ಭಾರತದಲ್ಲಿ ರಾಮಯುಗ ಮತ್ತೆ ಆರಂಭ: ರಾಜಗುರು ದ್ವಾರಕನಾಥ್
ಬೆಂಗಳೂರು, ನವೆಂಬರ್ 11: ಉತ್ತರಪ್ರದೇಶದ ಅಯೋಧ್ಯೆ ರಾಮ ಜನ್ಮಭೂಮಿ ಭೂ ಹಂಚಿಕೆ ವಿವಾದ ಬಗೆಹರಿದಿದೆ. ವಿವಾದಿತ ಸ್ಥಳ ರಾಮ ಲಲ್ಲಾಗೆ ಸೇರಲಿದ್ದು, ಮಸೀದಿಗೆ ಪ್ರತ್ಯೇಕ ಸ್ಥಳ ಮಂಜೂರಾಗಲಿದೆ. ಅಯೋಧ್ಯೆಯ ವಿವಾದ ಕುರಿತಂತೆ ಕರ್ನಾಟಕದಲ್ಲಿ 'ರಾಜಗುರು' ಎಂದೇ ಕರೆಯಲ್ಪಡುವ ದ್ವಾರಕನಾಥ್ ಅವರು ಈ ಹಿಂದೆ ನೀಡಿದ್ದ ಭವಿಷ್ಯವಾಣಿ ಈಗ ನಿಜವಾಗಿದೆ.
ಯಾರೀತ ಡಿಕೆ ಶಿವಕುಮಾರ್ ಆಪ್ತ ದ್ವಾರಕನಾಥ್ ಗುರೂಜಿ?
ಕಳೆದ ವರ್ಷ ಯುಗಾದಿ ಸಂದರ್ಭದಲ್ಲಿ ದ್ವಾರಕನಾಥ್ ಅವರು, ಅಯೋಧ್ಯೆ ಭೂಮಿ ರಾಮಲಲ್ಲಾಗೆ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈಗ ಅದರಂತೆ ಅರ್ಜಿದಾರರ ಪೈಕಿ ಮೂಲ ವಾರಸುದಾರ ಬಾಲ ರಾಮನಿಗೆ ಜನ್ಮಸ್ಥಳ ಸಿಕ್ಕಿದೆ. ಈ ಕುರಿತಂತೆ ಖಾಸಗಿ ಸುದ್ದಿ ವಾಹಿನಿ ಜೊತೆಗೆ ಮಾತನಾಡಿದ ದ್ವಾರಕನಾಥ್, ಅಯೋಧ್ಯೆ ತೀರ್ಪಿನೊಂದಿಗೆ ಭಾರತದಲ್ಲಿ ರಾಮಯುಗ ಮತ್ತೆ ಆರಂಭವಾಗಿದೆ, ಯುಗಾದಿ ಸಂದರ್ಭದಲ್ಲಿ ತಾವು ನುಡಿದ ಭವಿಷ್ಯ ನಿಜವಾಗಿದೆ ಎಂದರು.
ಶನಿವಾರದಂದು ತುಳಸಿ ಹಬ್ಬ ಆಚರಣೆ ಶುಭ ಸಂದರ್ಭದಲ್ಲಿ ತೀರ್ಪು ಬಂದಿದೆ. ರಂಜನ್ ಗೊಗೊಯ್ ನೇತೃತ್ವದ ನ್ಯಾಯಮೂರ್ತಿಗಳ ಪೀಠವು ತಮ್ಮ ತೀರ್ಪಿನಲ್ಲಿ ಪುರಾಣ, ಇತಿಹಾಸ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ರಾಮನೇ ನುಡಿಸಿದ ರಾಮವಾಕ್ಯವೇ ಈ ತೀರ್ಪು ಎನ್ನಬಹುದು. ಜನವರಿ 14ರ ನಂತರ ಉತ್ತರಾಯಣ ಆರಂಭವಾಗುತ್ತೆ. ಉತ್ತರಾಯಣ ಪುಣ್ಯ ಕಾಲದಲ್ಲೇ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಬಹುದು ಎಂದು ಹೇಳಿದರು.