ಒತ್ತುವರಿ ತೆರವು : ಕ್ರಮ ತೆಗೆದುಕೊಳ್ಳಲು ಮತ್ತೆ ಹಿಂದೇಟು
ಬೆಂಗಳೂರು, ಅಕ್ಟೋಬರ್, 18: ರಾಜಕಾಲುವೆ ಒತ್ತುವರಿ ತೆರವು ವಿಷಯದಲ್ಲಿ ಬಡವರ ಮೇಲೆ ಗದಾ ಪ್ರಹಾರ ಮಾಡುವ ಸರ್ಕಾರ ಪ್ರಭಾವಿಗಳ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ನಟ ದರ್ಶನ್ ಅವರ ಮನೆ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಎಸ್. ಎಸ್. ಆಸ್ಪತ್ರೆ ತೆರವುಗೊಳಿಸುವ ಸಂಬಂಧ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿತ್ತು. [ಒತ್ತುವರಿ ತೆರವು : ನಟ ದರ್ಶನ್ ಮನೆ ಒತ್ತುವರಿ ತೆರವಿಲ್ಲ?]
ತೆರವುಗೊಳಿಸುವ ಕುರಿತು ಅ.17ರಂದು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬುದನ್ನು ಸರ್ಕಾರವೇ ಮತ್ತೊಮ್ಮೊ ಸಾಬೀತು ಪಡಿಸಿದಂತೆ ಆಗಿದೆ.[ಒತ್ತುವರಿಗೆ ಎಂದು ಕೊನೆ, ತೆರವಾಗುತ್ತಾ ದರ್ಶನ್ ಮನೆ?]
ಈ ಬಗ್ಗೆ ಅ.14ರಂದು ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದ, ತಹಶೀಲ್ದಾರ್ ಶಿವಕುಮಾರ್, "ನಟ ದರ್ಶನ್ ಅವರು ಒಟ್ಟು 2,100 ಚ.ಅಡಿ ರಾಜ ಕಾಲುವೆ ಪ್ರದೇಶ ಒತ್ತುವರಿ ಮಾಡಿ ಮನೆ ನಿರ್ಮಿಸಿರುವುದು ದೃಢಪಟ್ಟಿದೆ. ಈ ಸಂಬಂಧ ವರದಿ ಸಿದ್ಧಪಡಿಸಲಾಗಿದ್ದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ" ಎಂದು ತಿಳಿಸಿದ್ದರು.
ಅದೇ ರೀತಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಎಸ್. ಎಸ್. ಆಸ್ಪತ್ರೆಯೂ ಸಹ 22ಗುಂಟೆ ರಾಜಕಾಲುವೆ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂಬ ವಿಷಯವನ್ನು ತಿಳಿಸಿದ್ದರು. ಈ ಕುರಿತ ವರದಿ ಸಿದ್ಧಪಡಿಸಲಾಗಿದೆ, ಅ.17ರಂದು ತೆರವುಗೊಳಿಸುವ ಕುರಿತು ಜಿಲ್ಲಾಧಿಕಾರಿಯವರು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದರು.