ಬೆಂಗಳೂರು: ನಗರದೆಲ್ಲೆಡೆ ವಾಸವಿ ಜಯಂತಿ ಸಂಭ್ರಮ
ಬೆಂಗಳೂರು. ಏ. 28: ಮಂಗಳವಾರ ನಗರದಾದ್ಯಂತ ವಾಸವಿ ಜಯಂತಿ ಸಂಭ್ರಮ. ಸಜ್ಜನ್ ರಾವ್ ವೃತ್ತದ ಬಳಿ ಇರುವ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ಜಯಂತಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು
ಮುಂಜಾವಿನಿಂದಲೇ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ನಗರದ ಬಸವನಗುಡಿ, ಜಯನಗರ, ರಾಮಕೃಷ್ಣ ಆಶ್ರಮ, ವಿವಿ ಪುರಂ ಸೇರಿದಂತೆ ಎಲ್ಲ ಭಾಗದಿಂದ ಆಗಮಿಸಿದ ಆಸ್ತಿಕರು ದೇವಿಯ ದರ್ಶನ ಪಡೆದರು. [ಅಷ್ಟಮಂಗಲ ಪ್ರಶ್ನೆಯಲ್ಲಿ ಬಯಲಾಯಿತು ದೇಗುಲದ ರಹಸ್ಯ]
ಹೋಮ-ಹವನಗಳು ನಡೆದವು. ವಾಸವಿ ಜಯಂತಿ ಪ್ರಯುಕ್ತ ರಥೋತ್ಸವವನ್ನು ಆಯೋಜಿಸಲಾಗಿತ್ತು. ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಸಹ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಸ್ಥಳೀಯ ವಾಸವಿ ಸಂಘದವರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು.
ಹಬ್ಬದ ವಾತಾವರಣ
ವಿವಿ ಪುರಂ, ಸಜ್ಜನ್ ರಾವ್ ವೃತ್ತದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡೊಳ್ಳು ಕುಣಿತ, ಚಂಡೆ ನಾದದ ನಡುವೆ ಅಲಂಕೃತ ದೇವಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಅನ್ನ ಸಂತರ್ಪಣೆ
ಪ್ರತಿವರ್ಷವೂ ಅನ್ನ ಸಂತರ್ಪಣೆ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಸುಮಾರು 2 ಸಾವಿರಕ್ಕೂ ಅಧಿಕ ಜನರು ಪ್ರಸಾದ ಸ್ವೀಕಾರ ಮಾಡುತ್ತಾರೆ ಎಂದು ಪೆಂಡಾಲ್ ಕಟ್ಟುವುದರಲ್ಲಿ ನಿರತರಾಗಿದ್ದ ಕಾರ್ಯಕರ್ತರೊಬ್ಬರು ತಿಳಿಸಿದರು. ವಾಸವಿ ಸ್ಫೂರ್ತಿ ಟ್ರಸ್ಟ್ ಅನ್ನ ಸಂತರ್ಪಣೆಯ ನೇತೃತ್ವ ವಹಿಸಿಕೊಂಡಿದೆ.
ಗೃಹಿಣಿಯರ ಪಾಲ್ಗೊಳ್ಳುವಿಕೆ
ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆದಿದ್ದು ವಿಶೇಷ. ಭಕ್ತರು ಬೆಳ್ಳಿ ರಥಕ್ಕೆ ಪ್ರದಕ್ಷಿಣೆ ಹಾಕಿ ಪುನೀತರಾದರು.
10 ದಿನ ಕಾಲ ವಿವಿಧ ಕಾರ್ಯಕ್ರಮ
ಏಪ್ರಿಲ್ 19 ರಿಂದಲೇ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 28 ಅಂದರೆ ನಿರಂತರ 10 ದಿನಗಳ ಕಾಲ ಸಾಂಗವಾಗಿ ನೆರವೇರಿದವು.
ಬೆಳ್ಳಿ ರಥ ಅರ್ಪಣೆ
ದೇವಿಗೆ ಈ ಬಾರಿ ಹೊಸ ಬೆಳ್ಳಿ ರಥವನ್ನು ಅರ್ಪಣೆ ಮಾಡಲಾಯಿತು. ಸುಮಾರು 14 ಅಡಿ ಎತ್ತರದ ಬೆಳ್ಳಿ ರಥ 5 ಅಡಿಗಿಂತಲೂ ಜಾಸ್ತಿ ಅಗಲವಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಪ್ರತಿದಿನವೂ ಸಂಜೆ ಜಾನಪದ ನೃತ್ಯಗಳು, ಸಂಗೀತ ಮತ್ತು ಡೊಳ್ಳು ಕುಣಿತದಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದೇವಾಲಯವನ್ನು ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು.