ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಅನಿವಾರ್ಯ: ಇಂಧನ ಸಚಿವ
ಬೆಂಗಳೂರು, ಸೆಪ್ಟೆಂಬರ್ 9: ಮುಂದಿನ ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಅನಿವಾರ್ಯವಾಗಲಿವೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ವಿಶ್ವ ವಿದ್ಯುತ್ ಚಾಲಿತ ವಾಹನ ದಿನಾಚರಣೆ-2021 ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಿ ಇರಲಿವೆ. ಅದು ಅನಿವಾರ್ಯವೂ ಹೌದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಿರುವ ಕಾರಣದಿಂದ ನಾವು ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ 136 ಕಡೆ ವಿದ್ಯುತ್ ರೀಚಾರ್ಜಿಂಗ್ ಸೆಂಟರ್ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ರೀಚಾರ್ಜಿಂಗ್ ಸೆಂಟರ್ಗಳನ್ನು ತೆರೆಯಲಾಗುತ್ತದೆ ಎಂದಿದ್ದಾರೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ನಾವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ವಿದ್ಯುತ್ ಚಾಲಿತ ವಾಹನಗಳಿಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಲಿವೆ. ಈ ವಾಹನಗಳ ಬಳಕೆ ಹೆಚ್ಚಾಗಲಿದ್ದು, ಭವಿಷ್ಯದಲ್ಲಿ ಇದು ಅನಿವಾರ್ಯವಾಗಲಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರದಗಳಲ್ಲಿ ರೀಚಾರ್ಜಿಂಗ್ ಸೆಂಟರ್ ಸ್ಥಾಪಿಸಲು ಹೆಚ್ಚು ಒತ್ತು ನೀಡಲಿದ್ದೇವೆ. ಇದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಈ ಕುರಿತು ಮಾತನಾಡಿದ ತೋಟಗಾರಿಕೆ ಸಚಿವ ಮುನಿರತ್ನ, ವಿದ್ಯುತ್ ಚಾಲಿತ ವಾಹನಗಳಿಗೆ ರೀಚಾರ್ಜ್ ಸೆಂಟರ್ ಮಾಡುವಾಗ ಅವುಗಳನ್ನು ಈಗ ಇರುವ ಪೆಟ್ರೋಲ್ ಬಂಕ್ ಬಳಿಯೇ ಮಾಡಬೇಕು. ಜತೆಗೆ, ವಿದ್ಯುತ್ ಚಾಲಿತ ವಾಹನಗಳ ಬೆಲೆ ಕಡಿಮೆ ಮಾಡಬೇಕು. ಪೆಟ್ರೋಲ್ ವಾಹನಗಳ ಬೆಲೆಗಿಂತ ಶೇ.40ರಷ್ಟು ಕಡಿಮೆ ದರದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿರಬೇಕು. ಈ ಕುರಿತು ವಾಹನ ಕಂಪನಿಗಳಿಗೆ ಬೆಲೆ ಕಡಿಮೆ ಮಾಡಲು ಕೋರುತ್ತೇನೆ ಎಂದು ತಿಳಿಸಿದರು.
ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಅಭಿಪ್ರಾಯಪಟ್ಟರು.
ವಿಶ್ವ ವಿದ್ಯುತ್ ಚಾಲಿತ ವಾಹನ ದಿನಾಚರಣೆ-2021 ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಚಿವ ನಾರಾಯಣ ಗೌಡ ಮೆರವಣಿಗೆಗೆ ಹಸಿರು ನಿಶಾನೆ ತೋರಿದರು. ಜೊತೆಗೆ ಸಚಿವರಾದ ವಿ. ಸುನಿಲ್ ಕುಮಾರ್ ಹಾಗೂ ಮುನಿರತ್ನ ವಿದ್ಯುತ್ ಚಾಲಿತ ವಾಹನ ಚಾಲನೆ ಮಾಡಿ ಪರಿಸರ ಸ್ನೇಹಿ ವಾಹನಗಳ ಬಳಕೆ ಹೆಚ್ಚಾಗಲಿ ಎಂದರು.
ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ನಾರಾಯಣ ಗೌಡ, ನಮ್ಮ ಶರೀರವನ್ನು, ನಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ ಎಂದರು.
ನಮ್ಮ ಆರೋಗ್ಯ, ಪರಿಸರ ಕಾಪಾಡಿಕೊಳ್ಳಬೇಕು ಎಂದರೆ ವಿದ್ಯುತ್ ಚಾಲಿತ ವಾಹನ ಬಳಕೆ ಹೆಚ್ಚಾಗಬೇಕು. ವಿದ್ಯುತ್ ಚಾಲಿತ ವಾಹನಗಳಿಗೆ ಸರ್ಕಾರಗಳು ಸಬ್ಸಿಡಿ ನೀಡುತ್ತಿವೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚು ಮಾಡಿದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಗುರುವಾರದ ಇಂಧನ ದರ
ಜಾಗತಿಕವಾಗಿ ಕಚ್ಚಾತೈಲದ ಬೆಲೆ ಏರಿಕೆ ಕಂಡರೂ ದೇಶದೆಲ್ಲೆಡೆ ಗುರುವಾರ (ಸೆ.9)ದಂದು ಇಂಧನ ದರ ಪರಿಷ್ಕರಿಸಲಾಗಿಲ್ಲ. ಭಾರತದಲ್ಲಿ ಕಳೆದ ಬುಧವಾರ ಹಾಗೂ ಭಾನುವಾರ(ಸೆ.05) ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ಮಿಕ್ಕಂತೆ ಸತತವಾಗಿ ಕಳೆದ ನಾಲ್ಕು ದಿನಗಳಿಂದ ಇಂಧನ ದರದಲ್ಲಿ ಬದಲಾವಣೆಯಾಗಿಲ್ಲ.
Recommended Video
ಸೆ.5 ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲಾಗಿದ್ದು, ಸರಾಸರಿ 19 ಪೈಸೆ ಪ್ರತಿ ಲೀಟರ್ ತಗ್ಗಿಸಲಾಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿದ್ದವು. ತಮಿಳುನಾಡಿನಂತೆ ಪುದುಚೇರಿ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆ ತಗ್ಗಿಸಿದೆ. ಇದರಿಂದ ಪ್ರತಿ ಲೀಟರ್ ಮೇಲೆ ಸರಾಸರಿ 3 ರೂ. ತಗ್ಗಿತ್ತು. ಇನ್ನಷ್ಟು ಇಳಿಕೆಯಾಗಿದೆ.