ಚುನಾವಣಾ ಅಕ್ರಮ : ಎಸಿಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ
ಬೆಂಗಳೂರು, ಏಪ್ರಿಲ್ 16 : ಒಂದು ಪ್ರಭಾವಿ ರಾಜಕೀಯ ಪಕ್ಷದ ಆಳುಗಳಂತೆ ವರ್ತಿಸುತ್ತ, ಚುನಾವಣಾ ಅಕ್ರಮಗಳಲ್ಲಿ ಬಿಂದಾಸ್ ಆಗಿ ನಿರತರಾಗಿದ್ದ ಆರೋಪಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ವಿಫಲರಾದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಸಜಾ ರೂಪದಲ್ಲಿ ವರ್ಗಾವಣೆ ಮಾಡಲಾಗಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಈ ನಾಲ್ವರು ಪೊಲೀಸ್ ಅಧಿಕಾರಿಗಳು ಮತ್ತೊಂದು ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷದ ವಿರುದ್ಧ ಉದ್ದೇಶಪೂರ್ವಕವಾಗಿ ಕೆಲಸ ಮಾಡಿದ್ದಲ್ಲದೆ, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ನೀಡಿದ್ದ ದೂರುಗಳನ್ನು ಕೂಡ ದಾಖಲಿಸಿಕೊಂಡಿರಲಿಲ್ಲ ಮತ್ತು ಆರೋಪಿಯನ್ನು ಬಂಧಿಸಿರಲಿಲ್ಲ.
ಆಂಬ್ಯುಲೆನ್ಸ್, ಪೊಲೀಸ್ ವಾಹನಗಳಲ್ಲೂ ಆಯೋಗದಿಂದ ತಪಾಸಣೆ
ಈ ಹಿನ್ನೆಲೆಯಲ್ಲಿ, ಬೆಂಗಳೂರು ನಗರದ ಯಶವಂತಪುರ ಸಬ್ ಡಿವಿಷನ್ ನಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪಿ ರವಿಪ್ರಸಾದ್ ಅವರನ್ನು ತಕ್ಷಣ ಜಾರಿಯಾಗುವಂತೆ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಹೊಸ ಇಲಾಖೆಗೆ ಸೇರಲು ಅವಕಾಶ ಪಡೆಯದೆ ತಕ್ಷಣವೇ ಸಿಐಡಿಗೆ ಹಾಜರಾಗುವಂತೆ ಆದೇಶಿಸಲಾಗಿದೆ.
ಇವರ ಜೊತೆಗೆ, ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುವಂತೆ ವರ್ತಿಸುತ್ತಿದ್ದ, ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಶಿವರೆಡ್ಡಿ ವಿ (ಜ್ಞಾನಭಾರತಿಯಿಂದ ರಾಜ್ಯ ಇಂಟೆಲಿಜೆನ್ಸ್ ಗೆ), ಶ್ರೀನಿವಾಸ ವಿಟಿ (ಪೀಣ್ಯದಿಂದ ಸಿಐಡಿಗೆ) ಮತ್ತು ಮುದ್ದುರಾಜ್ ವೈ (ಯಶವಂತಪುರದಿಂದ ಸಿಐಡಿಗೆ) ಇವರನ್ನು ಕೂಡ ವರ್ಗಾವಣೆ ಮಾಡಲಾಗಿದ್ದು, ಅವರು ಕೂಡ ತಕ್ಷಣದಿಂದಲೇ ಸೂಚಿಸಲಾದ ಇಲಾಖೆಗೆ ಹಾಜರಾಗಬೇಕಿದೆ.
ಈ ನಾಲ್ವರ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ಆರೋಪಗಳಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಲಾಗಿರಲಿಲ್ಲ. ಹಿಂದೆ ಕೂಡ ಡಿಜಿಐಜಿಪಿ ಕಚೇರಿಯಿಂದ ಈ ಪೊಲೀಸ್ ಅಧಿಕಾರಿಗಳ ವಿರುದ್ಧ ವರದಿ ಅವರ ಪರವಾಗಿಯೇ ಹೋಗುತ್ತಿತ್ತು. ಅವರು ತಪ್ಪಿತಸ್ಥರೆಂದು ಸಾಬೀತಾಗಿರಲೇ ಇಲ್ಲ. ಇದರ ಬಗ್ಗೆ ಅನುಮಾನ ಬಂದಾಗ, ಜಂಟಿ ವಿಚಾರಣೆ ನಡೆಸಬೇಕೆಂದು ಆದೇಶಿಸಲಾಯಿತು.
ಬೆಂಗಳೂರಲ್ಲಿ 1600 ಸೂಕ್ಷ್ಮ ಮತಗಟ್ಟೆಗಳು, ವಿಶೇಷ ವೀಕ್ಷಕರ ನೇಮಕ
ಹೀಗಾಗಿ, ಅವರ ವಿರುದ್ಧದ ಜಂಟಿ ವಿಚಾರಣೆಯನ್ನು ರೈಲ್ವೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿರುವ, ಖಡಕ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರಿಗೆ ವಹಿಸಲಾಗಿತ್ತು. ವಿಚಾರಣೆ ನಡೆಸಿ ಆರೋಪ ಸಾಬೀತಾಗಿರುವ ಕಾರಣ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಈ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಬಂದಿದ್ದ ಹಿನ್ನೆಲೆಯಲ್ಲಿ, ಸಾಕ್ಷಿಗಳು, ದೂರುದಾರರು, ಸಂತ್ರಸ್ತರು ಮತ್ತು ಆರೋಪಿಗಳ ಹೇಳಿಕೆಗಳನ್ನು ಖುದ್ದಾಗಿ ಮತ್ತು ದೂರವಾಣಿ ಮೂಲಕ ಪಡೆಯಲಾಗಿದೆ. ಈ ಸಂಬಂಧ ಚುನಾವಣಾಧಿಕಾರಿಗೂ ದೂರು ನೀಡಲಾಗಿತ್ತು. ವಿಚಾರಣೆಯಲ್ಲಿ ಕಂಡುಬಂದ ಸಂಗತಿಗಳೆಂದರೆ...
* 2019ರ ಲೋಕಸಭೆ ಚುನಾವಣೆಯಲ್ಲಿ ಒಂದು ಪಕ್ಷದ ಪರವಾಗಿ ಬಿಂದಾಸ್ ಆಗಿಯೇ ಅಕ್ರಮ ಎಸಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳಾದ ಎಸಿಪಿ ಪಿ ರವಿಪ್ರಸಾದ್ ಮತ್ತು ಇನ್ಸ್ಪೆಕ್ಟರ್ ವಿಟಿ ಶ್ರೀನಿವಾಸ ಅವರು ವಿಫಲರಾಗಿದ್ದರು.
* ಆರೋಪಿ ತಮ್ಮ ಕಣ್ಣೆದುರೇ ಅಡ್ಡಾಡಿಕೊಂಡಿದ್ದರೂ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಲು ಮೇಲಿನ ಇಬ್ಬರು ಅಧಿಕಾರಿಗಳು ವಿಫಲರಾಗಿದ್ದರು. ಆರೋಪಿಯು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದು ಹಲವಾರು ಫೋಟೋಗಳ ಮೂಲಕ ತಿಳಿದುಬಂದಿತ್ತು.
* ಬದಲಾಗಿ, ಯಶವಂತಪುರ ಸಬ್ ಡಿವಿಷನ್ ಎಪಿಸಿ ರವಿಪ್ರಸಾದ್ ಅವರು ಜಾಲಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಪ್ರತಿದೂರು ನೀಡಿದ್ದರೂ ರವಿಪ್ರಸಾದ್ ಅವರು ಸ್ವೀಕರಿಸಿರಲಿಲ್ಲ.
* ಯಶವಂತಪುರ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ವೈ ಮುದ್ದುರಾಜ್ ಅವರು ಕೂಡ ಬಿಜೆಪಿ ಕಾರ್ಯಕರ್ತನ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ, ಆ ಬಿಜೆಪಿ ಕಾರ್ಯಕರ್ತ ದಾಖಲಿಸಿದ್ದ ದೂರುಗಳನ್ನು ವಿಚಾರಣೆಗೆ ತೆಗೆದುಕೊಂಡಿರಲಿಲ್ಲ.
* ಇಷ್ಟು ಸಾಲದೆಂಬಂತೆ, ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಈ ಪೊಲೀಸ್ ಅಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಜೊತೆಜೊತೆಗೇ ಎಲ್ಲೆಡೆ ಹೋಗುತ್ತಿದ್ದರು. ಆ ಅಧಿಕಾರಿಗಳ ಹುದ್ದೆ, ಪ್ರಭಾವದಿಂದಾಗಿ ಮತದಾರರನ್ನು ಆ ರಾಜಕೀಯ ಪಕ್ಷಕ್ಕೆ ಮತ ಹಾಕುವಂತೆ ಪ್ರಚೋದಿಸುತ್ತಿದ್ದರು ಎಂದು ಆರೋಪ ಹೊರಿಸಲಾಗಿತ್ತು.
* ಅಲ್ಲದೆ, ಆ ರಾಜಕೀಯ ಪಕ್ಷದ ಪ್ರಭಾವಿ ನಾಯಕರು ಆದೇಶಿದಂತೆ ಸುಲಭವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಆದರೆ, ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ನೀಡಿದ ಯಾವುದೇ ದೂರುಗಳನ್ನು ಸ್ವೀಕರಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಈ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.