ಐಐಎಸ್ಸಿ ಸ್ಫೋಟ: ಆಸ್ಪತ್ರೆಯಲ್ಲಿರುವ ಎಂಜಿನಿಯರ್ಗಳ ಸ್ಥಿತಿ ಹೇಗಿದೆ?
ಬೆಂಗಳೂರು, ಡಿಸೆಂಬರ್ 7: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಐಐಎಸ್ಸಿಯ ಪ್ರಯೋಗಾಲಯದಲ್ಲಿ ಸಂಭವಿಸಿದ ಸ್ಫೋಟದಿಂದ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿ ಮನೋಜ್ ಕುಮಾರ್ ಮೃತಪಟ್ಟಿದ್ದರು.
ಉಳಿದ ಮೂರು ಮಂದಿ ಎಂಜಿನಿಯರ್ಗಳು ಗಂಭೀರವಾಗಿ ಗಾಯಗೊಂಡಿದ್ದರಿಂದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿತ್ತು.
ಮೈಸೂರಿನಲ್ಲಿ ಯುವ ವಿಜ್ಞಾನಿ ಮನೋಜ್ ಕುಮಾರ್ ಅಂತ್ಯಕ್ರಿಯೆ
ಯಾವುದೇ ಕಣ್ತಪ್ಪಿನಿಂದ ನಡೆದಿರುವ ಘಟನೆ ಇದಲ್ಲ ಅಚಾನಕ್ ಆಗಿ ಸಂಭವಿಸಿದೆ ಎಂದು ಐಐಎಸ್ಸಿ ಆಡಳಿತ ಮಂಡಳಿ ತಿಳಿಸಿದೆ. ಅತುಲ್ಯ ಕುಮಾರ್, ಕಾರ್ತಿಕ್, ನರೇಶ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಜಿನಿಯರ್ಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅತುಲ್ಯ ಅವರಿಗೆ ಮುಖದ ಎಡಭಾಗದಲ್ಲಿ ಸುಟ್ಟ ಗಾಯಗಳಾಗಿವೆ,ಕುತ್ತಿಗೆ, ಭುಜದಲ್ಲೂ ಗಾಯಗಳಾಗಿವೆ.ಅವರನ್ನು ಐಸಿಯುನಲ್ಲಿಯೇ ಇರಿಸಲಾಗಿದೆ ಎಂದು ಎಂಎಸ್ ರಾಮಯ್ಯ ಆಸ್ಪತ್ರೆಯ ವೈದ್ಯ ನರೇಶ್ ತಿಳಿಸಿದ್ದಾರೆ.
ಐಐಎಸ್ಸಿ ಸಂಶೋಧನಾ ನಿರತ ವಿಜ್ಞಾನಿ ದಾರುಣ ಸಾವು
ಅತುಲ್ಯ ಅವರ ತಾಯಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಅವರ ತಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನರೇಶ್ ಕುಮಾರ್ ಅವರಿಗೆ ಸಹೋದರ, ಸಹೋದರಿ ಇದ್ದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ವಾಸವಾಗಿದ್ದಾರೆ.
ಕಾರ್ತಿಕ್ ಶೆಣೈ ಮೂಲತಃ ಮಂಗಳೂರಿನವನಾಗಿದ್ದು, ಇತ್ತೀಚೆಗೆ ಅವರ ತಂದೆ ನಿಧನರಾಗಿದ್ದರು. ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮನೋಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಮೈಸೂರಿನಲ್ಲಿ ಗುರುವಾರ ನಡೆಸಲಾಯಿತು.ಇಬ್ಬರು ಪ್ರೊಫೆಸರ್ ವಿರುದ್ಧ ದೂರು: ದುರಂತ ಸಂಬಂಧ ಐಐಎಸ್ ಭದ್ರತಾ ಸಲಹೆಗಾರರಾದ ಎಂಆರ್ ಚಂದ್ರಶೇಖರ್ ದೂರು ಕೊಟ್ಟಿದ್ದು, ಪ್ರೊಫೆಸರ್ಗಳಾದ ಕೆಪಿಜೆ ರೆಡ್ಡಿ ಹಾಗೂ ಜಿ ಜಗದೀಶ್ ವಿರುದ್ಧ ಐಪಿಸಿ 338 ಹಾಗೂ 304ಎ ಗಳಡಿ ಎಫ್ಐಆರ್ ದಾಖಲಾಗಿದೆ.
ಸೆಕ್ಯುರಿಟಿ ಆಡಿಟ್ ನಡೆಸಲು ನಿರ್ಧಾರ: ಪ್ರಯೋಗಾಲಯದಲ್ಲಿ ಸ್ಫೋಟದ ಹಿನ್ನೆಲೆ ಸಂಸ್ಥೆಯ ಇತರೆ ಪ್ರಯೋಗಾಲಯದಲ್ಲೂ ಸುರಕ್ಷತೆ ಪರಿಶೀಲಿಸಲು ಸೆಕ್ಯುರಿಟಿ ಆಡಿಟ್ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ನಿರ್ಧರಿಸಿದೆ. ತಕ್ಷಣದಿಂದಲೇ ಎಲ್ಲಾ ಪ್ರಯೋಗಗಳಲ್ಲೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ.
ಪ್ರಯೋಗ ವೇಳೆ ಕಿಡಿ ತಾಗಿ ಅನಾಹುತ: ಜಲಜನಕ ಹಾಗೂ ಆಮ್ಲಜನಕ ತುಂಬಿದ್ದ ಸಿಲಿಂಡರ್ ಗೆ ಬೆಂಕಿ ಕಿಡಿ ತಾಗಿದ್ದರಿಂದ ಅವಘಡ ಸಂಭವಿಸಿದೆ ಎಂಬುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಬಹಿರಂಗವಾಗಿದೆ.ಎಫ್ಎಸ್ಎಲ್ ತಜ್ಞರು ಸಿಲಿಂಡರ್ ಸ್ಫೋಟಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಿಲಿಂಡರ್ ಚೂರುಗಳು ಗಾಯಾಳುಗಳ ದೇಹದಲ್ಲಿ ಸಿಕ್ಕಿವೆ.
ಮನೋಜ್ ಕುಟುಂಬಕ್ಕೆ 10 ಲಕ್ಷ ರೂ ನೀಡಿದ ಐಐಎಸ್ಸಿ; ಐಐಎಸ್ಸಿ ಸ್ಫೋಟದಲ್ಲಿ ಮೃತಪಟ್ಟಿರುವ ಮನೋಜ್ ಕುಮಾರ್ ಅವರ ಕುಟುಂಬಕ್ಕೆ ಐಐಎಸ್ಸಿ 10 ಲಕ್ಷ ರೂ ನೀಡಿದೆ. ಹಾಗೆಯೇ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಆಡಳಿತ ಮಂಡಳಿ ತಿಳಿಸಿದೆ.