ಕಟ್ಟಡ ಕುಸಿತ: ಬಾಲಕಿ ಸಂಜನಾ ರಕ್ಷಿಸಿದ್ದು ಯಾರು?
ಬೆಂಗಳೂರು, ಅಕ್ಟೋಬರ್ 16: ಈಜಿಪುರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತದ ದುರಂತದ ನಡುವೆ ಪವಾಡ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ನಾಲ್ಕು ಗಂಟೆಗಳ ಕಾಲ ಸಿಲುಕಿದ್ದ ಬಾಲಕಿಯ ರಕ್ಷಣೆ ಮಾಡಿದ ಕಾರ್ಯಾಚರಣೆ ಬಗ್ಗೆ ವಿವರ ಇಲ್ಲಿದೆ...
ಸೋಮವಾರ ಮುಂಜಾನೆ ಸುಮಾರು 6.50ರ ವೇಳೆಗೆ ಕಟ್ಟಡ ಕುಸಿದಿದೆ. ಕಟ್ಟಡ ಯಾವ ಕಾರಣಕ್ಕೆ ಕುಸಿದಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 3 ವರ್ಷ ವಯಸ್ಸನ ಸಂಜನಾ ಎಂಬ ಬಾಲಕಿಯೊಬ್ಬಳು ಪವಾಡ ಸದೃಶ ರೀತಿಯಲ್ಲಿ ಬದುಕುಳಿದ್ದಾಳೆ.
ಪವಾಡ ಸದೃಶವಾಗಿ ಪಾರಾದ ಬಾಲಕಿಗೆ ಸರ್ಕಾರವೇ ಅಪ್ಪ ಅಮ್ಮ
ಈಜಿಪುರದ ಗುಂಡಪ್ಪ ಲೇಔಟ್ ನ ಚರ್ಚ್ ರಸ್ತೆಯ 7ನೇ ಕ್ರಾಸ್ ನಲ್ಲಿರುವ ಕಟ್ಟಡ ಕುಸಿತವಾಗುತ್ತಿದ್ದಂತೆ, ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಬಂದಿದೆ. ಕಾರ್ಯಾಚರಣೆ ಕೈಗೊಂಡ ಅಗ್ನಿಶಾಮಕ ಮತ್ತು ಎನ್ಡಿಆರ್ಎಫ್ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡಿತ್ತು.
ಸಿಲಿಂಡರ್ ಸ್ಫೋಟ, ಕಟ್ಟಡ ಕುಸಿತ, 4 ಶವಗಳು ಪತ್ತೆ
ಕಟ್ಟಡದ ಅವಶೇಷಗಳ ಅಡಿಯಲ್ಲಿ ಮೊದಲಿಗೆ ಮೂರು ಶವಗಳು ಪತ್ತೆಯಾಗಿದೆ. ಆರು ಮಂದಿಯನ್ನು ರಕ್ಷಿಸಲಾಗಿದೆ. ಆದರೆ, ಬಾಲಕಿ ಸಂಜನಾ ಕುಟುಂಬಸ್ಥರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ಷ್ಮವಾಗಿ ಕಾರ್ಯಾಚರಣೆ ಮಾಡಲು ಸಿಬ್ಬಂದಿ ನಿರ್ಧರಿಸುತ್ತಾರೆ. ಬದುಕುಳಿದವರ ಪತ್ತೆ ಕಾರ್ಯಕ್ಕಾಗಿ ಶ್ವಾನದಳವನ್ನು ಬಳಸಲಾಯಿತು.ಮುಂದೆ ಓದಿ...
ಬಾಲಕಿಯನ್ನು ರಕ್ಷಿಸಿದ ರೋದನ
ಮಗುವಿನ ಅಳು ಕೇಳಿ ಬಂದ ಕಡೆಯಲ್ಲಿ ನಿಧಾನವಾಗಿ ಅವಶೇಷಗಳನ್ನು ಸರಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮೊದಲಿಗೆ ಬಾಲಕಿಯ ಕೈ ಕಾಣಿಸಿದೆ. ನಂತರ ಇಕ್ಕಟ್ಟಾದ ಸ್ಥಳದಲ್ಲಿ ಅವುಚಿಕೊಂಡು ಕುಳಿತ್ತಿದ್ದ ಬಾಲಕಿಯನ್ನು ಎತ್ತಿಕೊಂಡ ಸಿಬ್ಬಂದಿ ತಮ್ಮ ತಂಡದ ಮುಖ್ಯಸ್ಥ ವರದರಾಜನ್ ಅವರ ಕೈಗೆ ನೀಡಿದ್ದಾರೆ. ಬಾಲಕಿ ರಕ್ಷಣೆಯಾಗುತ್ತಿದ್ದಂತೆ ಸುತ್ತಮುತ್ತಲಿನಲ್ಲಿ ಸೇರಿದ್ದವರು ಶಿಳ್ಳೆ ಹಾಗೂ ಕರತಾಡನಗಳ ಮೂಲಕ ಸಿಬ್ಬಂದಿಯನ್ನು ಶ್ಲಾಘಿಸಿದರು.
ಕಾರ್ಯಾಚರಣೆ ಸುಲಭವಾಗಿರಲಿಲ್ಲ
ಸುಮಾರು 15 ರಿಂದ 20 ವರ್ಷ ಹಳೆಯ ಕಟ್ಟಡದ ಸರಿಯಾದ ವಿನ್ಯಾಸ ತಕ್ಷಣಕ್ಕೆ ಲಭ್ಯವಿಲ್ಲದ ಕಾರಣ, ಸ್ಥಳೀಯ ಪೊಲೀಸರ ನೆರವಿನಿಂದ ಸಿಕ್ಕ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕದಳ ಸಿಬ್ಬಂದಿಗೆ ಆರಂಭದಲ್ಲೇ ವಿಘ್ನ ಎದುರಾಯಿತು. ಇಲಾಖೆಯ ಮೂರು ಸಿಬ್ಬಂದಿ ಮೇಲೆ ಗೋಡೆ ಕುಸಿಯಿತು. ಅದೃಷ್ಟವಶಾತ್ ಮೂವರು ಕೂಡಾ ಪ್ರಾಣಾಪಾಯದಿಂದ ಬಚಾವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವರ ಕೃಪೆ ಎಂದ ಸಿಬ್ಬಂದಿ
ಮಗುವಿನ ಅಳು ಶಬ್ದ ಕೇಳಿಸಿದ ತಕ್ಷಣ, ಜೆಸಿಬಿಯಿಂದ ನಡೆಸಿದ ಕಾರ್ಯಾಚರಣೆ ನಿಲ್ಲಿಸಿದ ಸಿಬ್ಬಂದಿ, ಕೈಯಿಂದ ಕಲ್ಲುಗಳನ್ನು ಸರಿಸಿ ಮಗುವನ್ನು ರಕ್ಷಿಸಿದರು. ಮಗುವನ್ನು ಅಂಬುಲೆನ್ಸ್ ಮೂಲದ ಸಮೀಪದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಇದು ದೇವರ ಕೃಪೆ ನಾವು ರಕ್ಷಿಸಿದ್ದಲ್ಲ ಎಂದು ಅಗ್ನಿಶಾಮಕದಳ ಮುಖ್ಯಸ್ಥ ವರದರಾಜನ್ ಹೇಳಿದ್ದಾರೆ. ಮಗುವನ್ನು ರಕ್ಷಿಸಿದ್ದು ಮನೆಯಲ್ಲಿದ್ದ ಉಕ್ಕಿನ ಬೀರು ಎಂಬುದು ತಿಳಿದು ಬಂದಿದೆ.
|
ಸಾವಿನ ಸಂಖ್ಯೆ ಈಗ ಏಳಕ್ಕೇರಿದೆ
ರವಿಚಂದ್ರ ಹಾಗೂ ಕಲಾವತಿ ಎಂಬವರು ಮೇಲಿನ ಮನೆಯಲ್ಲಿದ್ದರು. ಇಬ್ಬರು ಮೃತಪಟ್ಟಿದ್ದಾರೆ. ಕೆಳಗಿನ ಮನೆಯಲ್ಲಿದ್ದ ಗರ್ಭಿಣಿ ಅಶ್ವಿನಿ (ಬಾಲಕಿ ಸಂಜನಾ ತಾಯಿ) ಮೃತಪಟ್ಟಿದ್ದು, ಇದೀಗ ಶವ ಪತ್ತೆಯಾಗಿದೆ. ಸಾವಿನ ಸಂಖ್ಯೆ ಈಗ ಏಳಕ್ಕೇರಿದೆ. ಆರು ಮಂದಿ ಗಾಯಗೊಂಡಿದ್ದಾರೆ. ಬದುಕುಳಿದಿರುವ ಮತ್ತೊಬ್ಬ ಬಾಲಕಿ ಪ್ರಿಯಾ ತನ್ನ ಪ್ರತಿಕ್ರಿಯೆ ನೀಡಿದ್ದು, ಅಮ್ಮ ಹಾಗೂ ಅಣ್ಣ ದಿಲೀಪ್ ನೀರು ಹಿಡಿಯಲು ಹೊರಕ್ಕೆ ಹೋಗಿದ್ದರು. ನಾನು, ಅಪ್ಪ(ಅಶೋಕ್) ಅಣ್ಣ ಸುನಿಲ್ ಮಲಗಿದ್ದೆವು. ಅಪ್ಪ, ಅಣ್ಣನಿಗೆ ತೀವ್ರಗಾಯಗಳಾಗಿವೆ ಎಂದಿದ್ದಾಳೆ.