ಪವಾಡ ಸದೃಶವಾಗಿ ಪಾರಾದ ಬಾಲಕಿಗೆ ಸರ್ಕಾರವೇ ಅಪ್ಪ ಅಮ್ಮ
ಬೆಂಗಳೂರು, ಅಕ್ಟೋಬರ್ 16: ಈಜಿಪುರದ ಮನೆಯೊಂದರಲ್ಲಿ ಸಂಭವಿಸಿದ ಸ್ಫೋಟ, ಕಟ್ಟಡ ಕುಸಿತ ದುರ್ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ 3 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಪವಾಡ ಸದೃಶವಾಗಿ ಪಾರಾಗಿದ್ದಾಳೆ.
ಸಿಲಿಂಡರ್ ಸ್ಫೋಟ, ಕಟ್ಟಡ ಕುಸಿತ, 4 ಶವಗಳು ಪತ್ತೆ
ಅವಶೇಷಗಳ ಅಡಿಯಿಂದ ಜೀವಂತವಾಗಿ ಹೊರ ಬಂದ ಬಾಲಕಿಯನ್ನು ಸಂಜನಾ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ಕರ್ನಾಟಕ ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಬಾಲಕಿಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಘೋಷಿಸಿದ್ದಾರೆ.
ಈಜಿಪುರದ ಚರ್ಚ್ ರಸ್ತೆಯ 7ನೇ ಕ್ರಾಸ್ ನಲ್ಲಿರುವ ಮೂರು ಅಂತಸ್ತಿನ ವಸತಿ ಗೃಹದಲ್ಲಿ ಬೆಳಗ್ಗೆ 6.50ರ ಸುಮಾರಿಗೆ ಭಾರಿ ಶಬ್ದ ಕೇಳಿಸಿದೆ. ಅಕ್ಕ ಪಕ್ಕದ ಮನೆಯವರು ಸ್ಫೋಟದ ಶಬ್ದ ಕೇಳಿಸಿಕೊಂದು ಮನೆಯಿಂದ ಹೊರಗೆ ಬಂದು ನೋಡಿದಾಗ ಕಟ್ಟಡ ಕುಸಿದು ಬಿದ್ದಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಸೈಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಘಟನಾ ಸ್ಥಳದ ಚಿತ್ರಗಳು ಮುಂದಿವೆ...
ಕಟ್ಟಡ ಕುಸಿತದಿಂದ 6 ಮಂದಿ ಸಾವು
ಬೆಂಗಳೂರಿನ ಈಜಿಪುರ ಬಡಾವಣೆಯ ಮನೆ ಕುಸಿತದಿಂದ ಸಾವನ್ನಪ್ಪಿದವರನ್ನು ಕಲಾವತಿ(69), ರವಿಚಂದ್ರ(48), ಹರಿಪ್ರಸಾದ್(19), ಪವನ್ ಕಲ್ಯಾಣ್(18), ಅಶ್ವಿನಿ(ಗರ್ಭಿಣಿ), ಶರವಣ ಎಂದು ಗುರುತಿಸಲಾಗಿದೆ. 3 ವರ್ಷದ ಬಾಲಕಿ ಸಂಜನಾಳನ್ನು ರಕ್ಷಿಸಲಾಗಿದ್ದು, ಘಟನೆಯಿಂದ ಆಘಾತಗೊಂಡಿರುವುದು ಕಂಡು ಬಂದಿದೆ. ಸೂಕ್ತ ಚಿಕಿತ್ಸೆ ನಂತರ ಆಕೆಯ ಕುಟುಂಬಸ್ಥರ ವಿವರ ಪಡೆಯಲಾಗುವುದು ಎಂದು ಈಜಿಪುರ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಏನು ಕಾರಣ?
ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಸ್ಫೋಟಗೊಂಡ ಮನೆಯಲ್ಲಿ ಏಳು ಮಂದಿ ವಾಸವಿದ್ದರು ಎಂಬ ಮಾಹಿತಿ ಮೊದಲಿಗೆ ಬಂದಿತ್ತು. ಆದರೆ, ಕಟ್ಟಡದ ನೆಲ ಮಹಡಿಯಲ್ಲಿ ವಾಸವಿರುವ ಮಹಿಳೆ, ಸಿಲಿಂಡರ್ ಸ್ಟವ್ ಬಳಸಿಲ್ಲ ಎಂದಿದ್ದಾರೆ. ಭಾರಿ ಶಬ್ದ ಕೇಳಿ ಬಂದಿದ್ದು, ನಿಜ ಆದರೆ, ಸಿಲಿಂಡರ್ ಸ್ಫೋಟ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಮಳೆ ಹಾನಿಯಿಂದ ಕಟ್ಟಡ ಕುಸಿದಿಲ್ಲ
ಇದು ಗುಣೇಶ್ ಎಂಬುವವರಿಗೆ ಸೇರಿರುವ ಕಟ್ಟಡ. ತೀರಾ ಹಳೆ ಕಟ್ಟಡವೇನಲ್ಲ, 20 ವರ್ಷ ಹಳೆಯದಿರಬಹುದು. ಮಳೆ ಹಾನಿಯಿಂದ ಕಟ್ಟಡ ಕುಸಿದಿಲ್ಲ. ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದಿರುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಯಿಲ್ಲ. ಸ್ಫೋಟಕ್ಕೆ ಏನು ಕಾರಣ ಎಂಬುದು ಇನ್ನೂ ಪತ್ತೆಯಾಗಿಲ್ಲ.ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ ಅನೇಕ ಮಂದಿ ಸಿಲುಕಿರುವ ಸಾಧ್ಯತೆಗಳಿವೆ.
ಅಗ್ನಿಶಾಮಕದಳದ ಸಿಬ್ಬಂದಿಗೂ ಗಾಯ
ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕದಳದ ಮೂವರು ಸಿಬ್ಬಂದಿಗಳ ಮೇಲೆ ಮನೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮೂವರು ಕೂಡಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕಟ್ಟಡ ಕುಸಿತದ ಕಾರಣ ನಿಗೂಢ
ಅಕ್ಕ ಪಕ್ಕದವರ ಹೇಳಿಕೆ ಪ್ರಕಾರ ದೊಡ್ಡ ಮಟ್ಟದ ಸ್ಫೋಟದ ಶಬ್ಧ ಕೇಳಿ ಬಂದಿದೆ. ಆದರೆ, ಇದಕ್ಕೆ ಸಿಲಿಂಡರ್ ಸ್ಫೋಟವೇ ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ಕಟ್ಟಡ ನಿರ್ಮಾಣದಲ್ಲಿ ಲೋಪವಿರುವ ಬಗ್ಗೆ ಕೂಡಾ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಟ್ಟಡ ಕುಸಿತದಿಂದ ಅಕ್ಕ ಪಕ್ಕದ ಮನೆಗಳಿಗೂ ಹಾನಿ ಯುಂಟಾಗಿದೆ.
ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ
ಕಟ್ಟಡ ಕುಸಿದು ಸಾವನ್ನಪ್ಪಿದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ. ಜಂಟಿ ಆಯುಕ್ತರ ಜತೆ ಮಾತುಕತೆ ನಡೆಸುತ್ತೇನೆ. ಪರಿಹಾರ ಕೊಡುವುದು ಕಷ್ಟವಲ್ಲ, ಆದರೆ ಜೀವಗಳು ಹೋಗಿರುವುದು ಬೇಸರದ ಸಂಗತಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 5 ಲಕ್ಷ ರು ಘೋಷಿಸಲಾಗಿದೆ.
ಗಾಬರಿಗೊಂಡಿರುವ ಅಕ್ಕಪಕ್ಕದವರು
ಸ್ಥಳೀಯರಾದ ಅಲ್ವೀನ್ ಅವರ ಪ್ರಕಾರ, ಕುಸಿದ ಕಟ್ಟಡದಲ್ಲಿ 7 ಮಂದಿ ವಾಸವಾಗಿದ್ದರು. ಕಟ್ಟಡದ ಕುಸಿದಿರುವ ಕಂಡ ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದೆವು. ತಕ್ಷಣಕ್ಕೆ ನೆರವು ಸಿಕ್ಕಿದ್ದರಿಂದ ಐದಾರು ಮಂದಿ ರಕ್ಷಣೆ ಸಾಧ್ಯವಾಯಿತು. ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕ ಮಂದಿ ಇರುವ ಸಾಧ್ಯತೆಯಿದೆ. ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.