ಸಾಮಾಜಿಕ ಜಾಲತಾಣದಿಂದ ಸುರೇಶ್ ಕುಮಾರ್ ದೂರ ದೂರ !
ಬೆಂಗಳೂರು, ಮೇ. 14: ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರ ಸರಣಿ ಸಾವಿನ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಆಕ್ಸಿಜನ್ ಇಲ್ಲದೇ ಉಸಿರು ನಿಲ್ಲಿಸಿದ ಬಳಿಕ ಜನರು "ಎಫ್ ಬಿ ಮಿನಿಸ್ಟರ್" ಎಂದು ಟೀಕಿಸಿದ್ದರು. ಜನರ ಟೀಕೆಯೋ, ಚಾಮರಾಜನಗರ ಸರ್ಕಾರಿ ಆಸ್ಪತ್ರೆಯ ಅವಘಡದ ಪರಿಣಾಮವೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು "ಸಾಮಾಜಿಕ ಮಾಧ್ಯಮಗಳಿಂದ" ಸಂಪೂರ್ಣ ಹೊರ ಬಂದಿದ್ದಾರೆ.
ಮೊದಲಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇತ್ತೀಚೆಗಂತೂ ದಿನಕ್ಕೊಂದು ಪೋಸ್ಟ್ ಹಾಕುವುದು. ಶಾಲೆಗೆ ಭೇಟಿ ನೀಡಿದರೂ ಪೋಸ್ಟ್, ಪೆಟ್ರೋಲ್ ಬಂಕ್ ನಲ್ಲಿ ಯಾರನ್ನಾದರೂ ಭೇಟಿ ಮಾಡಿದರೂ ಅದಕ್ಕೊಂದು ಒಕ್ಕಣೆ ಬರೆದು ಪೋಸ್ಟ್ ಮಾಡುತ್ತಿದ್ದರು. ಅವರ ಪ್ರತಿಯೊಂದು ಸುದ್ದಿಗೋಷ್ಠಿಯೂ ಫೇಸ್ ಬುಕ್ ನಲ್ಲಿ ಲೈವ್ ಮಾಡುತ್ತಿದ್ದರು. ಅವರ ನಿತ್ಯ ಜೀವನದಲ್ಲಿ ಕಡ್ಡಿ ಅಲ್ಲಾಡಿದರೂ ಫೇಸ್ ಬುಕ್ ವಾಲ್ ನಲ್ಲಿ ಒಕ್ಕಣಿ ಹಾಕುತ್ತಿದ್ದರು.
ಆದರೆ, ಎರಡು ಮಹತ್ವದ ವಿಚಾರದಲ್ಲಿ ಸುರೇಶ್ ಕುಮಾರ್ ಎಡವಿದ್ದೇ, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದರು. ಮೇ. 6 ಕ್ಕೆ ಅವರು ಫೇಸ್ ಬುಕ್ ನಿಂದ ನಿಷ್ಕ್ರಿಯರಾಗಿದ್ದಾರೆ. ಅದಕ್ಕಿಂತೂ ಮೊದಲು ದಿನಕ್ಕೆ ಏನಿಲ್ಲದಿದ್ದರೂ ಎರಡು ಪೋಸ್ಟ್ ಆದರೂ ಮಾಡುತ್ತಿದ್ದರು. ಈ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯವಾಗಿರುತ್ತಿದ್ದರು. ಚಾಮರಾಜನಗರ ಆಸ್ಪತ್ರೆ ದುರಂತ ನಿರ್ವಹಣೆಯಲ್ಲಿ ವಿಫಲರಾದ ಬಳಿಕ ಸಾಮಾಜಿಕ ಜಾಲ ತಾಣಗಳಿಂದ ಸಂಪೂರ್ಣವಾಗಿ ಹೊರಗೆ ಬಂದಿದ್ದಾರೆ. ಮೇ. 6 ರಿಂದ ಈಚೆಗೆ ಒಂದು ಪೋಸ್ಟ್ ಕೂಡ ಹಾಕಿಲ್ಲ.
ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಇಲ್ಲದೇ 24 ಮಂದಿ ಕೊರೊನಾ ಸೋಂಕಿತರು ಸಾವಿಗೀಡಾಗಿದ್ದರು. ಅದಕ್ಕಿಂತಲೂ ಒಂದು ದಿನ ಮೇ. 2 ರಂದು ಸಚಿವ ಸುರೇಶ್ ಕುಮಾರ್ ಅವರು ರಾಜಾಜಿನಗರ ಬಿಜೆಪಿ ವತಿಯಿಂದ ನೀಡಿದ್ದ ಆಂಬ್ಯೂಲೆನ್ಸ್ ಉದ್ಘಾಟಿಸಿದ್ದರು. ರಾಜಾಜಿನಗರದಲ್ಲಿ ತಾನು ಕಷ್ಟ ಪಟ್ಟು, ಧಾನಿಗಳ ನೆರವಿನಿಂದ ಒಂದು ಕೋವಿಡ್ ಹಾರೈಕೆ ಕೇಂದ್ರ ಮಾಡಿದ ಸಾಧನೆಯ ಬಗ್ಗೆ ಹೆಮ್ಮೆಯಿಂದ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಕಡು ಬಡವರು, ತಾಂಡಾದ ಜನರೇ ವಾಸಿಸುವ ಚಾಮರಾಜನಗರ ಜಿಲ್ಲೆಯ ಬಗ್ಗೆ ಪ್ರಜ್ಞಾವಂತ ಸಚಿವರು ಎಚ್ಚೆತ್ತುಕೊಳ್ಳುವುದು ಮರೆತಿದ್ದರು.
ಚಾಮರಾಜನಗರದ ಘಟನೆಯಿಂದ ರಾಜ್ಯ ಬಿಜೆಪಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಮರ್ಯಾದೆ ಕಳೆದುಕೊಂಡಿಸ್ತು. ಉಸ್ತುವಾರಿ ಸಚಿವನಾಗಿ ನನ್ನದು ಜವಾಬ್ಧಾರಿ ಇದೆ ಎಂದು ಮುಖ್ಯಮಂತ್ರಿಗಳು ಕೇಳುವ ಮೊದಲೇ "ನಾನು ರಾಜೀನಾಮೆ ಕೊಡ್ತೇನೆ" ಎಂದು ಆಪ್ತ ಸಚಿವರೊಬ್ಬರಿಗೆ ನೀಡಿದ್ದರಂತೆ. ಆ ಸಚಿವರು ರಾಜೀನಾಮೆ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೂಡಲೇ ಹರಿದು ಹಾಕಿದ್ದಾರೆ ಎಂಬ ವಿಚಾರ ಇದೀಗ ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ಚರ್ಚೆಗೆ ನಾಂದಿ ಹಾಡಿದೆ.
Recommended Video
ತೊಡಕುಗಳು: ಚಾಮರಾಜನಗರ ಬಹುದೊಡ್ಡ ದುರಂತಕ್ಕೆ ಹೊಣೆ ಮಾಡುವ ಮೊದಲೇ ರಾಜೀನಾಮೆ ಸಂದೇಶ ರವಾನಿಸಿದ್ದಾರೆ. ಸಚಿವರು ರಾಜೀನಾಮೆ ಎಂದರೆ ಈ ಪರಿಸ್ಥಿತಿಯಲ್ಲಿ ಇನ್ನೊಂದು ರೀತಿಯ ಅವಾಂತರಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಕಾರಣಕ್ಕೆ ಸಿಎಂ ಮೌನ ವಹಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಕೋವಿಡ್ ದುರಂತದ ಬಳಿಕ ಶಿಕ್ಷಣ ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಕ್ಷೇತ್ರದ ಜನತೆ ಕೈಗೂ ಸಿಗುತ್ತಿಲ್ಲ. ಇದರಿಂದ ಬೇಸತ್ತಿರುವ ರಾಜಾಜಿನಗರ ಕ್ಷೇತ್ರದ ಜನತೆ " Missing MLA S. Suresh kumar" ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸುರೇಶ್ ಕುಮಾರ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಗಳನ್ನು ವಾಟ್ಸಪ್ ಗಳಲ್ಲಿ ರವಾನೆ ಮಾಡುತ್ತಿದ್ದಾರೆ. ಚುನಾವಣೆ ಬಳಿಕ ಸುರೇಶ್ ಕುಮಾರ್ ಜನತೆ ಕೈಗೆ ಸಿಗುತ್ತಿಲ್ಲ. ಕಾಣೆಯಾಗಿರುವ ಇವರನ್ನು ಹುಡುಕಿಕೊಡಿ ಎಂದು ಪೋಸ್ಟ್ ನಲ್ಲಿ ಮನವಿ ಮಾಡಿದ್ದು, ಕ್ಷೇತ್ರದಾದ್ಯಂತ ವೈರಲ್ ಆಗುತ್ತಿವೆ.