ಎಚ್ಡಿಕೆಗೆ ಅಪಮಾನ; ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ದೂರು
ಬೆಂಗಳೂರು,ಜು.20: ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾಕ್ಸಮರ ಟ್ರೋಲಿಗರಿಗೆ ಆಹಾರವಾಗಿದೆ. ಇಂದ್ರಜಿತ್ ಲಂಕೇಶ್ ಜತೆಗೆ ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಮಾಡಿರುವುದು ವೈರಲ್ ಆಗಿದೆ. ಕುಮಾರಸ್ವಾಮಿ ಹಾಗೂ ಇಂದ್ರಜಿತ್ ಲಂಕೇಶ್ ಪೋಟೋಗಳನ್ನು ಹಾಕಿ ಸೂತ್ರಧಾರಿ ಕರಿ ಇಡ್ಲಿ, ಪಾತ್ರಧಾರಿ ಬಿಳಿ ಬಾಂಡ್ಲಿ ಎಂದು ಹಂಗಿಸಿ ಟ್ರೋಲ್ ಮಾಡಲಾಗಿದೆ.
ಇಂದ್ರಜಿತ್ ಲಂಕೇಶ್ ನಿನ್ನೆಯಷ್ಟೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ನಟ ದರ್ಶನ್ ಹಿಂಬಾಲಕರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನ ಮಾಡಲಾಗುತ್ತಿದೆ. ನನ್ನ ಮೊಬೈಲ್ಗೆ ನಿರಂತರ ಕರೆ ಮಾಡುವ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರನ್ನು ಬಳಸಿ ಟ್ರೋಲ್ ಮಾಡಿರುವ ಟ್ರೋಲ್ ಮಗ ಪೇಜ್ ಅಡ್ಮಿನ್ ವಿರುದ್ಧ ಜೆಡಿಎಸ್ ಕಾನೂನು ಘಟಕದಿಂದ ದೂರು ನೀಡಲಾಗಿದೆ.
Recommended Video
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತಂದು ತೇಜೋವಧೆ ಮಾಡಲಾಗುತ್ತಿದೆ. ಸೂತ್ರಧಾರಿ ಎಂಬ ಪೋಸ್ಟ್ನಲ್ಲಿ ಅವಾಚ್ಯ ಪದ ಬಳಿಸಿ ಅಪಹಾಸ್ಯ ಮಾಡಲಾಗಿದೆ. ಕುಮಾರಸ್ವಾಮಿ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಅಗೌರವ ತೋರಿ ತೇಜೋವಧೆ ಮಾಡಿರುವ ಟ್ರೋಲ್ ಮಗ ಪೇಜ್ ವಿರುದ್ಧ ಐಟಿ ಕಾಯ್ದೆ ಅಡಿ ಕೇಸು ದಾಖಲಿಸಿ ಕ್ರಮ ಜರುಗಿಸುವಂತೆ ಜೆಡಿಎಸ್ ಕಾನೂನು ಘಟಕದ ಕಾರ್ಯದರ್ಶಿ ಪ್ರದೀಪ್ ದೂರಿನಲ್ಲಿ ಮನವಿ ಮಾಡಿದ್ದಾರೆ.