ಕಾವೇರಿ ನಿವಾಸ ಖಾಲಿ ಮಾಡುತ್ತಿಲ್ಲವೇಕೆ ಮಾಜಿ ಸಿಎಂ ಸಿದ್ದರಾಮಯ್ಯ?
ಬೆಂಗಳೂರು, ಜನವರಿ.15: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರಿನಲ್ಲಿರುವ ಕಾವೇರಿ ನಿವಾಸಕ್ಕೂ ಅದೆಲ್ಲಿಯದೋ ನಂಟು ಎಂದು ಅನಿಸುತ್ತದೆ. ಬಾರಿ ಬಾರಿ ಸೂಚನೆ ಕೊಟ್ಟರೂ ಇದುವರೆಗೂ ಸಿದ್ದು, ತಮ್ಮ ಕಾವೇರಿ ನಿವಾಸವನ್ನು ಮಾತ್ರ ಖಾಲಿ ಮಾಡಿಲ್ಲ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗೆ ಮೀಸಲು ನಿವಾಸವಾಗಿರುವ ಕಾವೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಆರೂವರೆ ವರ್ಷಗಳಿಂದಲೂ ವಾಸ್ತವ್ಯ ಹೂಡಿದ್ದಾರೆ. ಇತ್ತೀಚಿಗಷ್ಟೇ ತಮ್ಮ ಕಾವೇರಿ ನಿವಾಸವನ್ನು ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಸ್ವತಃ ಸಿದ್ದರಾಮಯ್ಯ ಹೇಳಿದ್ದರು.
'ಕಾವೇರಿ' ನಿವಾಸ ಬಿಡುವುದು ಯಾವಾಗ?: ದಿನಾಂಕ ಹೇಳಿದ ಸಿದ್ದರಾಮಯ್ಯ
ಜನವರಿ.15ರಂದು ಕಾವೇರಿ ನಿವಾಸವನ್ನು ದುರಸ್ಥಿಗೊಳಿಸಿ ನಂತರ ಸರ್ಕಾರಕ್ಕೆ ವಾಪಸ್ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಲೋಕೋಪಯೋಗಿ ಇಲಾಖೆಯು ತಿಳಿಸಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ್ದು 2 ತಿಂಗಳ ಅವಕಾಶ
ಮುಖ್ಯಮಂತ್ರಿಗೆ ಮೀಸಲು ಆಗಿರುವ ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಬಿಜೆಪಿ ಸರ್ಕಾರವು ಈ ಹಿಂದೆಯೇ ಸಿದ್ದರಾಮಯ್ಯರಿಗೆ ಸೂಚನೆ ನೀಡಿತ್ತು. ಅದಕ್ಕಾಗಿ ಎರಡು ತಿಂಗಳ ಕಾಲಾವಕಾಶ ಕೋರಿದ್ದ ಸಿದ್ದು, ಮನೆ ದುರಸ್ಥಿ ನಂತರ ಸರ್ಕಾರಕ್ಕೆ ವಾಪಸ್ ಮಾಡುವುದಾಗಿ ತಿಳಿಸಿದ್ದರು. ಜನವರಿ.15ರೊಳಗೆ ಕಾವೇರಿ ನಿವಾಸವನ್ನು ಖಾಲಿ ಮಾಡುವುದಾಗಿ ಹೇಳಿದ್ದರು. ಆದರೆ, ಅದ್ಯಾಕೋ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸವನ್ನು ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಸಿದ್ದರಾಮಯ್ಯ ವಾಸ್ತವ್ಯ
ಈ ಕಾವೇರಿ ನಿವಾಸಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಒಂದು ರೀತಿ ನಂಟು. ಕಳೆದ ಆರೂವರೆ ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ನೀಡಿದ್ದ ಕಾವೇರಿ ನಿವಾಸದಲ್ಲೇ ಇಂದಿಗೂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬದಲಾಗಿ ಸಮ್ಮಿಶ್ರ ಸರ್ಕಾರವು ಅಸ್ತಿತ್ವಕ್ಕೆ ಬಂತು. ಈ ವೇಳೆ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಇದೇ ಕಾವೇರಿ ನಿವಾಸವನ್ನು ಮಂಜೂರು ಮಾಡಲಾಗಿತ್ತು. ಆದರೆ, ಕೆ.ಜೆ.ಜಾರ್ಜ್ ಬದಲಿಗೆ ಸಿದ್ದರಾಮಯ್ಯನವರೇ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ರಾಜ್ಯ ಬಿಜೆಪಿ
ಸಿಎಂ ಸ್ಥಾನದಿಂದ ಕೆಳಗಿಳಿದ ನಂತರವೂ ಕಾವೇರಿ ನಿವಾಸವನ್ನು ಖಾಲಿ ಮಾಡದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದರು. ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ 'ಕಾವೇರಿ' ನಿವಾಸದ ವಿಷಯವಾಗಿ ಸಿದ್ದರಾಮಯ್ಯ ಕಾಲೆಳೆದಿತ್ತು. 'ಕಾವೇರಿ' ನಿವಾಸ ಬಿಡುವಂತೆ ಸೂಚಿಸಿದ್ದರೂ ಸಹ 'ಮಜಾವಾದಿ' ಸಿದ್ದರಾಮಯ್ಯ ಇನ್ನೂ ಅಲ್ಲೇ ಝಾಂಡಾ ಊರಿದ್ದಾರೆ ಎಂದು ಮೂದಲಿಸಿತ್ತು.
ಈ ಮಾರ್ಗದಲ್ಲೇ ಸಿಎಂ ಸಂಚಾರ, ಪ್ರಯಾಣಿಕರ ಸ್ಥಿತಿ ಹರೋಹರ!
ಇನ್ನು, ಸಿದ್ದರಾಮಯ್ಯ ಕಾವೇರಿ ನಿವಾಸ ಖಾಲಿ ಮಾಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಸ್ವಂತ ನಿವಾಸ ಧವಳಗಿರಿಯಿಂದಲೇ ನಿತ್ಯ ಓಡಾಟ ನಡೆಸುತ್ತಿದ್ದಾರೆ. ಧವಳಗಿರಿ ನಿವಾಸದಿಂದ ನಿತ್ಯ ವಿಧಾನಸೌಧಕ್ಕೆ ಮುಖ್ಯಮಂತ್ರಿಗಳು ಪ್ರಯಾಣ ಬೆಳೆಸುತ್ತಾರೆ. ಇದರಿಂದ ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.