ED ವತಿಯಿಂದ ಕಣ್ವ ಸಮೂಹಕ್ಕೆ ಸೇರಿದ 84 ಕೋಟಿ ರೂ. ಆಸ್ತಿ ಜಪ್ತಿ
ಬೆಂಗಳೂರು, ಫೆಬ್ರವರಿ 27: ಹಣ ಹೂಡಿಕೆ ಮಾಡಿದ ಸಾವಿರಾರು ಮಂದಿಯನ್ನು ನಡು ಬೀದಿಯಲ್ಲಿ ಬಿಟ್ಟು ಬೀದಿ ಪಾಲು ಮಾಡಿರುವ ಕಣ್ವ ಸಂಸ್ಥೆಗೆ ಸೇರಿದ 84 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಣ್ವ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಂಜುಂಡಯ್ಯ ಅವರಿಗೆ ಸೇರಿದ ಬೆಂಗಳೂರು ಹಾಗೂ ಆಂಧ್ರ ಪ್ರದೇಶದಲ್ಲಿ ಪತ್ತೆಯಾದ 84 ಕೋ ಟಿ ರೂ. ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ. ಹಣ ಹೂಡಿಕೆ ಮಾಡಿದರೆ ದುಬಾರಿ ಬಡ್ಡಿ ನೀಡುವಾದಗಿ ನಿವೃತ್ತರಿಗ ಗಾಳ ಹಾಕಿದ್ದ ನಂಜುಂಡಯ್ಯ ಗ್ಯಾಂಗ್ ಸುಮಾರು ಹದಿನೈದು ಸಾವಿರ ಜನರಿಂದ ಬರೋಬ್ಬರಿ ನೂರಾರು ಕೋಟಿ ರೂ. ಹೂಡಿಕೆ ಮಾಡಿಸಿದ್ದರು. ಕಣ್ವ ಫ್ಯಾಷನ್ಸ್, ಕಣ್ವ ಮಾರ್ಟ್ ಹೀಗೆ ನಾನಾ ವಹಿವಾಟಿನಲ್ಲಿ ಹೂಡಿಕೆ ಮಾಡಿಸಿದ್ದ ನಂಜುಂಡಯ್ಯ ಹೂಡಿಕೆ ಮಾಡಿದವರಿಗ ಅಸಲು ನೀಡದೇ ಬಡ್ಡಿ ನೀಡದೇ ಕೈ ಎತ್ತಿದ. ರಾತ್ರೋರಾತ್ರಿ ಕಣ್ವ ಸಮೂಹ ಸಂಸ್ಥೆ ವಿರುದ್ಧ ಜನರು ಸೇರಿ ಹೋರಾಟ ಆರಂಭಿಸಿದ್ದರು.
ನನ್ನ ಬಳಿ ಒಂದು ರೂಪಾಯಿ ಹಣವಿಲ್ಲ ಎಂದು ಕೈ ಎತ್ತಿದ ನಂಜುಂಡಯ್ಯ ಮತ್ತು ಪಟಾಲಂ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಸಾವಿರಾರು ಜನರು ಜಮಾಯಿಸಿದರು. ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಪೊಲೀಸರು ಸುಮಾರು 400 ಕೋಟಿ ಮೌಲ್ಯದ ಕಣ್ವ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಮೋಸ ಹೋದ ಹೂಡಿಕೆದಾರರಿಂದ ದೂರುಗಳನ್ನು ಸ್ವೀಕರಿಸಿದ್ದು, ಮೋಸ ಹೋದವರ ಸಂಖ್ಯೆ 15 ಸಾವಿರ ದಾಟಿದೆ. ಬ್ಯಾಂಕ್ ಗಳಿಂದಲೂ ಸಹ 150 ಕೋಟಿ ರೂ. ಸಾಲ ಪಡೆದಿದ್ದು, ಬ್ಯಾಂಕ್ ಗಳು ಸಹ ಇದೀಗ ನಂಜುಂಡಯ್ಯನ ಹೆಸರಿನಲ್ಲಿ ಜಪ ಮಾಡುವಂತಾಗಿದೆ.
Recommended Video
ಪರಿಹಾರ ಪ್ರಕ್ರಿಯೆ: ಇನ್ನು ಕಣ್ವ ಸಮೂಹ ಸಂಸ್ಥೆಗಳ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 20 ಕ್ಕೂ ಹೆಚ್ಚು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಂಜುಂಡಯ್ಯನನ್ನು ಸುದೀರ್ಘ ವಿಚಾರಣೆ ನಡೆಸಿತ್ತು. ಇದೀಗ ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಇನ್ನು ಪರಿಹಾರ ನೀಡುವ ಸಂಬಂಧ ಸರ್ಕಾರ ಸಕ್ಷಮ ಪ್ರಾಧಿಕಾರ ರಚಿಸಿದ್ದು, ಪೊಲೀಸ್ ತನಿಖಾ ವರದಿ ಸಲ್ಲಿಕೆಯಾದ ಬಳಿಕ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.