ದೇವನಹಳ್ಳಿಯಲ್ಲಿ ಮುಂದುವರೆದ ಕಾಂಗ್ರೆಸ್ ನಾಯಕರ ಕೆಸರೆರಚಾಟ
ದೇವನಹಳ್ಳಿ, ಮೇ 22 : ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣೆ ಸಮೀಪದಲ್ಲಿ ಅಥವಾ ಚುನಾವಣೆ ನಂತರ ಸೋತರೂ, ಗೆದ್ದರು ಒಗ್ಗಟ್ಟಿನಿಂದ ಪಕ್ಷದಲ್ಲಿರುತ್ತಾರೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಎಲೆಕ್ಷನ್ ಮುಗಿದ ನಂತರವೂ ಬಣ ರಾಜಕೀಯ ಸೃಷ್ಠಿಯಾಗಿ, ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮುಂದುವರಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ವೆಂಕಟಸ್ವಾಮಿ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ವಿರುದ್ಧ 17,010 ಮತಗಳ ಅಂತರದಿಂದ ಸೋಲು ಅನುಭವಿಸಿದರು.
ಸಚಿವ ಸ್ಥಾನ ನನಗೂ ಬೇಕು ಎಂದ ಚಿಂತಾಮಣಿ ಶಾಸಕ ಕೃಷ್ಣಾ ರೆಡ್ಡಿ
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವೆಂಕಟಸ್ವಾಮಿ ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನನ್ನ ಸೋಲಿಗೆ ಕಾಂಗ್ರೆಸ್ ನವರೇ ಕಾರಣ ಎಂದು ದೂರಿದ್ದಾರೆ.
ಚನ್ನರಾಯಪಟ್ಟಣ ಜಿಪಂ ಸದಸ್ಯ ಲಕ್ಷ್ಮೀನಾರಾಯಣಪ್ಪ, ಕೆಪಿಸಿಸಿ ಸದಸ್ಯ ಚೇತನ್ ಗೌಡ, ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್ ಹಾಗೂ ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಪಕ್ಷದ ವಿರುದ್ಧ ಚಟುವಟಿಕೆಗಳನ್ನು ಮಾಡಿ ನನ್ನನ್ನು ಬಹುಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಅಪಾದಾನೆ ಮಾಡಿದ್ದಾರೆ.
ಮಾಜಿ ಶಾಸಕ ವೆಂಕಟಸ್ವಾಮಿ ನೀಡಿದ ಹೇಳಿಕೆಗೆ ಸೋಮವಾರ ಪ್ರವಾಸಿ ಮಂದಿರದಲ್ಲಿ ರಾಜೀವ್ಗಾಂಧಿ ಪುಣ್ಯತಿಥಿ ಆಯೋಜನೆ ಮಾಡಿ, ಉತ್ತರ ನೀಡಿದ ಕೆಪಿಸಿಸಿ ಸದಸ್ಯ ಚೇತನ್ಗೌಡ, ವೆಂಕಟಸ್ವಾಮಿ ಸೋಲಿಗೆ ನಾವ್ಯಾರು ಕಾರಣರಲ್ಲ.
ಮತದಾರರಿಗೆ ಹೊಸ ಮುಖಕ್ಕೆ ಅವಕಾಶ ಕೊಡಬೇಕೆನಿಸಿದೆ. ನಿಸರ್ಗ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದಾರೆ. ಅವರ ಬಳಿ ದುಡ್ಡು ಪಡೆದಿದ್ದೇವೆ. ಆದರೆ ಅವರು ಚುನಾವಣೆ ಪೂರ್ವದಲ್ಲಿ ಸಮಾಜ ಸೇವಕರಾಗಿದ್ದರು. ಆ ಸಂದರ್ಭದಲ್ಲಿ ದುಡ್ಡು ಪಡೆದುಕೊಂಡಿರುವುದು ನಿಜ.
ನಾರಾಯಣಸ್ವಾಮಿ ಎಲ್ಲಾ ಪಕ್ಷದ ಮುಖಂಡರಿಗೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಮಾಜ ಸೇವಕರಾಗಿದ್ದಾಗ ದುಡ್ಡು ನೀಡಿದ್ದಾರೆ. ಇನ್ನು ಕ್ಷೇತ್ರದಲ್ಲಿ ಎಲ್ಲಾ ಶಾಸಕರು ಪ್ರತಿ ಬುಧವಾರ ತಾಪಂ ಕಚೇರಿಯಲ್ಲಿ ಜನರ ಸಮಸ್ಯೆಗಳನ್ನು ಕೇಳುತ್ತಿದ್ದರು. ಆದರೆ ವೆಂಕಟಸ್ವಾಮಿ ಶಾಸಕನಾಗಿದ್ದಾಗ ಪಕ್ಷದ ಎಸಿ ಕಚೇರಿಯಲ್ಲಿ ಕಾಲ ಕಳೆಯುತ್ತಿದ್ದರು. ಆದ್ದರಿಂದ ಜನರು ಈ ಭಾರಿ ಅವರನ್ನು ತಿರಸ್ಕರಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿಯೂ ಸಹ ಪ್ರಚಾರ ಸೂಕ್ತ ರೀತಿಯಲ್ಲಿ ಮಾಡಿಲ್ಲ. ಕ್ಷೇತ್ರದ ಬಹುತೇಕ ಮುಖಂಡರ ಬಳಿ ವೆಂಕಟಸ್ವಾಮಿ ದುಡ್ಡು ಪಡೆದು ಹಿಂದಿರುಗಿಸಿಲ್ಲ. ಆದ್ದರಿಂದ ಮುಖಂಡರು ಅವರನ್ನು ಸೋಲುವಂತೆ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಿಂದ ವೆಂಕಟಸ್ವಾಮಿಗೆ ಟಿಕೆಟ್ ನೀಡಲು ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೂ ವೆಂಕಟಸ್ವಾಮಿ ವೀರಪ್ಪ ಮೊಯ್ಲಿ ಅವರ ಬೆಂಬಲದಿಂದ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಪಡೆದರು.
ಚುನಾವಣೆ ಸಂದರ್ಭದಲ್ಲಿ ವೆಂಕಟಸ್ವಾಮಿಗೆ ವಿರೋಧ ವ್ಯಕ್ತ ಪಡಿಸುತ್ತಿದ್ದವರು ಬೂದಿ ಮುಚ್ಚಿದ ಕೆಂಡದಂತೆ ನಾವೆಲ್ಲರೂ ವೆಂಕಟಸ್ವಾಮಿಗೆ ಕಾಯ ವಾಚ ಮನಸ್ಸು ಕಾರ್ಯ ನಿರ್ವಹಿಸುತ್ತೇವೆ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದರು.
ಈಗ ಚುನಾವಣೆ ನಂತರವೂ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಇದ್ದಂತ ಭಿನ್ನಮತವನ್ನು ನೇರವಾಗಿ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಬಂಡವಾಳ ಮಾಡಿಕೊಂಡು ಚುನಾವಣೆಯಲ್ಲಿ ಅತ್ಯಾಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದರು.
ಇದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮುಂದುವರಿದರೆ ಲೋಕಸಭಾ ಚುನಾವಣೆಯಲ್ಲಿಯೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆಯುಂಟಾಗುವುದು ಗ್ಯಾರಂಟಿ.