ಬಸವನಗುಡಿ: ಪರಿಸರ ಸ್ನೇಹಿ ಕಡ್ಲೇಕಾಯಿ ಪರಿಷೆಗೆ ಸಜ್ಜು
ಬೆಂಗಳೂರು, ನವೆಂಬರ್ 10: ಚಳಿಗಾಲ ಶುರುವಾಗುತ್ತಿದ್ದಂತೆಯೇ ಬಸವನಗುಡಿಯ ಬೀದಿ ಕಡಲೆಕಾಯಿ ಪರಿಷೆಗಾಗಿ ಸಜ್ಜುಗೊಳ್ಳುತ್ತದೆ. ಈಗ ಮತ್ತೊಂದು ಚಳಿಗಾಲ ಬಂದಿದೆ. ಬಸವನಗುಡಿಯ ಪ್ರತಿ ತಿರುವುಗಳು ಪರಿಷೆಯ ಸೊಗಸನ್ನರಿಸಿ ಬರುವವರಿಗಾಗಿ ಎದುರು ನೋಡುತ್ತಿವೆ.
ಮತ್ತೆ ಬಂತು ಕಡೆಲೆಕಾಯಿ ಪರಿಷೆ, ಬನ್ನಿ ಬಸವನಗುಡಿಗೆ
ಕಡಲೆಕಾಯಿ ಪರಿಷೆ ಎಂದಾಕ್ಷಣ ನನಗೆ ಬಾಲ್ಯದ ನೆನಪಾಗುತ್ತದೆ. ಕತ್ತೆತ್ತಿ ನೋಡಿದರೂ ಕೊಂಬು ಕಾಣದ ಬಸವಣ್ಣ. ಬಸವಣ್ಣ ಮಿತಿ ಮೀರಿ ಬೆಳೆಯುತ್ತಾನೆಂದು ಅವನ ತಲೆಗೆ ಮಳೆ ಹೊಡೆದಿದ್ದರಂತೆ. ಅದೇನಾದರೂ ಕಾಣುತ್ತದೋ ಎಂದು ಮೆಟ್ಟಿಂಗಾಲು ಇಟ್ಟು ನೋಡಿದರೂ ನನಗೆ ಮುಖ ಸಹ ಪೂರ್ತಿ ಕಾಣುತ್ತಿರಲಿಲ್ಲ.
ಬಡವರ ಬಾದಾಮಿ ಹಬ್ಬಕ್ಕೆ, ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ
ಹಲವು ರೀತಿಯ ಕಡಲೆಕಾಯಿಗಳ ರಾಶಿಗಳು, ಜಗಮಗಿಸುವ ದೀಪಾಲಂಕಾರ, ಎಲ್ಲಿ ಕಳೆದುಹೋಗುವೆವೋ ಎಂಬ ಭಯ ಹುಟ್ಟಿಸುತ್ತಿದ್ದ ಜನಸಂದಣಿ. ಇವುಗಳ ನಡುವೆ ಅಮ್ಮನ ಬೆಚ್ಚನೆ ಕೈಹಿಡಿದು ಪೀಪಿಯನ್ನೋ ಬತ್ತಾಸನ್ನೋ ಕೊಡಿಸಲು ದುಂಬಲು ಬೀಳುತ್ತಿದ್ದ ಚಿತ್ರ ಕಣ್ಣಮುಂದೆ ಬರುತ್ತದೆ.
ಬಸವನಗುಡಿ ಕಡ್ಲೇಕಾಯಿ ಪರಿಷೆ, ಹಳ್ಳಿಯ ಚಿತ್ರ, ಹರೆಯದ ಸಂತಸ
ಇಂದೂ ಈ ಚಿತ್ರ ಅಷ್ಟೇನೂ ಬದಲಾಗಿಲ್ಲ - ನನ್ನ ಮಟ್ಟಿಗೆ, ಹೆದರಿಕೆಯ ಭಾಗವೊಂದನ್ನು ಬಿಟ್ಟು ! ಬತ್ತಾಸು, ಕಲ್ಯಾಣಸೇವೆ ಈಗಲೂ ನನಗೆ ಪ್ರಿಯವೇ ! ಅದರ ರುಚಿಯ ಜೊತೆಗೆ ನನಗೆ ಅದನ್ನು ತಯಾರಿಸುವ ಹಳ್ಳಿಜನರ ಭಾವನೆಗಳೂ ಅಷ್ಟೇ ಸಿಹಿಯನ್ನೂ ನೀಡುತ್ತವೆ.
ಪರಿಷೆಯ ಹಿಂದೆಯೂ ಐತಿಹಾಸಿಕ ಕತೆಯಿದೆ
ರೈತರು ಕೃಷಿ ಮಾಡುತ್ತಿದ್ದ ಪ್ರದೇಶವಾಗಿತ್ತು. ಇಲ್ಲಿ ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಹೀಗಿರುವಾಗ ಸಮೃದ್ಧವಾಗಿ ಬೆಳೆದಿದ್ದ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಕಾದು ಕುಳಿತು ನೋಡಲಾಗಿ ಬೃಹತ್ ಗಾತ್ರದಲ್ಲಿದ್ದ ಬಸವ ತೇಜೋಮಯವಾಗಿ ಕಂಗೊಳಿಸುತ್ತಿತ್ತು.
ಜನರಿಗೆ ಅದನ್ನು ನೋಡುತ್ತಿದ್ದಂತೆ, ಇದು ಸಾಮಾನ್ಯವಾದ ಎತ್ತಲ್ಲ, ಇದು ಶಕ್ತಿಯುತವಾದ ನಂದಿಯ ಪ್ರತಿರೂಪವೆಂಬ ಭಾವನೆ ಮೂಡಿತು.
ಕೂಡಲೇ ಎಲ್ಲ ರೈತರು, ದಯಮಾಡಿ ತಮ್ಮ ಬೆಳೆಯನ್ನು ಹಾಳು ಮಾಡಬೇಡ, ಇದೇ ಸ್ಥಳದಲ್ಲಿ ನಿನಗೊಂದು ಗುಡಿ ಕಟ್ಟಿ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ ಎಂದು ಬೇಡುತ್ತಾರೆ
ಕಾರ್ತಿಕಮಾಸದ ಕೊನೆಯ ಸೋಮವಾರ
ಕಡಲೆಕಾಯಿ ಬೆಳೆ ಸಮೃದ್ಧವಾಗಿ ಬೆಳೆದು ಅದರ ಕೃಷಿ ಚಟುವಟಿಕೆ ಮುಗಿದ ನಂತರ ಕಾರ್ತಿಕಮಾಸದ ಕೊನೆಯ ಸೋಮವಾರ ನಿನ್ನ ಹೆಸರಿನಲ್ಲಿ ಕಡಲೆಕಾಯಿ ಪರಿಷೆ ನಡೆಸುತ್ತೇವೆ ಎಂದು ಬಸವಣ್ಣನಿಗೆ ಮೊರೆಯಿಡುತ್ತಾರೆ.
ರೈತಭಕ್ತರ ಈ ಮೊರೆಯನ್ನು ಆಲಿಸಿದ ಬಸವಣ್ಣ ಅಂದಿನಿಂದ ರೈತರ ಬೆಳೆಯನ್ನು ನಾಶಗೊಳಿಸದೆ ಕಾಪಾಡುತ್ತಾನೆ. ಅಂದಿನಿಂದ ರೈತರು ತಾವು ಬೆಳೆದ ಕಡಲೆಕಾಯಿಯನ್ನು ತೆಗೆದುಕೊಂಡು ಬಂದು ಪ್ರತಿವರ್ಷ ಜಾತ್ರೆಯನ್ನು ನಡೆಸುತ್ತಿದ್ದಾರೆ.
ಇಕೋ ಫ್ರೆಂಡ್ಲಿ ಪರಿಷೆ
ಬೆಂಗಳೂರು ನಗರವೊಂದರಲ್ಲೇ ಪ್ರತಿನಿತ್ಯ 4000ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ತ್ಯಾಜ್ಯ ವಿಲೇವಾರಿಗೆಂದೇ ಬಿಬಿಎಂಪಿ ವಾರ್ಷಿಕ 450 ಕೋಟಿ ರೂಗಳನ್ನು ವ್ಯಯ ಮಾಡುತ್ತಿದೆ. ದೈನಂದಿನ ದಿನಗಳಲ್ಲೇ ತ್ಯಾಜ್ಯ ಉತ್ಪಾದನೆಯ ಪ್ರಮಾಣ ಈ ಮಟ್ಟಿಗಿದ್ದರೆ ಜಾತ್ರೆ, ಹಬ್ಬಗಳ ಸಂದರ್ಭದಲ್ಲಿ ಹೇಗಿರಬಹುದು?
ಬಸವನಗುಡಿಯ ಪರಿಸರ ಮಾಲಿನ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ.
ಕ್ರಿಯಾಯೋಜನೆಯ ಪ್ರಕಾರ ಈ ಬಾರಿ ಪರಿಷೆಗೆ ಬರುವವರು ಕಡಲೆಕಾಯಿಯನ್ನು ಕಾಗದದ ಚೀಲದಲ್ಲಿ ಕೊಂಡೊಯ್ಯಲು ಅನುವಾಗುವಂತೆ ಏರ್ಪಾಟುಗಳನ್ನು ಮಾಡಿದೆ. ಪರಿಸರ ಸ್ನೇಹಿ ಯೋಜನೆಗೆ ಬಿಎಂಎಸ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಕೈಜೋಡಿಸಿರುವುದು ವಿಶೇಷ. ಕಡಲೆಕಾಯಿ ಪರಿಷೆಯಲ್ಲಿ ಮಳಿಗೆಗಳನ್ನು ಹಾಕಿಕೊಂಡಿರುವ ವ್ಯಾಪಾರಸ್ಥರಲ್ಲೂ ಅರಿವು ಮೂಡಿಸುವ, ನಿಗಾ ವಹಿಸುವ ಯತ್ನ ನಡೆದಿದೆ
ಬಿ.ಎಂ.ಎಸ್.ಕಾಲೇಜಿನ ವಿದ್ಯಾರ್ಥಿಗಳ ನೆರವು
ಆನೇಕಲ್, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಿಂತಾಮಣಿ, ಶ್ರೀನಿವಾಸಪುರ,ಸೇಲಂ, ಆಂಧ್ರದಿಂದಲೂ ವರ್ತಕರು ಬರುತ್ತಾರೆ ಎಲ್ಲರಿಗೂ ಗುರುತಿನ ಚೀಟಿ ನೀಡಲಾಗಿದೆ, ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪೇಪರ್ ಬ್ಯಾಗ್ಗಳನ್ನು ನೀಡಲಾಗಿದೆ. ಪೇಪರ್ ಬ್ಯಾಗ್ ವಿತರಣಾ ಕಾರ್ಯದ ಹೊಣೆಯನ್ನು ಬಿ.ಎಂ.ಎಸ್.ಕಾಲೇಜಿನ ವಿದ್ಯಾರ್ಥಿಗಳು ಕೈಗೆತ್ತಿಕೊಂಡಿದ್ದಾರೆ.
ಈ ಬಾರಿ ಸುಮಾರು 1.75 ಲಕ್ಷ ಪರಿಸರ ಸ್ನೇಹಿ ಬ್ಯಾಗ್ಗಳನ್ನು ವಿತರಿಸುವ ನಿರೀಕ್ಷೆಯಿದೆ. ಪರಿಸರ ಸ್ನೇಹಿ ಬ್ಯಾಗ್ಗಳು ಒಂದು, ಮೂರು ಹಾಗೂ ಐದು ಲೀಟರ್ ಸಾಮರ್ಥ್ಯದಲ್ಲಿ ದೊರೆಯಲಿದೆ.