ಈದ್ಗಾ ಮೈದಾನ ವಿವಾದ: ಶಾಂತಿ ಸಭೆ ಕರೆದ ಚಾಮರಾಜಪೇಟೆ ಪೊಲೀಸ್
ಬೆಂಗಳೂರು, ಆಗಸ್ಟ್ 09:ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದಾದ ಮೇಲೆ ಮತ್ತೊಂದು ಬೇಡಿಕೆಗಳು ಕೇಳಿಬರುತ್ತಿವೆ. ಆಸ್ತಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಕಡೆಗೇ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಬಿಬಿಎಂಪಿ ಹೇಳಿತ್ತು. ಇದೀಗ ಹಿಂದೂ ಸಂಘಟನೆಗಳು ಗಣೇಶ ಹಬ್ಬದ ಆಚರಣೆಗೆ ಮೈದಾನವನ್ನು ಕೇಳುತ್ತಿದ್ದು ಇದರಿಂದ ಕೋಮ ಸಾಮರಸ್ಯ ಹದಗೆಡುವ ಸಾಧ್ಯತೆಯಿದ್ದು ಪೊಲೀಸ್ ಇಲಾಖೆ ಶಾಂತಿ ಸಭೆ ನಡೆಸಲು ಮುಂದಾಗಿದ್ದಾರೆ.
ಈದ್ಗಾ ಮೈದಾನದಲ್ಲಿ ಹಿಂದೂ ಸಂಘಟನೆಗಳು ಗಣೇಶ ಹಬ್ಬ ನಡೆಸಲು ಲೇಸರ್ ಶೋ ಏರ್ಪಡಿಸಲು ಅನುಮತಿಯನ್ನು ಕೇಳುತ್ತಿದ್ದಾರೆ. ಇದರೊಂದಿಗೆ ಕಂದಾಯ ಇಲಾಖೆಗೆ ಈದ್ಗಾ ಮೈದಾನದಲ್ಲಿರುವ ಗೋಡೆ ತೆರವಿಗೆ ಮನವಿಯನ್ನು ಮಾಡಲಾಗುತ್ತಿದೆ. ಶಾಸಕ ಜಮೀರ್ ಅಹಮದ್ ಖಾನ್ ಸಹ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಹೊರತು ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶ ಮಾಡಿಕೊಡಲಾಗುವುದಿಲ್ಲ ಎಂದಿದ್ದಾರೆ.
ಈದ್ಗಾ ಮೈದಾನ ಈ ಎಲ್ಲಾ ಕಾರಣದಿಂದಾಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಚಾಮರಾಜಪೇಟೆ ಪೊಲೀಸರು ಹಗಲು ರಾತ್ರಿ ಎನ್ನದೇ ಮೈದಾನದಲ್ಲಿ ಗಸ್ತು ಕಾಯುತ್ತಿದ್ದಾರೆ. ಈ ಕಾರಣದಿಂದಲೇ ಯಾವುದೇ ಕಾರಣಕ್ಕೂ ಕೋಮು ಸಾಮರಸ್ಯ ಹದಗೆಡಬಾರದು ಎಂದು ಹಿಂದೂ, ಮುಸ್ಲಿಂ ಮುಂಖಂಡರು ಮಾಜಿ ಪಾಲಿಕೆ ಸದಸ್ಯರು , ಸಂಘಟನೆಗಳನ್ನು ಸೇರಿಸಿ ಶಾಂತಿ ಸಭೆಯನ್ನು ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಸಂಧಾನ ಸಭೆಗೆ ಮುಂದಾದ ಪೊಲೀಸ್ ಇಲಾಖೆ
ಈದ್ಗಾ ಮೈದಾನ ವಿಷಯಕ್ಕೆ ಸಂಬಂಧಿಸಿದಂತೆ ಇಂದು (ಆಗಸ್ಟ್ 09) ಪೊಲೀಸ್ ಇಲಾಖೆಯಿಂದ ಶಾಂತಿ ಸಭೆಯನ್ನು ನಡೆಸಲಾಗುವುದು. ಒಂದು ಕಡೆ ಶಾಸಕ ಜಮೀರ್ ಹೇಳಿಕೆ ಖಂಡಿಸಿ ಹಿಂದು ಸಂಘಟನೆಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ಕಡೆ ಹಿಂದು ಸಂಘಟನೆಗಳಿಂದ ಗಣೇಶೋತ್ಸವ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಇವೆರಡರ ನಡುವೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು. ಈ ಹಿನ್ನೆಲೆಯಲ್ಲಿ ಇಂದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಗುವುದು. ಇಂದು ಸಂಜೆ 4.30 ಕ್ಕೆ ಶಾಂತಿ ಸಭೆ ನಡೆಯಲಿದ್ದೂ ಮುಸ್ಲಿಂ ಮುಖಂಡರು, ಕನ್ನಡ ಪರ ಸಂಘಟನೆಗಳು, ಹಿಂದುಪರ ಸಂಘಟನೆಗಳು, ಚಾಮರಾಜಪೇಟೆ ನಾಗರಿಕ ವೇದಿಕೆ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಭಾಗಿಯಾಗಲಿದ್ದಾರೆ. ಸಭೆ ನೇತೃತ್ವವನ್ನು ಸ್ಥಳೀಯ ಎಸಿಪಿ, ಇನ್ ಸ್ಪೆಕ್ಟರ್ ವಹಿಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಇದರ ಜೊತೆಗೆ ಸೌಹಾರ್ದದಿಂದ ಈ ಬಾರಿ ಸ್ವಾತಂತ್ರ ದಿನಚಾರಣೆ ಆಚರಿಸಲು ಶಾಂತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿದು ಬಂದಿದೆ.
Recommended Video