ತಂದೆಗೆ ಆಡಳಿತ ಮಂಡಳಿ ಅವಮಾನ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು, ಅಕ್ಟೋಬರ್ 22: ತಂದೆಗೆ ಕಾಲೇಜು ಆಡಳಿತ ಮಂಡಳಿ ಅವಮಾನ ಮಾಡಿ, ತನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಿನ್ನೆ ನಡೆದಿದೆ.
ನಗರದ ವರ್ತೂರು ಹೋಬಳಿ ಕಸವನಹಳ್ಳಿಯಲ್ಲಿರುವ ಅಮೃತ ವಿಶ್ವವಿದ್ಯಾಪೀಠ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ಶ್ರೀಹರ್ಷ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಮೃತ ವಿಶ್ವವಿದ್ಯಾಪೀಠ ಕಾಲೇಜಿನ ವಿದ್ಯಾರ್ಥಿ ಶ್ರೀಹರ್ಷ ಅದೇ ಕಾಲೇಜಿನ ಹಾಸ್ಟೆಲ್ನಲ್ಲಿದ್ದರು. ಹಾಸ್ಟೆಲ್ನಲ್ಲಿ ನೀರು ಮತ್ತು ಊಟದ ವ್ಯವಸ್ಥೆ ಸರಿಯಿಲ್ಲವೆಂದು ಕೆಲವು ವಿದ್ಯಾರ್ಥಿಗಳ ಜೊತೆ ಸೇರಿ ಸೆಪ್ಟೆಂಬರ್ 23 ರಂದು ಪ್ರತಿಭಟನೆ ನಡೆಸಿದ್ದರು. ಆ ವೇಳೆ ಕಾಲೇಜಿನ ಮೇಲೆ ಕಲ್ಲು ತೂರಾಟ ಸಹ ನಡೆದಿತ್ತು.
ಕಾಲೇಜಿನ ಶಿಸ್ತು ಸಮಿತಿಯು ಶ್ರೀಹರ್ಷ ಸೇರಿ 21 ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿತ್ತು. ಶ್ರೀಹರ್ಷ ಅವರ ತಂದೆಯನ್ನು ಕಾಲೇಜಿಗೆ ಬರಲು ತಿಳಿಸಿತ್ತು. ಅದರಂತೆ ಸೋಮವಾರ ಬೆಳಿಗ್ಗೆ ಶ್ರೀಹರ್ಷ ತಂದೆ ವಿಜಯ್ಕುಮಾರ್ ಆಂಧ್ರಪ್ರದೇಶದಿಂದ ಬಂದಿದ್ದರು.
ತಂದೆಯನ್ನು ಗೇಟ್ನಿಂದ ಹೊರಗೆ ನಿಲ್ಲಿಸಿದ್ದರು
ಶ್ರೀಹರ್ಷ ತಂದೆಯನ್ನು ಕಾಲೇಜಿನ ಒಳಕ್ಕೆ ಬರಲು ಬಿಡದೆ ಕಾಲೇಜು ಗೇಟಿನ ಬಳಿಯೇ ತಡೆ ಹಿಡಿಯಲಾಗಿತ್ತು. ಶ್ರೀಹರ್ಷ ಅವರನ್ನು ಮಾತ್ರವೇ ಒಳಗೆ ಕರೆದುಕೊಂಡು ಅವರನ್ನು ಅಮಾನತ್ತು ಮಾಡುವಂತೆ ಹೇಳಿತ್ತು.
ತಂದೆಗೆ ಆದ ಅವಮಾನದಿಂದ ಬೇಸತ್ತಿದ್ದ ಶ್ರೀಹರ್ಷ
ತಂದೆಗೆ ಆದ ಅವಮಾನ ಹಾಗೂ ತನ್ನನ್ನು ಅಮಾನತ್ತು ಮಾಡುವ ನಿರ್ಣಯದಿಂದ ಬೇಸರಗೊಂಡಿದ್ದ ಶ್ರೀಹರ್ಷ ಕಾಲೇಜಿನ ಏಳನೇ ಮಹಡಿಯಿಂದ ಕೆಳಗೆ ಹಾರಿದ್ದರು. ಅವರನ್ನು ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಯಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಯಿತು.
ವರ್ಷಕ್ಕೆ 14 ಲಕ್ಷ ಸಂಬಳದ ನೌಕರಿ ಸಿಕ್ಕಿತ್ತು
ಕಾಲೇಜು ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಶ್ರೀಹರ್ಷ ಆಯ್ಕೆ ಆಗಿದ್ದರು. ಕಂಪೆನಿಯೊಂದು ವರ್ಷಕ್ಕೆ 14 ಲಕ್ಷ ಪ್ಯಾಕೆಜ್ ನೀಡುವುದಾಗಿ ಹೇಳಿ ಶ್ರೀಹರ್ಷ ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಕಂಪೆನಿ ನೀಡಿದ್ದ ನೇಮಕಾತಿ ಪತ್ರವನ್ನು ಕಾಲೇಜಿನ ಆಡಳಿತ ಮಂಡಳಿ ಹರಿದು ಹಾಕಿತ್ತು. ಇದು ಸಹ ಶ್ರೀಹರ್ಷಗೆ ತೀವ್ರ ಆಘಾತ ತಂದಿತ್ತು.
ಶ್ರೀಹರ್ಷ ಸಾವಿನ ನಂತರ ವಿದ್ಯಾರ್ಥಿಗಳ ಪ್ರತಿಭಟನೆ
ಶ್ರೀಹರ್ಷ ಆತ್ಮಹತ್ಯೆ ನಂತರ ವಿದ್ಯಾರ್ಥಿಗಳು ಇನ್ನಷ್ಟು ಕುಪಿತರಾಗಿದ್ದು, ಕಾಲೇಜು ವಿರುದ್ಧ ಪ್ರತಿಭಟಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.