ಬೌದ್ಧಿಕ ಕಸ ತುಂಬಿದ ಐಟಿ-ಬಿಟಿː ಸಿಎನ್ ಆರ್ ರಾವ್
ಬೆಂಗಳೂರು, ನ.18 : "ಬೆಂಗಳೂರು ಭಾರತದ ಐಟಿ ರಾಜಧಾನಿ ಹೌದು ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಆದರೆ ಕಾಲ ಬದಲಾಗುತ್ತಿದ್ದಂತೆ ನಗರದ ಜನರ ತಲೆಯಲ್ಲಿ ಬುದ್ಧಿ ಮಾಯವಾಗಿ ಬೌದ್ಧಿಕ ಕಸ ತುಂಬಿಕೊಳ್ಳುತ್ತಿದೆ, ಇದಕ್ಕೆ ಐಟಿ ಇಂಡಸ್ಟ್ರಿಗಳೇ ಕಾರಣ' ಹೀಗೆ ಹೇಳಿದವರು ಭಾರತ ರತ್ನ ವಿಜ್ಞಾನಿ ಸಿಎನ್ ಆರ್ ರಾವ್.
ಹೌದು.. ಇಂಗ್ಲಿಷ್ ವಾರಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ರಾವ್ ಇಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನೊಬ್ಬ ನಿಜವಾದ ಬೆಂಗಳೂರಿಗನಾಗಿ ಹೇಳುತ್ತಿದ್ದೇನೆ, ಈಗ ಐಟಿ ಸಿಟಿ ಎಂದು ಕರೆಯುವ ನಗರ ಹಿಂದೆ ಬುದ್ಧಿಜೀವಿಗಳ ತಾಣವಾಗಿತ್ತು. ಆದರೆ ಈಗ ನಿಧಾನವಾಗಿ ಬೌದ್ಧಿಕ ಅಂಧಕಾರ ಆವರಿಸುತ್ತಿದೆ ಎಂದು ಬರೆದಿದ್ದಾರೆ.[ಸಿಎನ್ ಆರ್ ರಾವ್, ಸಚಿನ್ ಈಗ 'ಭಾರತ ರತ್ನ']
ನಗರದ ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಹೊಸ ಉದ್ಯೋಗಗಳನ್ನು ಹುಡುಕುವ ಭರದಲ್ಲಿ ಭೌದ್ಧಿಕ ಸಾಮರ್ಥ್ಯ ಮಾಯವಾಗುತ್ತಿದೆ. ಇತ್ತೀಚೆಗೆ ಎನ್ನಾರೈ ಒಬ್ಬರಿಂದ ಎದುರಾದ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ಭಾರತ ನಿಜಕ್ಕೂ ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ವರ್ಷಕ್ಕೆ 25 ಜನ ಮಾತ್ರ ಪಿಎಚ್ ಡಿ ಪದವಿ ಪಡೆಯಲು ಹೇಗೇ ಸಾಧ್ಯ? ಎಂದು ಕೇಳಿದ್ದಕ್ಕೆ ಉತ್ತರಿಸಲು ಆಗಲಿಲ್ಲ ಎಂದು ಹೇಳಿದ್ದಾರೆ.
ಐಟಿ ಇಂಡಷ್ಟ್ರಿಗಳ ದೀರ್ಘ ಕಾಲದ ಯೋಜನೆಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ರಾವ್, ಇವರಿಗೆ ನಗರದ ಒಳಗೆ ಜಾಗ ಬೇಕು. ನಗರದ ಹೊರವಲಯದಲ್ಲಿ ವಲಯ ಸ್ಥಾಪನೆ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ರಾಮನಗರದ ಬಳಿ ಐಟಿ ಕ್ಯಾಂಪಸ್, ಸಾಟಲೈಟ್ ಟೌನ್ ನಿರ್ಮಾಣ ಮಾಡಿಕೊಳ್ಳಬಹುದಲ್ಲವೇ? ಎಂದು ಕೇಳಿದ್ದಾರೆ.
ನಾವು ಕೆಲವರನ್ನು ರೋಲ್ ಮಾಡೆಲ್ ಗಳು ಎಂದುಕೊಂಡಿದ್ದೇವೆ, ನಿಜಕ್ಕೂ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ಬರೀ ನಗರವನ್ನಲ್ಲ ಇಡೀ ದೇಶವನ್ನೇ ದಿವಾಳಿ ಮಾಡುವಂಥ ಕೆಲಸಕ್ಕೆ ಅವರು ಕೈ ಹಾಕಿದ್ದರೂ ಸುಮ್ಮನೆ ಕುಳಿತಿದ್ದೇವೆ ಎಂದು ಹೇಳಿದ್ದಾರೆ.[ಭಾಭಾ ಬಂಗಲೆ ಉಳಿಸಲು ಮೋದಿ ಮನಸ್ಸು ಮಾಡಲಿಲ್ಲ]
ನಮ್ಮ ಮೌಲ್ಯ, ಆದರ್ಶಗಳನ್ನು ಮರೆತರೆ ಬೆಂಗಳೂರು ನಾಶವಾಗುವುದಲ್ಲದೇ, ದೇಶದ ಭವಿಷ್ಯಕ್ಕೂ ಕೊಡಲಿ ಪೆಟ್ಟು ಬೀಳುತ್ತದೆ. ಹೀಗೆ ಮುಂದುವರಿದರೆ ನಮ್ಮನ್ನು ನಾವು ಸುಟ್ಟುಕೊಳ್ಳುವ ದಿನ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.