ಇಡಿ ದಾಳಿ: ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಬೇಡವಾದ ಜಮೀರ್ ಅಹ್ಮದ್?
ಕೆಲವೊಂದು ಘಟನೆಗಳು ಮನುಷ್ಯ/ರಾಜಕೀಯ ಸಂಬಂಧವನ್ನು ಹೇಗೆ ಹಾಳು ಮಾಡುತ್ತವೆ ಎನ್ನುವುದಕ್ಕೆ ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಕಚೇರಿ/ನಿವಾಸದ ಮೇಲೆ ನಡೆಸಿದ ದಾಳಿ ಉದಾಹರಣೆಯಾಗಬಲ್ಲದು.
ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದೆನಿಸಿದರು, ಎಲ್ಲವೂ ಹಿಂದಿನಿಂತೆ ಇಲ್ಲ ಎನ್ನುವುದನ್ನು ಅರಿಯಲು ಜಮೀರ್ ಅವರು ರಾಜಕೀಯದಲ್ಲಿ ಪಿಎಚ್ಡಿ ಮಾಡುವ ಅವಶ್ಯಕತೆಯಿಲ್ಲ. ಸಮುದಾಯದ ಮಹಾನ್ ನಾಯಕನಾಗಬೇಕು ಎನ್ನುವ ಅವರ ಮಹತ್ವಾಕಾಂಕ್ಷೆಗೆ ಇಡಿ ದಾಳಿ ತಣ್ಣೀರು ಎರಚುತ್ತಾ ಎನ್ನುವುದಿಲ್ಲಿ ಪ್ರಶ್ನೆ.
ಇಡಿ ದಾಳಿಯಿಂದ ಕೈ ಪಾಳಯದ ಬಣ ರಾಜಕೀಯಕ್ಕೆ ಹೊಸ ತಿರುವು
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಅವರು ಅತ್ಯಂತ ಸ್ಪಷ್ಟವಾಗಿ ತಮ್ಮನ್ನು ಗುರುತಿಸಿಕೊಂಡಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆಯೇ ಹೊರತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗಲ್ಲ.
ಜಮೀರ್ ಮನೆ ಮೇಲೆ ಇಡಿ ದಾಳಿ ಹಿಂದಿನ ರೂವಾರಿ ಯಾರು? ಬಿಜೆಪಿ ಸ್ಪೋಟಕ ಹೇಳಿಕೆ
ಜಮೀರ್ ಅಹ್ಮದ್ ಅವರ ಮೇಲೆ ಇಡಿ ದಾಳಿಯ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಆಗಲಿ, ಅಥವಾ ರಾಜ್ಯ ಮುಖಂಡರಾಗಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಿಲ್ಲ. ಕೆಲವು ಟ್ವೀಟುಗಳು/ಹೇಳಿಕೆಗಳನ್ನು ನೀಡಿ ಸುಮ್ಮನಾದರು. ಮುಂದೆ ಓದಿ...
ಜಮೀರ್ ಅಹ್ಮದ್ ನಮ್ಮ ಪಕ್ಷದ ಲೀಡರ್, ಇಡಿ ದಾಳಿಗೂ ನನಗೂ ಸಂಬಂಧವಿಲ್ಲ
"ಜಮೀರ್ ಅಹ್ಮದ್ ನಮ್ಮ ಪಕ್ಷದ ಲೀಡರ್, ಅವರಿಗೆ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಕಾನೂನು ವಿಚಾರದ ಬಗ್ಗೆ ಹೇಳಿದ್ದೇನೆ, ಅವರ ಮೇಲಿನ ಇಡಿ ದಾಳಿಗೂ ನನಗೂ ಸಂಬಂಧವಿಲ್ಲ. ನನಗಾದಂತ ಅನುಭವ ಹಂಚಿಕೊಂಡಿದ್ದೇನೆ. ಇಡಿ ದಾಳಿ ಬಗ್ಗೆ ನನಗೆ ಅನುಭವ ಇದೆ, ಅದರ ಆಧಾರದ ಮೇಲೆ ನಾನು ಮಾತನಾಡಿದ್ದೇನೆ" ಎಂದು ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಜಮೀರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರೆಯೇ ವಿನಃ, ಪಕ್ಷದ ವತಿಯಿಂದ ಯಾವುದೇ ಪ್ರತಿಭಟನೆ ವ್ಯಕ್ತವಾಗಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.
ಸಿದ್ದರಾಮಯ್ಯನವರ ಮೇಲೆ ಸ್ವಾಮಿನಿಷ್ಠೆಯ ಪರಾಕಾಷ್ಠೆ ತೋರಿದ್ದ ಜಮೀರ್
ಸಿದ್ದರಾಮಯ್ಯ ಭಾವೀ ಸಿಎಂ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದವರೇ ಮೊದಲಿಗೆ ಜಮೀರ್. ಸ್ವಾಮಿನಿಷ್ಠೆಯ ಪರಾಕಾಷ್ಠೆ ತೋರಿದ್ದ ಜಮೀರ್ ಅವರು ಒಂದು ಹಂತದಲ್ಲಿ ಸಿದ್ದರಾಮಯ್ಯನವರಿಗಾಗಿ ಕ್ಷೇತ್ರವನ್ನೇ ಬಿಟ್ಟು ಕೊಡಲು ಸಿದ್ದರಿದ್ದರು. ಸುಮ್ಮನೆ ನಾಮಿನೇಶನ್ ಫೈಲ್ ಮಾಡಿ ಹೋಗಲಿ, ಐವತ್ತು ಸಾವಿರ ಲೀಡ್ ನಿಂದ ಅವರು ಗೆದ್ದು ಬರುವಂತೆ ಮಾಡುತ್ತೇನೆ ಎಂದು ಜಮೀರ್ ಹೇಳಿದ್ದರು. ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿದ್ದಾಗ ಪ್ರತೀದಿನ ಜಮೀರ್ ಭೇಟಿಯಾಗುತ್ತಿದ್ದರು.
ಮನೆಯ ವಿಚಾರವಾಗಿದ್ದರೆ ಐಟಿ ದಾಳಿ ನಡೆಯಬೇಕಿತ್ತಲ್ವಾ, ಇಡಿಯವರು ಯಾಕೆ ಬಂದ್ರು?
ಆದರೆ, ಇಡಿ ದಾಳಿಯ ನಂತರ ಅಂದರೆ ಕಳೆದ ಐದಾರು ದಿನಗಳಲ್ಲಿ ಜಮೀರ್ ಒಂದು ಬಾರಿಯೂ ಸಿದ್ದರಾಮಯ್ಯನವರನ್ನು ಭೇಟಿಯಾಗಿಲ್ಲ ಎನ್ನುವುದಕ್ಕಿಂತ ಸಿದ್ದರಾಮಯ್ಯ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಮನೆಯ ವಿಚಾರವಾಗಿದ್ದರೆ ಐಟಿ ದಾಳಿ ನಡೆಯಬೇಕಿತ್ತಲ್ವಾ, ಇಡಿಯವರು ಯಾಕೆ ದಾಳಿ ಮಾಡಿದ್ದಾರೆ ಎನ್ನುವ ಪ್ರಶ್ನೆಯನ್ನು ಸಿದ್ದರಾಮಯ್ಯನವರು, ಜಮೀರ್ ಬಳಿ ಕೇಳಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ.
Recommended Video
ರಾಜ್ಯದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರಿಗೆ ಜಮೀರ್ ಬೇಡವಾದರೂ ಆಶ್ಚರ್ಯವಿಲ್ಲ
ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎನ್ನುವ ಮೂಲಕ ಜಮೀರ್ ಅವರು ಕಾಂಗ್ರೆಸ್ಸಿನಲ್ಲಿ ಹಲವರ ವಿರೋಧವನ್ನು ಕಟ್ಟಿಕೊಂಡರು. ಒಂದು ಹಂತದಲ್ಲಿ ಉಸ್ತುವಾರಿಯಿಂದಲೂ ಎಚ್ಚರಿಕೆ ಬಂದಿತ್ತು. ಹೀಗಾಗಿ, ಡಿಕೆಶಿಯವರು ಇವರನ್ನು ದೂರವೇ ಇಟ್ಟಿದ್ದರು. ಈಗ, ಸಿದ್ದರಾಮಯ್ಯನವರೂ ಅವರಿಂದ ದೂರವಾಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರಿಗೆ ಜಮೀರ್ ಬೇಡವಾದರೂ ಆಶ್ಚರ್ಯವಿಲ್ಲ.