಯ ವಿಸ್ತೀರ್ಣ 103 ಎಕರೆ 15 ಗುಂಟೆ ಎಂದು ನಮೂದಾಗಿದೆ. ಈ ಜಾಗವನ್ನು ಯಾವ ಯಾವ ಉದ್ದೇಶಗಳಿಗೆ ಬಳಕೆ ಮಾಡಿದೆ ಎಂಬುದು ಮತ್ತು ಎಷ್ಟು ಜಾಗ ಉಳಿದಿದೆ ಎಂಬುದರ ಬಗ್ಗೆ ನಕ್ಷೆ ಸಹಿತವಾದ ಮಾಹಿತಿ ಸರಕಾರದ ಬಳಿಯೇ ಇದೆ. ಹೀಗಾಗಿ ನಾನು ಕೆರೆಯ ಯಾವುದೇ ಭಾಗವನ್ನು ಕಬಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಯಶವಂತಪುರ ವಾರ್ಡಿನ ಜಿ.ಕೆ.ವೆಂಕಟೇಶ್ ಮತ್ತು ಲಕ್ಷ್ಮಿದೇವಿನಗರ ವಾರ್ಡಿನ ಎಂ.ವೇಲುನಾಯಕ್ ನನ್ನ ವಿರುದ್ಧ ವಿನಾಕಾರಣ ಭೂಕಬಳಿಕೆಯ ಆರೋಪಗಳನ್ನು ಮಾಡುವ ಮೂಲಕ ತೇಜೋವಧೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ನಂಜುಂಡಪ್ಪ ತಿಳಿಸಿದರು.
ಮುನಿರತ್ನ ಕಟ್ಟಡದಲ್ಲಿ ಬಿಬಿಎಂಪಿ ಕಡತ : ಸಿಬಿಐ ತನಿಖೆಗೆ ಒತ್ತಾಯ
ನಮ್ಮ ಕುಟುಂಬದವರೇ ಆದ ಬಿ.ಎಸ್.ವಾಸುದೇವ್ ಅವರನ್ನು ರೌಡಿ ಎಂದು ಕರೆದಿದ್ದಾರೆ. ಹಾಗಾದರೆ ವಾಸುದೇವ್ ಮೇಲೆ ಯಾವ ಪೊಲೀಸ್ ಠಾಣೆಯಲ್ಲಿ ಕೇಸುಗಳಿವೆ, ಯಾವ ಠಾಣೆಯಲ್ಲಿ ರೌಡಿಶೀಟರ್ ತೆರೆದಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕು. ಈ ಬಗ್ಗೆ ಸಾರ್ವಜನಿಕವಾಗಿ ವಿವರಣೆ ನೀಡಬೇಕೆಂದು ನಂಜುಂಡಪ್ಪ ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ಸವಾಲು ಹಾಕಿದರು.
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಶಾಸಕರಾದ ಮುನಿರತ್ನ ಅವರು ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಇಂತಹ ವೃಥಾ ಆರೋಪಗಳನ್ನು ಪ್ರತಿಪಕ್ಷಗಳ ನಾಯಕರ ಮೇಲೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.