ಐಎಂಎ ಜ್ಯುವೆಲ್ಸ್ ವಂಚನೆ ಕೇಸ್, ಮನ್ಸೂರ್ ಗೆ 'ಇಡಿ' ನೋಟಿಸ್
ಬೆಂಗಳೂರು, ಜೂನ್ 18: ಬಹುಕೋಟಿ ಐ.ಎಂ.ಎ. ಜ್ಯುವೆಲ್ಸ್ ವಂಚನೆ ಪ್ರಕರಣದ ಮುಖ್ಯ ಆರೋಪಿ ಮನ್ಸೂರ್ ಖಾನ್ ಸೇರಿದಂತೆ ಸಂಸ್ಥೆಯ 7 ನಿರ್ದೇಶಕರಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ.
ನಾಸಿರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ ಕರ್, ನಿಜಾಮುದ್ದೀನ್ ಅಜೀಮುದ್ದೀನ್, ಅಫ್ಷಾನ್ ತಬುಸ್ಸುಮ್, ಅಫ್ಸರ್ ಪಾಷಾ ಹಾಗೂ ಅರ್ಷಾದ್ ಖಾನ್ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ. ಈ ನಡುವೆ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್, ಯುಎಇಗೆ ಹಾರಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ದುಬೈಗೆ ಹಾರಿದ ಐಎಂಎ ಜ್ಯುವೆಲ್ಸ್ ವಂಚನೆ ಕೇಸ್ ಆರೋಪಿ ಮನ್ಸೂರ್
ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಐಎಂಎ ಜ್ಯುವೆಲ್ಸ್ ಹಾಗೂ 11 ವಂಚಕ ಸಂಸ್ಥೆಯಿಂದ ಆಗಿರುವ ಆರ್ಥಿಕ ಅಪರಾಧ ಹಾಗೂ ವಂಚನೆ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಹಾಗೂ ರಾಜ್ಯದ ತನಿಖಾ ಸಂಸ್ಥೆಗಳು ಹೊಂದಾಣಿಕೆ ಮೂಲಕ ಮಾಡಬೇಕಾಗುತ್ತದೆ. ಅದರಂತೆ, ಶನಿವಾರದಂದು ಇಡಿ ಅಧಿಕಾರಿಗಳು ಇಸಿಐಆರ್ದಾಖಲಿಸಿದ್ದರು. ಈಗ ಐಎಂಎ ನಿರ್ದೇಶಕರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದು, ಎಲ್ಲಾ ಆರೋಪಿಗಳಿಗೂ ನೋಟಿಸ್ ಜಾರಿಗೊಳಿಸಲಾಗಿದೆ.
ಯಾವ ಯಾವ ಆರೋಪ
ಏನೇನು ಆರೋಪ: ಅಕ್ರಮವಾಗಿ ವಿದೇಶಿ ಹೂಡಿಕೆ, ವಿದೇಶಿ ವಿನಿಮಯ, ವಿದೇಶಿ ವಹಿವಾಟು ಮಾಡಿದ್ದು, ಫೆಮಾ ಹಾಗೂ ಪಿಎಂಎಲ್ಎ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪವನ್ನು ಇ.ಡಿ. ದಾಖಲು ಮಾಡಿಕೊಂಡಿದೆ.
ಪ್ರಕರಣದ ತನಿಖೆಯನ್ನು ಮೊದಲಿಗೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕೈಗೊಂಡಿದ್ದರು. ನಂತರ ವಿಶೇಷ ತನಿಖಾ ದಳಕ್ಕೆ ವಹಿಸಲಾಗಿತ್ತು. ಮನ್ಸೂರ್ ಎಲ್ಲಿದ್ದಾನೆ ಎಂದು ಪತ್ತೆ ಹಚ್ಚಲು ಇಂಟರ್ ಪೋಲ್ ನೆರವನ್ನು ಸಿಐಡಿ ಕೇಳಿದೆ. ಈ ಎಲ್ಲಾ ಸಂಸ್ಥೆಗಳಿಂದ ಹಲವು ಮಾಹಿತಿಗಳನ್ನು ಇ.ಡಿ. ಅಧಿಕಾರಿಗಳು ಸಂಗ್ರಹಿಸಿ, ತನಿಖೆ ಮುಂದುವರೆಸಿದ್ದಾರೆ.
ಏಳು ನಿರ್ದೇಶಕರ ಪಾಸ್ ಪೋರ್ಟ್ ವಶ
ಐಎಂಎ ಹಗರಣಕ್ಕೆ ಸಂಬಂಧಿಸಿದ ಏಳು ನಿರ್ದೇಶಕರ ಪಾಸ್ ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಐಎಂಎ ಸಂಸ್ಥೆಗೆ ಸೇರಿರುವ ಜಾಗ್ವಾರ್ ಹಾಗೂ ರೇಂಜ್ ರೋವರ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಮನ್ಸೂದ್ ಗೆ ಸೇರಿದ್ದು ಎಂದು ತಿಳಿದು ಬಂದಿದೆ. 30 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಪೊಲೀಸರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರತಿದಿನ ದೂರುಗಳು ಹರಿದು ಬರುತ್ತಲೆ ಇವೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಮನ್ಸೂರ್ ಗೆ ಸೇರಿದ ಕಾರು ವಶಕ್ಕೆ
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಐಎಂಐ ಜ್ಯುವೆಲ್ಸ್ ವಿರುದ್ಧ ದೂರು ದಾಖಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ ಐಟಿ) ಕ್ಕೆ ವಹಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಇಲ್ಲಿ ತನಕ ಬಂಧಿಸಲಾಗಿದ್ದು, ಶುಕ್ರವಾರದಿಂದ ವಿಚಾರಣೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಐಎಂಎ ಸಂಸ್ಥೆ ಸಂಸ್ಥಾಪಕ ಮನ್ಸೂರ್ ಖಾನ್ ಅವರಿಗೆ ಸೇರಿಸಿದ್ದ ಕಾರುಗಳು ಸೀಜ್ ಆಗಿದೆ. ಒಟ್ಟು ಐದು ಕಾರುಗಳು ಸೀಜ್ ಆಗಿವೆ ಎನ್ನಲಾಗಿದೆ. ಕಾರನ್ನು ನಾಲ್ಕು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ದಾಖಲೆಗಳು ಹೇಳುತ್ತಿವೆ.
ಮನ್ಸೂರ್ ಖಾನ್ ವಾಟ್ಸಾಪ್ ಆಡಿಯೋ ಪರಿಶೀಲನೆ
ಮನ್ಸೂರ್ ಖಾನ್ ವಾಟ್ಸಾಪ್ ಆಡಿಯೋ ಪರಿಶೀಲನೆ ಮಾಡಲಾಗಿದೆ. ಪ್ರಾಥಮಿಕ ತನಿಖೆ ನಂತರ ಜೂನ್ 08ರಂದು ರಾತ್ರಿ 8.45ಕ್ಕೆ ಕೆಐಎಎಲ್ ನಿಂದ ದುಬೈಗೆ ಹಾರಿರುವುದು ಖಚಿತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ನೀಡಲು ಸಾಧ್ಯವಿಲ್ಲ. ಐಎಂಎ ಖಾತೆಯಿಂದ 19 ಕೋಟಿ ರುಗಳನ್ನು ತನ್ನ ವೈಯಕ್ತಿಕ ಖಾತೆಗೆ ಕಳಿಸಿಕೊಂಡಿದ್ದಾನೆ, ನಂತರ ವಿದೇಶ ಪ್ರಯಾಣಕ್ಕೆ ಯೋಜನೆ ಹಾಕಿಕೊಂಡಿದ್ದ. ಐಎಂಎ ಜ್ಯುವೆಲ್ಸ್ ನ ಚಿನ್ನ ಹಾಗೂ ವಜ್ರಗಳನ್ನು ಕರಗಿಸಿ ನಗದು ರೂಪ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೊಹಮ್ಮದ್ ಮನ್ಸೂರ್ ಖಾನ್ ಆತ್ಮಹತ್ಯೆ ಆಡಿಯೋ
ಕಂಪನಿಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಆಡಿಯೋ ಬಂದಿದೆ. ಎಲ್ಲರಿಗೂ ಹಣ ವಾಪಸ್ ಮಾಡುವ ಭರವಸೆ ಸಿಕ್ಕಿದೆ, ಆದರೆ, ಆಡಿಯೋ ಸತ್ಯಾಸತ್ಯತೆ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಹೂಡಿಕೆ ಮಾಡಲಾಗಿರುವ ಎಲ್ಲ ಹಣವನ್ನು ನಾನು ಆಭರಣ, ವಜ್ರ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದೇನೆ, ನನ್ನ ಆಸ್ತಿಯನ್ನು ಮಾರಿಯಾದರೂ ಹೂಡಿಕೆದಾರರಿಗೆ ಹಣ ಹಿಂತಿರುಗಿಸುವುದಾಗಿ ಖಾನ್ ಹೇಳಿಕೊಂಡಿದ್ದಾರೆ.