ಎನ್ಕೌಂಟರ್; ನಟ ಯಶ್ ಹತ್ಯೆಗೂ ಸ್ಕೆಚ್ ಹಾಕಿದ್ದ ರೌಡಿ ಸ್ಲಂ ಭರತ್
ಬೆಂಗಳೂರು, ಫೆಬ್ರವರಿ 27: ಕುಖ್ಯಾತ ರೌಡಿ ಸ್ಲಂ ಭರತನನ್ನು ಬೆಂಗಳೂರು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಆತನನ್ನು ಸೋಮವಾರವವಷ್ಟೇ ಉತ್ತರಪ್ರದೇಶದ ಮುರದಾಬಾದ್ನಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿತ್ತು.
Recommended Video
ವಿಚಾರಣೆಗೆ ಕರೆದೊಯ್ಯುವ ವೇಳೆ ಸಿನಿಮೀಯ ರೀತಿಯಲ್ಲಿ ನಡೆದ ಘಟನೆಯಲ್ಲಿ ರೌಡಿ ಭರತ್ ಹತನಾಗಿದ್ದಾನೆ. ಗುರುವಾರ ನಸುಕಿನ ಜಾವ 5 ಗಂಟೆ ಸುಮಾರು ಪೀಣ್ಯ ಬಳಿ ಸ್ಲಂ ಭರತನನ್ನು ಕರೆದೊಯ್ಯುತ್ತಿದ್ದಾಗ ಆತನ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ಮಾಡಿ ಭರತನನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಬೆನ್ನತ್ತಿದ್ದ ಪೊಲೀಸರು ಪೀಣ್ಯದ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಎನ್ಕೌಂಟರ್ ಮಾಡಿ ಆತನ ಕಥೆ ಮುಗಿಸಿದ್ದಾರೆ.
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ರೌಡಿ ಶೀಟರ್ ಸ್ಲಂ ಭರತ್ ಸಾವು
ರಾಜಗೋಪಾಲ ನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ ಭರತ್ ಬೆಂಗಳೂರಿನಲ್ಲಿ ಕುಖ್ಯಾತ ರೌಡಿಯಾಗಿದ್ದ. ನಟ ಯಶ್ ಹತ್ಯೆಗೆ ಸಂಚು ರೂಪಿಸಿದ್ದರ ಬಗ್ಗೆ ಆತನ ಮೇಲೆ ಆರೋಪವಿತ್ತು.
ತಮಿಳುನಾಡು ಮೂಲದ ರೌಡಿ
ತಮಿಳುನಾಡು ಮೂಲದವನಾಗಿದ್ದ ಭರತ್ ಅಲಿಯಾಸ್ ಸ್ಲಂ ಭರತ್ ಬೆಂಗಳೂರಿನ ರಾಜಗೋಪಾಲ ನಗರದ ಸ್ಲಂ ನಿವಾಸಿಯಾಗಿದ್ದ. ಪುಡಿ ರೌಡಿ ಚಟುವಟಿಕೆಗಳ ಮೂಲಕ ಕುಖ್ಯಾತ ರೌಡಿಯಾಗಿ ಬೆಳೆದಿದ್ದ. ರೌಡಿ ಲಕ್ಷ್ಮಣ ಹತ್ಯೆಯ ನಂತರ ಬೆಂಗಳೂರಿನಲ್ಲಿ ಅವನ ಉಪಟಳ ಹೆಚ್ಚಾಗಿತ್ತು. ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆತ ಉತ್ತರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ.
ಸೈಕಲ್ ರವಿಯೊಂದಿಗೆ ನಂಟು
ಕಳೆದ ವರ್ಷದ ಆರಂಭದಲ್ಲಿ ಸಿಸಿಬಿ ಪೊಲೀಸರಿಂದ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿತ್ತು. ಖ್ಯಾತ ನಟ ಯಶ್ ಹತ್ಯೆಗೆ ಬೆಂಗಳೂರಿನ ಕೆಲ ರೌಡಿಗಳು ಸಂಚು ರೂಪಿಸಿದ್ದು ಸೈಕಲ್ ರವಿ ಬಂಧನದಿಂದ ಗೊತ್ತಾಗಿತ್ತು. ಯಶ್ಗೆ ಆಗದವರು ಸ್ಲಂ ಭರತ್ ಹಾಗೂ ಸೈಕಲ್ ರವಿಗೆ ಯಶ್ ಕೊಲ್ಲಲು ಸುಪಾರಿ ಕೊಟ್ಟಿದ್ದರು ಎಂದು ಆರೋಪಿಸಲಾಗಿತ್ತು.
ನಾನೇನು ಕುರಿ ಕೋಳಿಯಲ್ಲ ಎಂದಿದ್ದ ಯಶ್
"ನನ್ನ ಹತ್ಯೆಗೆ ಸಂಚು ಸುದ್ದಿ ಕೇವಲ ವದಂತಿಯಷ್ಟೆ. ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸುದ್ದಿಯಿಂದ ನನ್ನ ಮನೆಯವರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಕಿರಿಕಿರಿಯಾಗುತ್ತಿದೆ. ಪದೇ ಪದೇ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ನೋಡಿದಾಗ ನನ್ನನ್ನು ಇಷ್ಟಪಡುವವರ ಮೇಲೆ ಬೇರೇ ರೀತಿಯ ಪರಿಣಾಮ ಬೀರುತ್ತದೆ. ಯಾರೋ ಹತ್ಯೆ ಮಾಡಲು ನಾನೇನು ಕುರಿ ಕೋಳಿಯಲ್ಲ' ಎಂದು ಯಶ್ ಅಂದು ಹೇಳಿದ್ದರು.
ಪೊಲೀಸರ ಮೇಲೆ ಗುಂಡಿನ ದಾಳಿ
"ಮಧ್ಯರಾತ್ರಿ ಪೊಲೀಸರ ವಾಹನದ ಮೇಲೆ ದಾಳಿ ಮಾಡಿ ಸ್ಲಂ ಭರತ್ನನ್ನು ಆತನ ಸ್ನೇಹಿತನನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಬೆನ್ನತ್ತಿದ ರಾಜಗೋಪಾಲ ನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮೇಲೆಯೇ ರೌಡಿಗಳು ಗುಂಡಿನ ದಾಳಿ ಮಾಡಿದ್ದರು. ಈ ವೇಳೆ ಬುಲೆಟ್ ಪ್ರೂಪ್ ಜಾಕೆಟ್ ದರಿಸಿದ್ದರಿಂದ ಇನ್ಸಪೆಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ನಾಲ್ವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಕೂಡ ನಡೆದಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.