ಉಚಿತ ಹಾಲು ವಿತರಣೆ ವೇಳೆ ಮಾರಾಮಾರಿ: ಆಟೋ ಡ್ರೈವರ್ಗೆ ಚಾಕು ಇರಿತ
ಬೆಂಗಳೂರು, ಮೇ 1: ನಗರದ ಶೇಷಾದ್ರಿಪುರಂನಲ್ಲಿ ಉಚಿತ ಹಾಲು ವಿತರಣೆ ವೇಳೆ ನಡೆದ ಮಾರಾಮಾರಿಯಲ್ಲಿ ಆಟೋ ಚಾಲಕರೊಬ್ಬರು ಚಾಕು ಇರಿತಕ್ಕೊಳಗಾಗಿದ್ದಾರೆ.
ನಾಗರಾಜ್ ಎಂಬುವವರು ಬಿಬಿಎಂಪಿಯ ಉಚಿತ ಹಾಲು ವಿತರಣೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಅವರಿಗೆ ಪರಿಚಯವಿದ್ದ ಕುಟುಂಬದವರಿಗೆ ಮಾತ್ರ ಹಾಲು ನೀಡುತ್ತಿದ್ದರು. ಕೇವಲ ವಿವಿಗಿರಿ ಕಾಲೊನಿಯ ಜನರಿಗೆ ಮಾತ್ರ ಹಾಲು ನೀಡಲಾಗುತ್ತಿತ್ತು. ಅದನ್ನು ಆಟೋ ಚಾಲಕ ವಿನೋದ್ ಕುಮಾರ್ ಪ್ರಶ್ನಿಸಿದ್ದರು. ಇದರಿಂದ ಮಾತು ಜಗಳಕ್ಕೆ ತಿರುಗಿತ್ತು.
'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ
ಬುಧವಾರವೂ ಜಗಳ ಮುಂದುವರೆದಿತ್ತು. ಕುಮಾರ್ ಕುಟುಂಬದವರು ಈ ವಿಚಾರವಾಗಿ ನಾಗರಾಜ್ ಅವರನ್ನು ಮತ್ತೆ ಪ್ರಶ್ನಿಸಿದ್ದರು. ಕುಮಾರ್ ಅವರ ಬೆಂಬಲಿಗರು ಹಾಗೂ ನಾಗರಾಜ್ ಬೆಂಬಲಿಗರ ಮಧ್ಯೆ ಕಲಹ ಆರಂಭವಾಗಿ ನಾಗರಾಜ್ ಬೆಂಬಲಿಗರು ವಿನೋದ್ ಕುಮಾರ್ ಅವರ ಹೊಟ್ಟೆಗೆ ಚಾಕುವಿನಿಂದ ತಿವಿದಿದ್ದಾರೆ. ಇಬ್ಬರು ಮಹಿಳೆಯರು ಸೇರಿ ಒಟ್ಟು ಹತ್ತು ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬಿಬಿಎಂಪಿಯಿಂದ ನೀಡಲಾಗುವ ಉಚಿತ ಹಾಲು ವಿತರಣೆ ಗ್ಯಾಂಗ್ವಾರ್ ಆಗಿ ಮಾರ್ಪಾಟಾದ ಘಟನೆ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ನಡೆದಿತ್ತು.
ಹರೀಶ್, ರಾಜಣ್ಣ, ಗಿರಿನರಸಿಂಹಯ್ಯ ಹಾಗೂ ವೆಂಕಟೇಶಪ್ಪ ಅವರು ಬಿಬಿಎಂಪಿ ಅಧಿಕಾರಿಗಳು ನೀಡಿದ್ದ ಹಾಲನ್ನು ಉಚಿತವಾಗಿ ಜನರಿಗೆ ವಿತರಣೆ ಮಾಡುತ್ತಿದ್ದರು. ಗೃಹಿಣಿ ಅಂಜಲಿ ಸರತಿಯಲ್ಲಿ ನಿಂತಿದ್ದರು,
ಆ ಸಂದರ್ಭದಲ್ಲಿ ವಿತರಕರು ತಮಗೆ ಬೇಕಾದ ಜನರಿಗೆ ಅರ್ಧ ಲೀಟರ್ಗಿಂತಲೂ ಹೆಚ್ಚು ಹಾಲು ವಿತರಣೆ ಮಾಡುವುದನ್ನು ನೋಡಿ ಅದನ್ನು ವಿರೋಧಿಸಿದರು.ಇದರಿಂದ ಕೋಪಗೊಂಡ ಹರೀಶ್ ಮತ್ತೆ ರಾಜಣ್ಣ ಅಂಜಲಿಯವರನ್ನು ನಿಂದಿಸಿ ಅವರನ್ನು ಆ ಜಾಗದಿಂದ ಹೊರಡುವಂತೆ ಹೇಳಿದರು ಬಳಿಕ ಗಲಾಟೆ ಆರಂಭವಾಗಿತ್ತು.