ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಇ.ಡಿ ಸಮನ್ಸ್
Recommended Video
ಬೆಂಗಳೂರು, ಅಕ್ಟೋಬರ್ 14: ಮಾಜಿ ಸಚಿವ ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಅಕ್ಟೋಬರ್ 15ರಂದೇ ಇ.ಡಿ. ಮುಂದೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಲಾಗುತ್ತದೆ.ಡಿಕೆ ಶಿವಕುಮಾರ್, ಡಿಕೆ ಸುರೇಶ್, ಐಶ್ವರ್ಯ ಶಿವಕುಮಾರ್ ಗೆ ಸಮನ್ಸ್ ನೀಡಿದ ಬಳಿಕ ಇದೀಗ ಗೌರಮ್ಮಗೆ ನೋಟಿಸ್ ನೀಡಲಾಗಿದೆ.
ಗೌರಮ್ಮ ಹಾಗೂ ಡಿಕೆ ಶಿವಕುಮಾರ್, ಸುರೇಶ್ ಮಧ್ಯೆ ಹಣದ ವ್ಯವಹಾರವೂ ನಡೆದಿದೆ, ಗೌರಮ್ಮ ಅವರ ಬಳಿ 273 ಕೋಟಿ ರೂ ಬೇನಾಮಿ ಆಸ್ತಿ ಪತ್ತೆಯಾಗಿದೆ. ಹಾಗೆಯೇ ಐಶ್ವರ್ಯಗೂ 5 ಎಕರೆ ಜಮೀನು ಗಿಫ್ಟ್ ಡೀಡ್ ಆಗಿ ನೀಡಿದ್ದಾರೆ. ಇದೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಇಡಿ ಸಮನ್ಸ್ ಜಾರಿ ಮಾಡಿದೆ.
ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿಕೆಶಿ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಏಕಸದಸ್ಯ ಪೀಠದಲ್ಲಿ ಸೋಮವಾರ ಅರ್ಜಿಯ ವಿಚಾರಣೆಗೆ ಪ್ರಕರಣ ಲಿಸ್ಟ್ ಆಗಿತ್ತು.
ಅಕ್ಟೋಬರ್ 15ರಂದು ಡಿ.ಕೆ. ಶಿವಕುಮಾರ್ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾಗಲಿದೆ. ನ್ಯಾಯಾಂಗ ಬಂಧನದಲ್ಲಿರುವ ಡಿ. ಕೆ. ಶಿವಕುಮಾರ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ಡಿಕೆ ಶಿವಕುಮಾರ್ಗೆ ಫೆಬ್ರವರಿ 2ರಂದು ಇ.ಡಿ. ಸಮನ್ಸ್ ಜಾರಿಮಾಡಿತ್ತು
ಸಚಿವ ಡಿಕೆ ಶಿವಕುಮಾರ್ಗೆ ಅವರು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು, ದೆಹಲಿಯ ಫ್ಲ್ಯಾಟ್ ಮೇಲೆ ದಾಳಿ ಮಾಡಿದಾಗ 8.59 ಕೋಟಿ ರೂ. ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್ ಜಾರಿಯಾಗಿತ್ತು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಇಡಿ ಕೇಸ್ ದಾಖಲಿಸಿಕೊಂಡಿದ್ದರಿಂದ ಡಿಕೆಶಿ ಬಂಧಿಸಲಾಗಿದೆ. ಶಿವಕುಮಾರ್ ಜೊತೆಗೆ ಸಚಿನ್ ನಾರಾಯಣ್, ಶರ್ಮ ಟ್ರಾವೆಲ್ಸ್ ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಯನ್ನಾಗಿಸಿ ಕೇಸ್ ದಾಖಲಿಸಲಾಗಿತ್ತು.
ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾಗೂ ಸಮನ್ಸ್ ನೀಡಲಾಗಿತ್ತು
ದೆಹಲಿಯ ಫ್ಲ್ಯಾಟ್ ಒಂದರಲ್ಲಿ ಐಟಿ ದಾಳಿ ವೇಳೆ ಅಕ್ರಮ ಹಣ ಸಿಕ್ಕ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧನದಲ್ಲಿಟ್ಟುಕೊಂಡು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಅವರ ಮಗಳಿಗೂ ಸಮನ್ಸ್ ನೀಡಿತ್ತು.
ಇದರಿಂದ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ಸತತ ವಿಚಾರಣೆಗೆ ಒಳಗಾಗಿರುವ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾದಂತಾಗಿತ್ತು.
ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸೋಲ್ ಆಂಡ್ ಸೇಲ್ ಎಂಬ ಕಂಪೆನಿಯಲ್ಲಿ ಐಶ್ವರ್ಯಾ ಹೆಸರಿನಲ್ಲಿ 78 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಈ ಸಂಬಂಧ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಐಶ್ವರ್ಯಾ ಅವರಿಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು.
ಡಿಕೆ ಸುರೇಶ್ಗೆ ಐಟಿ ಸಮನ್ಸ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟ ಮತ್ತಷ್ಟು ತೀವ್ರವಾಗುವ ಸೂಚನೆ ದೊರಕಿದೆ. ತಮ್ಮ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರಿಗೆ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಡಿಕೆ. ಶಿವಕುಮಾರ್ ಅವರ ದೆಹಲಿ ಫ್ಲ್ಯಾಟ್ನಲ್ಲಿ ದೊರೆತ 40 ಲಕ್ಷದಲ್ಲಿ 21 ಲಕ್ಷ ರೂ. ತಮ್ಮದು ಎಂದು ಡಿಕೆ ಸುರೇಶ್ ಅವರು ಹೇಳಿಕೊಂಡಿದ್ದರು. ಜತೆಗೆ ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರಿಗೆ ಸಾಲ ನೀಡಿದ್ದಾಗಿ ಲೋಕಸಭಾ ಚುನಾವಣೆಯ ಅಫಿಡವಿಟ್ನಲ್ಲಿ ತಿಳಿಸಿದ್ದರು. ತಂದೆ ಕೆಂಪೇಗೌಡ ಅವರ ಆಸ್ತಿಯನ್ನು ಡಿಕೆ ಸುರೇಶ್ ಅವರಿಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.
ಎಲ್ಲರ ವಿಚಾರಣೆ ಬಳಿಕ ಗೌರಮ್ಮಗೆ ಸಮನ್ಸ್
ಡಿಕೆ ಶಿವಕುಮಾರ್, ಡಿಕೆ ಸುರೇಶ್, ಐಶ್ವರ್ಯಾ ವಿಚಾರಣೆ ಬಳಿಕ ಇದೀಗ ಗೌರಮ್ಮಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 15ರಂದೇ ಹಾಜರಾಗುವಂತೆ ಸಮನ್ಸ್ನಲ್ಲಿ ತಿಳಿಸಲಾಗಿದೆ. ಗೌರಮ್ಮಗೆ ವಯಸ್ಸಾಗಿರುವುದರಿಂದ ವಿಚಾರಣೆ ಹೇಗೆ ಎನ್ನುವ ಕುರಿತು ವಕೀಲರ ಬಳಿ ಒಮ್ಮೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.