ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಸೆರೆ
ಬೆಂಗಳೂರು, ಜು.24: ಕಳ್ಳತನಕ್ಕಾಗಿ ಯಾವ ಯಾವ ವೇಷ ತೊಡ್ತಾರೋ, ಅದೇನೇನು ಕತೆ ಹೇಳ್ತಾರೋ ಅದು ಕಳ್ಳರಿಗೆ ಮಾತ್ರ ಗೊತ್ತಾಗುತ್ತೆ. ಉಳಿದವರಿಗೆ ಆ ಕಟ್ಟು ಕತೆಯೇ ಸತ್ಯ ಎನಿಸುತ್ತೆ.
ಹೀಗೆ ಪಾರಿವಾಳವನ್ನು ಹಿಡಿಯುತ್ತೇವೆ ಎಂದು ಬಂದು ಲಕ್ಷಾಂತರ ರೂ ದೋಚುತ್ತಿದ್ದ ಕಳ್ಳರನ್ನು ಕುಮಾರಸ್ವಾಮಿ ಪೊಲೀಸ್ರು ಮಂಗಳವಾರ ಬಂಧಿಸಿದ್ದಾರೆ. ರಾಹುಲ್ ನಾಯ್ಕ, ಅನಿಲ್ ಕುಮಾರ್ ಹಾಗೂ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕರೇ ಎಚ್ಚರ, ಕಳ್ಳರು ಹೀಗೂ ಬರಬಹುದು
ಬಂಧಿತರಿಂದ 8 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ ನಗರ ಐದಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರು ಮೊದಲು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು ನಂತರ ಹಾರಲು ಬರದ ಪಾರಿವಾಳಗಳನ್ನು ಮನೆಯ ಮೇಲೆ ಬಿಟ್ಟು ಅದನ್ನು ಹಿಡಿಯುವ ನೆಪದಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದರು. ಕಳ್ಳತನದ ವೇಳೆ ಯಾರಾದರೂ ಅನುಮಾನಿಸಿ ಪ್ರಶ್ನಿಸಿದರೆ ಪಾರಿವಾಳ ಟೆರೆಸ್ ಮೇಲೆ ಬಂದಿದೆ ಹಿಡಿದುಕೊಳ್ಳೋಕೆ ಬಂದಿದ್ದೇವೆ ಎಂದು ಹೇಳಿ ಎಸ್ಕೇಪ್ ಆಗುತ್ತಿದ್ದರು.
ತನಿಖೆ ವೇಳೆ ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಓರ್ವ ಬಾಲಕ ಅನುಮಾನಸ್ಪದವಾಗಿ ಪಾರಿವಾಳ ಹಿಡಿದು ಓಡಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಸಿಸಿ ಟಿವಿಯ ಜಾಡನ್ನು ಹಿಡಿದು ಬೆನ್ನತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಓರ್ವ ಬಾಲಕ ಸಿಕ್ಕಿದ್ದಾನೆ. ನಂತರ ಉಳಿದವರನ್ನು ಸೆರೆ ಹಿಡಿದಿದ್ದಾರೆ.