ಕ್ರೈಸ್ಟ್ ವಿದ್ಯಾರ್ಥಿಗಳಿಂದ ಕುಡಿದು ಚೆಲ್ಲಾಟ, ಪ್ರಾಣಾಪಾಯದಿಂದ ಮಿಸ್
ಬೆಂಗಳೂರು, ಆಗಸ್ಟ್ 12: ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದರು. ಮುಂಜಾನೆ ಮನೆಯಿಂದ ಹೊರಟವರು ಕಾಲೇಜಿಗೆ ಹೋಗದೆ ಪಾರ್ಟಿ ಮಾಡಿ ಅತಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಕಾರು ಕೆರೆಗೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರತಿಷ್ಠಿತ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳ ಆಟಾಟೋಪ ಹೆಚ್ಚಾಗಿತ್ತು. ಮನೆಯಲ್ಲಿ ಕಾಲೇಜಿಗೆ ಹೋಗುತ್ತೇವೆ ಎಂದವರು ಕಾರನ್ನು ತೆಗೆದುಕೊಂಡು ನಗರದ ಹೊರವಲಯಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ದಾರೆ. ಕಾರಿನಲ್ಲಿ ಐವರು, ಕಾರನ್ನು ಹಿಂಬಾಲಿಸುತ್ತ ಇಬ್ಬರು ಒಟ್ಟು ಏಳು ಜನ ಅತಿಯಾಗಿ ಕುಡಿದು ಕಾರನ್ನು ಓಡಿಸಿಕೊಂಡು ಬಂದಿದ್ದಾರೆ.
just in:ಆಟೋ,ಬೈಕ್ಗೆ ಕಾರು ಡಿಕ್ಕಿ 6 ಸಾವು, ಆರೋಪಿ ಬಂಧನ
ಕಾಲೇಜು ವಿದ್ಯಾರ್ಥಿಗಳು ಕುಡಿದ ನೆಶೆಯಲ್ಲಿ ತೇಲುತ್ತಾ ಕಾರು ಚಾಲನೆಯನ್ನು ಮಾಡುತ್ತಿದ್ದ ಕಾರಣ ಕಾರು ನಿಯಂತ್ರಣವನ್ನು ತಪ್ಪಿದೆ. ನಿಯಂತ್ರಣ ತಪ್ಪಿದ ಕಾರು ಕೆರೆಯಲ್ಲಿ ಬಿದ್ದಿದೆ. ಕಾರಿನಲ್ಲಿದ್ದ ಐವರು ಅದು ಹೇಗೋ ಈಜಿ ಬಜಾವಾಗಿದ್ದಾರೆ. ವಿದ್ಯಾರ್ಥಿಗಳನ್ನು ನೀರಿನಿಂದ ಹೊರತರಲು ಸ್ಥಳೀಯರು ಸಹ ಸಹಾಯವನ್ನು ಮಾಡಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ದಾರಿ ಹೋಕರ ಜೀವ ಹಾನಿಯಾಗುತ್ತಿತ್ತು.
ಪಾರ್ಟಿ ಮಾಡಿ ವೇಗವಾಗಿ ಕೆರೆಕಟ್ಟೆ ಮೇಲೆ ಕಾರು ಚಲಾಯಿಸಿ ಅಪಘಾತ.
ಕಾರು ಬಂದಷ್ಟೇ ವೇಗವಾಗಿ ಕೆರೆಯ ಒಡಲನ್ನು ಸೇರಿತ್ತು. ಬೆಂಗಳೂರಿನ ಕೂಗುಗಳಂತೆ ದೂರದಲ್ಲಿರುವ ಬನ್ನೇರುಘಟ್ಟ ಸಮೀಪದ ಚಿನ್ನಯನಪಾಳ್ಯದಲ್ಲಿ ಈ ಘಟನೆ ನಡೆದಿತ್ತು. ಅಪಘಾತ ನಡೆದ ಕೆರೆಯ ಸಮೀಪದಲ್ಲಿ ಇರುವ ಹುಲ್ಲಳ್ಳಿಯ ಕ್ರೈಸ್ಟ್ ಅಕಾಡೆಮಿ ಕಾಲೇಜಿನ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿಗಳು ಬೆಳಗ್ಗೆ ಕಾಲೇಜಿಗೆ ಹೋಗದೆ ಏಳು ಜನ ಚಿನ್ನಯ್ಯನ ಪಾಳ್ಯದ ಪಕ್ಕದಲ್ಲಿ ಇರುವ ರೆಸಾರ್ಟ್ ಗಳಿಗೆ ಹೋಗಿ ಪಾರ್ಟಿ ಮಾಡಿದ್ದಾರೆ, ಬೆಳ್ಳಂ ಬೆಳಗ್ಗೆ ಪಾರ್ಟಿ ಮುಗಿಸಿ ಕುಡಿದ ಮತ್ತಿನಲ್ಲಿ ಚಿನ್ನಯ್ಯನಪಾಳ್ಯದ ಬುಜಂಗ ದಾಸಯ್ಯನ ಕೆರೆ ಕೋಡಿ ಬಳಿ ಎಸ್ಯುವಿ ಕಾರಿನಲ್ಲಿ 5 ಜನ ವಿದ್ಯಾರ್ಥಿಗಳು ಹಾಗೂ ಕಾರಿನ ಹಿಂಭಾಗದಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ, ಕೆರೆ ಏರಿ ಮೇಲಿನ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೇ ನೇರವಾಗಿ ಕಾರು ಕೆರೆಗೆ ಉರುಳಿದೆ.
ಸ್ಥಳೀಯರ ನೆರವಿನಿಂದ ಐವರ ರಕ್ಷಣೆ
ಕೆರೆಯೊಳಗೆ ಕಾರು ಬಿದ್ದದ್ದು ತಿಳಿದು ತಕ್ಷಣವೇ ಸ್ಥಳೀಯರು ಓಡೋಡಿ ಬಂದು ಕಾರಿನಲ್ಲಿದ್ದ ಐವರನ್ನು ಕಾರಿನಿಂದ ಹೊರಕ್ಕೆ ಎಳೆದು ರಕ್ಷಣೆಯನ್ನು ಮಾಡಿದ್ದಾರೆ. ಸುಮಾರು 20ರ ಆಸುಪಾಸಿನ ವಿದ್ಯಾರ್ಥಿಗಳು ಕುಡಿದ ಮತ್ತಿನಲ್ಲಿದ್ದರು. ಕಾರಿನಿಂದ ಇಳಿಯಲು ಕಷ್ಟವಾಗುವ ಸ್ಥಿತಿಯಲ್ಲಿದ್ದರು. ಅವರನ್ನು ಕಾರು ಬಿದ್ದ ತಕ್ಷಣೆವೇ ಜನರೆಲ್ಲಾ ಸೇರಿ ಕಾಪಾಡಿದ್ದೇವೆ. ಕುಡಿದು ವೇಗವಾಗಿ ಕಾರು ಓಡಿಸಿದ್ದೇ ಕೆರೆಗೆ ಬೀಳಲು ಕಾರಣವಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ ಮೂರ್ತಿ ತಿಳಿಸಿದ್ದಾರೆ.
ಸಹಾಯ ಮಾಡದಿದ್ದರೇ ಹೋಗುತ್ತಿತ್ತು 5 ಜೀವ
ಕಾರು ಕೆರೆಗೆ ಉರುಳಿ ಬೀಳುತ್ತಿದ್ದಂತೆ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದವರು ಸಹಾಯವನ್ನು ಮಾಡಿದ್ದಾರೆ. ಕಾರು ಕೆರೆಗೆ ಉರುಳುತ್ತಿದ್ದಂತೆ ನಾಲ್ಕು ಚಕ್ರ ಮೇಲಾಗಿ ತೇಲುತ್ತಿತ್ತು. ವಿದ್ಯಾರ್ಥಿಗಳ ರಕ್ಷಣೆ ಬಳಿಕ ಕಾರನ್ನು ಜೆಸಿಬಿ ಮೂಲಕ ಹೊರ ತೆಗೆದಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಯಾರು ಇಲ್ಲದೆ ಹೋಗಿದ್ದರೆ ಬೆಳ್ಳಂ ಬೆಳಗ್ಗೆ ವಿದ್ಯಾರ್ಥಿಗಳ ಚೆಲ್ಲಾಟಕ್ಕೆ ನಾಲ್ಕೈದು ಜನ ವಿದ್ಯಾರ್ಥಿಗಳ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. 11.20 ರ ಸಮಯದಲ್ಲಿ ಕಾಲೇಜಿನಲ್ಲಿ ಇರಬೇಕಾದ ವಿದ್ಯಾರ್ಥಿಗಳು ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡು ಅಪಘಾತ ಮಾಡಿಕೊಂಡರು ಸಹ ಕ್ರೈಸ್ತ ಅಕಾಡೆಮಿ ಆಡಳಿತ ಮಂಡಳಿಯವರು ಮಾತ್ರ ಇದಕ್ಕೆ ಯಾವುದೇ ತಲೆಕೆಡಿಸಿಕೊಂಡಿರಲಿಲ್ಲ, ಬಲಾಡ್ಯರ ಮಕ್ಕಳು ಎನ್ನುವ ಕಾರಣಕ್ಕೆ ಬನ್ನೇರುಘಟ್ಟ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಳ್ಳದೆ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಂಸ್ಕಾರ ಹೇಳಿಕೊಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಯದ್ದೇ
ಪ್ರತಿಷ್ಠಿತ ಕಾಲೇಜು, ಉಳ್ಳವರಿಗೆ ಆಡ್ಮಿಷನ್ ಇವೆಲ್ಲಾ ಇದ್ದಾಗ ಮಕ್ಕಳು ಕಾಲೇಜಿಗೆ ಹೋಗ್ತಾರಾಅ. ಇನ್ನೆಲ್ಲಿಗೆ ಹೋಗುತ್ತಾರೆ ಎಂದು ನೋಡಿಕೊಳ್ಳುವ ಪುರುಸೋತ್ತು ಪೋಷಕರಿಗೂ ಇಲ್ಲಾ. ಕಾಲೇಜಿಗೆ ಬಂದರೇ ಪಾಠ ಇಲ್ಲವೇ ಇಲ್ಲ ಎಂದುಕೊಳ್ಳವ ಸಂಸ್ಥೆ. ಇನ್ನು ಕಾಲೇಜು ಸಮಯದಲ್ಲೇ ವಿದ್ಯಾರ್ಥಿಗಳು ಕೆರೆ ಏರಿ ಮೇಲೆ ಪದೇ ಪದೇ ಪಾರ್ಟಿ ಮಾಡಿ ಪುಂಡಾಟ ಮೆರೆಯುತ್ತಿದ್ದಾರೆ. ಹಾಡು ಹಗಲಲ್ಲೇ ಅದರಲ್ಲೂ ಬೆಳ್ಳಂಬೆಳಗ್ಗೆ ಈ ರೀತಿ ಪಾರ್ಟಿ ಮಾಡಿ ಸ್ಥಳೀಯರಿಗೆ ತೊಂದರೆ ಕೊಡುವುದಲ್ಲದೆ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ವಿದ್ಯಾರ್ಥಿಗಳ ತುಂಟಾಟಕ್ಕೆ ಕಾಲೇಜು ಆಡಳಿತ ಮಂಡಳಿ ತಿಳಿಹೇಳಬೇಕಿದೆ. ಯಾವ ವಿದ್ಯಾರ್ಥಿಗಳು ಪಾರ್ಟಿ ಮಾಡಲು ಬಂದಿದ್ದರು ಎಂಬುದು ತಿಳಿಯಬೇಕಿದೆ.