Ejipura flyover : 2022ರ ಡಿಸೆಂಬರ್ ಅಂತ್ಯದೊಳಗೆ ಈಜಿಪುರ ಮೇಲುಸೇತುವೆ ಕಾಮಗಾರಿ ಮುಕ್ತಾಯ
ಬೆಂಗಳೂರು, ಏ.4: ನಾಲ್ಕು ವರ್ಷದಿಂದ ನೆನಗುದಿಗೆ ಬಿದ್ದಿರುವ ಈಜಿಪುರ ಮೇಲುಸೇತುವೆ ನಿರ್ಮಾಣ ಕಾಮಗಾರಿ ಅಂತೂ ಇಂತೂ ಮುಕ್ತಾಯಗೊಳ್ಳುವ ಆಸೆ ಚಿಗುರಿರೊಡೆದಿದೆ. ಹೈಕೋರ್ಟ್ನ ಮಧ್ಯಪ್ರವೇಶದಿಂದಾಗಿ ಇದೀಗ ಕಾಮಗಾರಿ 2022ರ ಅಂತ್ಯದೊಳಗೆ ಮುಕ್ತಾಯವಾಗುವ ಸಾಧ್ಯತೆ ಇದೆ.
ಕಾಮಗಾರಿ ವಿಳಂಬ ಕಾರಣಕ್ಕೆ ಗುತ್ತಿಗೆ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಗುತ್ತಿಗೆದಾರ ಸಂಸ್ಥೆ ಸಿಂಪ್ಲೆಕ್ಸ್ ಇನ್ಫ್ರಾ ಲಿಮಿಟೆಡ್, ಸೇತುವೆ ಕಾಮಗಾರಿಯನ್ನು ಕೂಡಲೇ ಆರಂಭಿಸಲಾಗುವುದು, ಬಿಬಿಎಂಪಿಯಿಂದ ಸೂಕ್ತ ಸಹಕಾರ ದೊರೆತರೆ 2022ರ ಡಿ.31ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್ಗೆ ಸೋಮವಾರ ಪ್ರಮಾಣಪತ್ರ ಸಲ್ಲಿಸಿದೆ.
ಈಜಿಪುರ ಮೇಲ್ಸೇತುವೆ ನಿರ್ಮಾಣ ವಿಳಂಬ; ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಿ: HC
ಕೋರಮಂಗಲದ ವಾಸಿ ಆದಿನಾರಾಯಣಶೆಟ್ಟಿ ಸಲ್ಲಿಸಿದ್ದ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಗುತ್ತಿಗೆದಾರ ಕಂಪನಿ ಪರ ವಾದ ಮಂಡಿಸಿದ ವಕೀಲರು, ಕೋರ್ಟ್ ಕಳೆದ ಮಾ.29ರಂದು ನೀಡಿದ್ದ ನಿರ್ದೇಶನದಂತೆ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಹೇಳಿದರು.
ಅದನ್ನು ಪರಿಶೀಲಿಸಿದ ನ್ಯಾಯಪೀಠ, ಪಾಲಿಕೆ ಮುಖ್ಯ ಆಯುಕ್ತರು ಗುತ್ತಿಗೆದಾರ ಸಂಸ್ಥೆಯೊಂದಿಗೆ ಸಭೆ ನಡೆಸಿ, ಶೀಘ್ರ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಏ.18ಕ್ಕೆ ಮುಂದೂಡಿತು.
ಕಳೆದ ವಿಚಾರಣೆ ವೇಳೆ ನ್ಯಾಯಪೀಠ, 2022ರ ಡಿ.31 ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವೇ, ಕಾಲಮಿತಿ ತಿಳಿಸಿ ಈ ಬಗ್ಗೆ ಏ.4 ರೊಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಎಫ್ಐಆರ್ಗೆ ಆದೇಶ: ಕಳೆದ ವಿಚಾರಣೆಯನ್ನು ನ್ಯಾಯಾಲಯ, ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವೆ ಸಂಪರ್ಕ ಕಲ್ಪಿಸುವ ಈಜೀಪುರ ಮೇಲುಸೇತುವೆ ನಿರ್ಮಾಣ ಕಾರ್ಯ ವಿಳಂಬದ ಹಿನ್ನೆಲೆಯಲ್ಲಿ ಯೋಜನೆಯ ಗುತ್ತಿಗೆದಾರ ಸಂಸ್ಥೆ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಎಫ್ಐಆರ್ ಹೂಡುವಂತೆ ಬಿಬಿಎಂಪಿಗೆ ಆದೇಶಿಸಿತ್ತು.
ಅಲ್ಲದೆ, ಯೋಜನೆಯ ಟೆಂಡರ್ ರದ್ದು ಮಾಡಲು ಅನುಮತಿ ಕೋರಿ ಬೆಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿರುವ ಮನವಿಯನ್ನು ಸರ್ಕಾರ 1 ವಾರದಲ್ಲಿ ಪರಿಗಣಿಸಿ ಗುತ್ತಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು. ಅದರಂತೆ ಸಚಿವ ಸಂಪುಟ ಟೆಂಡರ್ ರದ್ದತಿಗೆ ನಿರ್ಣಯ ಕೈಗೊಂಡಿದೆ.
ಪಾಲಿಕೆ ಆಯುಕ್ತರಿಗೆ ತರಾಟೆ: ಅಲ್ಲದೆ ನ್ಯಾಯಪೀಠ, ಕಾಮಗಾರಿ ವಿಳಂಬಕ್ಕೆ ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಯಾವ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದೆಂಬ ಬಗ್ಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು, ಇಲ್ಲವೇ ಆಯುಕ್ತರೇ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಪಾಲಿಕೆ ಆಯುಕ್ತರ ವಿರುದ್ಧ ಕಿಡಿಕಾರಿದ್ದ ನ್ಯಾಯಪೀಠ ''ಅವರಿಗೆ ಕೆಲಸ ಮಾಡಲು ಆಗದಿದ್ದರೆ ಆಯುಕ್ತರ ಹುದ್ದೆಯನ್ನು ತ್ಯಜಿಸಲು ಹೇಳಿ ಬೇರೆ ಸಮರ್ಥ ಅಧಿಕಾರಿಗಳು ಬರುತ್ತಾರೆ. ಇಷ್ಟು ದಿನ ಯೋಜನೆ ವಿಳಂಬವಾದರೂ ಪಾಲಿಕೆ ಆಯುಕ್ತರು ಏನು ಮಾಡುತ್ತಿದ್ದಾರೆ'' ಎಂದು ಖಾರವಾಗಿ ಪ್ರಶ್ನಿಸಿತು.
2019ರ ನವೆಂಬರ್ನಲ್ಲಿ ಮುಗಿಯಬೇಕಿದ್ದ ಕಾಮಗಾರಿ: ನಿಗದಿಯಂತೆ 2019ರ ನವೆಂಬರ್ ತಿಂಗಳಲ್ಲಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಆ ಅವಧಿ ಮುಗಿದು ಇಷ್ಟು ವರ್ಷವಾದರೂ ಪೂರ್ಣಗೊಂಡಿಲ್ಲ. ಬಿಬಿಎಂಪಿ ಇಲ್ಲ ಸಲ್ಲದ ಕಾರಣಗಳನ್ನು ಹೇಳುತ್ತಿವೆ, ಆ ಅಡ್ಡಿಗಳ ಬಗ್ಗೆ ಮೊದಲೇ ಅದಕ್ಕೆ ತಿಳಿದಿರಲಿಲ್ಲವೇ? ಹಾಗಿದ್ದಾರೆ ಸಾರ್ವಜನಿಕ ಕೋಟ್ಯಂತರ ರೂ. ಹಣ ವ್ಯಯ ಮಾಡಿ ಏಕೆ ಕಾಮಗಾರಿ ಆರಂಭಿಸಬೇಕಿತ್ತು ಎಂದು ನ್ಯಾಯಪೀಠ ಪ್ರಶ್ನಿಸಿತು.
ಕಾಮಗಾರಿ ವಿಳಂಬ ಮಾಡಿರುವುದಕ್ಕೆ ಮೇಲುಸೇತುವೆ ನಿರ್ಮಾಣ ಗುತ್ತಿಗೆ ಪಡೆದಿರುವ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ ದಂಡ ವಿಧಿಸಲಾಗಿದೆ. ಸದ್ಯ ಶೇ.44ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದರಿಂದಾಗಿ ಆ ಭಾಗದಲ್ಲಿ ಸಾರ್ವಜನಿಕರಿಗೆ ಭಾರಿ ತೊಂದರೆಯಾಗುತ್ತಿದೆ.
Recommended Video