ಬೆಂಗಳೂರು: ಬ್ಯಾಂಕ್ ಸಾಲ ಪಡೆದು ವಂಚಿಸಿದ ಕಂಪನಿಯ 40ಕೋಟಿ ರೂ. ಆಸ್ತಿ ಇಡಿ ವಶ
ಬೆಂಗಳೂರು ಆಗಸ್ಟ್ 04: ಬ್ಯಾಂಕ್ ವಂಚನೆ ಪ್ರಕರಣ ಹಾಗೂ ಮನಿ ಲಾಂಡರಿಂಗ್ ತನಿಖೆ ಸಂಬಂಧ ಬೆಂಗಳೂರು ಮೂಲದ ಕಂಪನಿಯೊಂದರ ಒಟ್ಟು ಸುಮಾರು 40.14 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.
ಬ್ಯಾಂಕ್ ನಿಂದ ಸುಮಾರು 45ಕೋಟಿ ರು. ಸಾಲ ಪಡೆದು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕಾವೇರಿ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಲಿ.ನ ಸುಮಾರು 40.14ಕೋಟಿ ರು. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಇಡಿ ದಾಳಿ ನಡೆಸ ವಶಕ್ಕೆ ಪಡೆದ ಆಸ್ತಿಗಳಲ್ಲಿ ವಸತಿ ಸಮುಚ್ಚಯಗಳು, ಪ್ಲಾಟ್ಗಳು, ಕೃಷಿ ಭೂಮಿಗಳು ಮತ್ತು ಬ್ಯಾಂಕ್ ಠೇವಣಿಗಳನ್ನು ಒಳಗೊಂಡಿವೆ. ಸಾಲ ಪಡೆದು ಮರುಪಾವತಿಸದೇ ಕೋಟ್ಯಂತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೇನಾ ಬ್ಯಾಂಕ್ ಈ ಕಾವೇರಿ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಲಿ. ವಿರುದ್ಧ 2015 ರಲ್ಲೇ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಬಿಐನಲ್ಲಿ ಎಫ್ಐಆರ್ ದಾಖಲಿಸಿತ್ತು.
ಈ ಟೆಲಿಕಾಂ ಕಂಪನಿ ಹಾಗೂ ಅದರ ನಿರ್ದೇಶಕರು ಉಪಕರಣಗಳ ಖರೀದಿಯ ಹೆಸರಿನಲ್ಲಿ ದೇನಾ ಬ್ಯಾಂಕ್ನಿಂದ ಪಡೆದ 45 ಕೋಟಿ ರೂ.ಸಾಲದ ಹಣವನ್ನು ಸಹೋದರ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿತ್ತು. ಈ ಸಂಸ್ಥೆಗಳಲ್ಲಿ ಕಾವೇರಿ ಟೆಲಿಕಾಂ ಕಂಪನಿಯ ನಿರ್ದೇಶಕರೆ ಪಾಲುದಾರರು ಎಂಬುದು ಗೊತ್ತಾಗಿದೆ.
ಸಾಲದ ಹಣ ದುರ್ಬಳಕೆ
ಸಾಲ ಹಣದಲ್ಲಿ ಸುಮಾರು ಅರ್ಧದಷ್ಟು ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಲಾಗಿದ್ದು, ಉಳಿದ ಹಣವನ್ನು ನಿರ್ದೇಶಕರು ಕುಟುಂಬಸ್ಥರ ಹೆಸರಿನಲ್ಲಿ ಸ್ಥಿರಾಸ್ತಿ ಮಾಡಿಕೊಂಡಿದ್ದಾರೆ. ಅಲ್ಲದೇ ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿರುವುದು, ಬ್ಯಾಂಕ್ ಸಾಲದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದ ಇಡಿ ತನಿಖೆಯಿಂದ ತಿಳಿದು ಬಂದಿದೆ.
ದೇನಾ ಬ್ಯಾಂಕ್ನ ದೂರಿನ ಮೇರೆಗೆ ತನಿಖೆ ಕೈಗೊಂಡು ಬಳಿಕ ದೊರೆತ ಸಾಕ್ಷ್ಯಗಳ ಆಧಾರದಲ್ಲಿ ಕಾವೇರಿ ಟೆಲಿಕಾಂ ಕಂಪನಿ ಮತ್ತದರ ನಿರ್ದೇಶಕರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1998 ಸೆಕ್ಷನ್ 13(2) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ ಅಡಿ ಪ್ರಕರಣ ದಾಖಲಾಗಿದೆ.