ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫುಟ್ಪಾತ್ ಶಾಕ್: 29 ಕೋಟಿ ಪರಿಹಾರಕ್ಕೆ ಮೊರೆ!

By Srinath
|
Google Oneindia Kannada News

ಬೆಂಗಳೂರು, ಜೂನ್ 13: ರಸ್ತೆ ಬದಿ ನಡೆದು ಹೋಗುತ್ತಿದ್ದ ಪ್ರತಿಷ್ಠಿತ ಕಂಪನಿಯ ಇಂಜಿನಿಯರ್ ಒಬ್ಬರು ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಅಸುನೀಗಿದ್ದರು. ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ದಿರುವ ಮೃತ ಇಂಜಿನಿಯರ್ ಮನೆಯವರು 29.81 ಕೋಟಿ ರೂ ಪರಿಹಾರ ನೀಡುವಂತೆ ಮೊರೆಯಿಟ್ಟಿದ್ದಾರೆ.

'ಇಷ್ಟೆಲ್ಲಾ ಪರಿಹಾರ ಕೊಡೋಕ್ಕೆ ಆಗುತ್ತದಾ, ವಿಚಾರಿಸಿ ನೋಡಿ' ಎಂದು ರಾಜ್ಯ ಹೈಕೋರ್ಟ್ ಬೆಸ್ಕಾಂ, ಬಿಬಿಎಂಪಿ ಮತ್ತು ಕೆಇಆರ್ ಸಿಗೆ ಸೂಚಿಸಿದೆ. ಜತೆಗೆ ಪ್ರತಿವಾದಿಗಳನ್ನು ಸಮಾ ತರಾಟೆಗೆ ತೆಗೆದುಕೊಂಡಿರುವ ಘನ ನ್ಯಾಯಾಲಯವು 'ಅಲ್ರೀ ಫುಟ್ಪಾತ್ ಇರುವುದು ಜನರ ಓಡಾಟಕ್ಕೆ ಅಲ್ವೇನ್ರೀ. ನೀವು ನೋಡಿದರೆ ರಸ್ತೆಯಲ್ಲೇ ವಿದ್ಯುತ್ ಓಡಾಡಿಸಿ ಇಂತಹ ಅನಾಹುತಗಳನ್ನು ಸೃಷ್ಟಿ ಮಾಡುತ್ತಿದ್ದೀರಿ. ಇದಕ್ಕೆಲ್ಲಾ ಸರಿಯಾದ ದಾರಿ ಕಂಡುಕೊಳ್ಳಿ' ಎಂದು ಎಚ್ಚರಿಸಿದೆ.

ಹಾಗಂತ ಕೋರ್ಟ್ ಸೂಚನೆ ಹೊರಬೀಳುತ್ತಿದ್ದಂತೆ ಬೆಸ್ಕಾಂ/ ಬಿಬಿಎಂಪಿಗಳು ರಸ್ತೆ ರಸ್ತೆಗೆ ತೆರಳಿ, ಅಲ್ಲಿರುವ ವಿದ್ಯುತ್ ಕಂಬಗಳನ್ನು ತೆಗೆದುಹಾಕಿದೆಯಾ ಅಂತ ನೋಡೋಕ್ಕೆ ನೀವೇನು ರಸ್ತೆಗಿಳಿಯಬೇಡಿ. ಹೋಗುವುದಾದರೆ ನಿಮ್ಮ ಜಾಗ್ರತೆ ನಿಮ್ಮದು. ಏಕೆಂದರೆ ಖಂಡಿತಾ ಈ ಸಂಸ್ಥೆಗಳು ಇಂತಹ ಅವಘಡಗಳಿಂದ ಎಚ್ಚೆತ್ತು ಸರಿ ದಾರಿಗೆ ಬರುವ ಜಾಯಮಾನ ಹೊಂದಿಲ್ಲ. ಏಕೆಂದರೆ ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿದೆ. ರಸ್ತೆಗಳಿಂದ ವಿದ್ಯುತ್ ಕಂಬ/ ಟ್ರಾನ್ಸ್ ಫಾರಂಗಳನ್ನು ತೆಗೆಯುವುದು ಅಷ್ಟು ಸುಲಭದ ಮಾತಲ್ಲ. ಅಲ್ಲಿವರೆಗೂ ಅದಿನ್ನೆಷ್ಟು ಅವಘಡಗಳು ಸಂಭವಿಸಬೇಕೋ.

electrocuted-engineer-death-family-seeks-rs-29-cr-compensation-in-karnataka-hc

ಇರಲಿ, ಮತ್ತೆ ಪ್ರಕರಣದ ಬಗ್ಗೆ ಹೇಳುವುದಾದರೆ ರೆಸಿಡೆನ್ಸಿ ರಸ್ತೆಗೆ ಅಂಟಿಕೊಂಡಿರುವ ಚರ್ಚ್ ಸ್ಟ್ರೀಟ್ ಬಳಿ ಕಳೆದ ವರ್ಷ ಮನೋಜ್ ಕುಮಾರ್ ವಸಂತರಾವ್ ಪಾಟೀಲ್ ಎಂಬ ಇಂಜಿನಿಯರ್ ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಅಲ್ಲೇ ಟ್ರಾನ್ಸ್ ಫಾರಂ ನೆಟ್ಟಿದ್ದ ಬೆಸ್ಕಾಂನವರು ಅದಕ್ಕೆ ತಂತಿ ಬೇಲಿ ಸುತ್ತಿದ್ದರು. ಆದರೆ ಅದರಲ್ಲಿ ವಿದ್ಯುತ್ ಸಹ ಪ್ರವಹಿಸಿದೆ. ಅದೆಲ್ಲಾ ಮನೋಜ್ ಕುಮಾರ್ ಗಮನಕ್ಕೆ ಬಂದಿಲ್ಲ. ಅಚಾನಕ್ಕಾಗಿ ಬೇಲಿ ತಾಗಿದೆ... ಅಷ್ಟೇ. ಸಾವು ಅವರನ್ನು ಬರಸೆಳೆದಿದೆ.

ಮುಂದೆ... ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಮೃತರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದೂ ಆದರೆ ಅದಕ್ಕೂ ಮುನ್ನ ವಿದ್ಯುತಾಘಾತಕ್ಕೆ ಒಳಗಾಗಿದ್ದಾರೆಂದು ಷರಾ ಬರೆದು ಕೊಟ್ಟಿದ್ದರು. (ವಿದ್ಯುತ್ತಿಗಾಗಿ 5100 ಕೋಟಿ ರೂ ಕಾಮಗಾರಿ: ಡಿಕೆಶಿ)

ಅಷ್ಟಕ್ಕೇ ಬೆಸ್ಕಾಂನವರು 'ಇದು ನಮ್ಮಿಂದಾದ ಪ್ರಮಾದವಲ್ಲ. ನೋಡಿ, ವೈದ್ಯರೇ ಹೇಳ್ತಿದ್ದಾರೆ' ಎಂದು ವರದಿಯ ಮೊದಲ ಅಂಶಕ್ಕೆ ಮಾತ್ರ ಅಂಟಿಕೊಂಡರು. ಅಂದರೆ ಮನೋಜ್ ಕುಮಾರ್ ಸತ್ತಿದ್ದು ಹೃದಯಾಘಾತದಿಂದ ಎಂದು ಜಾಣ ವಾದ ಮಂಡಿಸಿದ್ದಾರೆ.

ಜೂನ್ 18ಕ್ಕೆ ಪ್ರಕರಣ ವಿಚಾರಣೆಗೆ ಬರಲಿದೆ. ಅದಕ್ಕೂ ಮುನ್ನ 'ವಿದ್ಯುತ್ ಕಂಬ/ ಟ್ರಾನ್ಸ್ ಫಾರಂಗಳನ್ನು ರಸ್ತೆಗಳಿಂದ ತೆಗೆಯುವುದಕ್ಕೆ ಆಗುತ್ತದಾ' ಎಂಬುದರ ಬಗ್ಗೆ ಪ್ರಾಥಮಿಕ ವರದಿ ನೀಡಿ ಎಂದು ಜಸ್ಟೀಸ್ ರಾಮಮೋಹನ್ ರೆಡ್ಡಿ ಅವರು ಪ್ರತಿವಾದಿಗಳಿಗೆ ಸೂಚಿಸಿದ್ದಾರೆ.

ಇಲ್ಲಿ ಉತ್ತರ ಸಿಗದಂತಹ ಕೆಲ ಪ್ರಶ್ನೆಗಳಿವೆ: ವಿದ್ಯುತ್ ದರ ಏರಿಕೆ/ಇಳಿಕೆಗಷ್ಟೇ ಮುಂದಾಗುವ ಕೆಇಆರ್ ಸಿ ಸಂಸ್ಥೆಗೆ ( Karnataka Electricity Regulatory Commission-KERC) ಇಂತಹ ಸಾಮಾಜಿಕ ಜವಾಬ್ದಾರಿ ಇರುವುದಿಲ್ಲವಾ? ಇನ್ನು, ಜಾಗ ತನ್ನದೆಂದು ಬಿಬಿಎಂಪಿ (Bruhat Bangalore Mahanagara Palike -BBMP) ರಸ್ತೆಗಳಲ್ಲಿ ಏನು ಬೇಕಾದರೂ ಮಾಡಬಹುದಾ? ಇಲ್ಲಿ, ಬೆಸ್ಕಾಂ (Bangalore Electricity Supply Company -Bescom) ಹೊಣೆಗಾರಿಕೆ/ ಬೇಜವಾಬ್ದಾರಿ ಪಾಲು ಎಷ್ಟು?

ಅಂದಹಾಗೆ ಅನೇಕ ವಿದೇಶಿ ನೆಲೆಗಳಲ್ಲಿ ವಿದ್ಯುತ್/ ದೂರವಾಣಿ, ಅವೂ/ಇವೂ ತಂತಿಗಳು ಭೂಗರ್ಭದಲ್ಲಿ ಸುರಕ್ಷಿತವಾಗಿರುತ್ತವೆ. ಅವು ಭೂಮಿಯ ಮೇಲೆಲ್ಲೂ ನೇತಾಡುತ್ತಿರುವುದಿಲ್ಲ. ನಮ್ಮಲ್ಲಿ ಇಂತಹ ವ್ಯವಸ್ಥೆ ಜಾರಿಗೆ ಬರುವುದು ಯಾವಾಗ?

English summary
Electrocuted engineer Manoj Kumar Vasanthrao Patil death family seeks Rs 29.81 cr compensation in Karnataka High Court. They have alleged that Manoj was electrocuted due to negligence of Bescom. Justice Rama Mohan Reddy pointed out that this case should be an eye-opener and asked the KERC and other agencies to come out with their stand on the location of electricity transformers in the city. Further hearing was adjourned till June 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X