ಡ್ರಗ್ಸ್ ಕೇಸ್: ಸಿದ್ದಾಂತ್ ಕಪೂರ್ ಸೇರಿದಂತೆ ಐವರಿಗೆ ಜಾಮೀನು
ಬೆಂಗಳೂರು, ಜೂನ್ 14: ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಸಿದ್ದಾಂತ್ ಹಾಗೂ ಐವರಿಗೆ ಸೋಮವಾರ ರಾತ್ರಿ ಠಾಣೆ ಜಾಮೀನು(Station bail) ಸಿಕ್ಕಿದೆ.
ಸಿದ್ದಾಂತ್ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದರಿಂದ ಸೋಮವಾರ ಬಂಧನಕ್ಕೊಳಗಾಗಿದ್ದರು. ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ಇರುವ ದಿ ಪಾರ್ಕ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಸುದ್ದಿ ತಿಳಿದ ಪೊಲೀಸರು ದಾಳಿ ನಡೆಸಿದ್ದರು. ಹಲಸೂರು ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು.
ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಟ ಸಿದ್ದಾಂತ್ ಕಪೂರ್ ಸೇರಿದಂತೆ ಐವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ತನಿಖಾಧಿಕಾರಿ ಮಂಜುನಾಥ್ ಹೇಳಿದ್ದರು.
ಎಲ್ಲರ ವಿರುದ್ಧ ಎನ್ ಡಿ ಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ಆದರೆ, ಸೋಮವಾರ ರಾತ್ರಿ ವೇಳೆಗೆ ಠಾಣೆ ಜಾಮೀನು ಸಿಕ್ಕಿದ್ದು, ಸಿದ್ಧಾಂತ್ ಕಪೂರ್ ಹೊರ ಬಂದಿದ್ದಾರೆ. ಮಂಗಳವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ, ಪೊಲೀಸರ ಕ್ರಮವನ್ನುಸಿದ್ಧಾಂತ್ ಸ್ವಾಗತಿಸಿದ್ದಾರೆ.
ಬೆಂಗಳೂರು ಪೊಲೀಸರಿಂದ ನಟ ಸಿದ್ದಾಂತ್ ಕಪೂರ್ ಸೇರಿ ಐವರ ಬಂಧನ
''ಸಿದ್ದಾಂತ್ ಸೇರಿದಂತೆ ಐವರಿಗೆ ಠಾಣೆ ಜಾಮೀನು ನೀಡಿ ಕಳಿಸಲಾಗಿದೆ, ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕಾಗುತ್ತದೆ'' ಎಂದು ಪೂರ್ವ ವಲಯದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
ದಾಳಿ ವೇಳೆ ನಡೆದಿದ್ದೇನು?
ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಇರುವ ದಿ ಪಾರ್ಕ್ ಫೈವ್ ಸ್ಟಾರ್ ಹೋಟೆಲ್ನಲ್ಲಿ ನಡೆದಿರುವ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹಲಸೂರು ಠಾಣೆ ಎಸ್ ಐ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿ ವೇಳೆ 7 ಕಸದ ಡಬ್ಬಿಯಲ್ಲಿ 4 ಗುಲಾಬಿ ಮತ್ತು 3 ನೀಲಿ ಬಣ್ಣದ ಎಂಡಿಎಂಎ ಟ್ಯಾಬ್ಲೇಟ್ಗಳು ಪತ್ತೆಯಾಗಿತ್ತು. ಜೊತೆಗೆ 5 ಗ್ರಾಂ ತೂಕದ ಗಾಂಜಾ ಕೂಡ ಡಸ್ಟ್ ಬೀನ್ನಲ್ಲಿತ್ತು. ಈ ಬಗ್ಗೆ ಪ್ರಶ್ನಿಸಿದ್ದ ಪೊಲೀಸರಿಗೆ ಡ್ರಗ್ಸ್ ತಮ್ಮದಲ್ಲ ಎಂದು ಪಾರ್ಟಿಯಲ್ಲಿದ್ದವರು ವಾದಿಸಿದ್ದರು. ಡ್ರಗ್ಸ್ ಸೇವನೆ ಬಗ್ಗೆ ಖಚಿತಪಡಿಸಿಕೊಳ್ಳಲು ಸಂತೋಷ್ ಆಸ್ಪತ್ರೆಯಲ್ಲಿ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಐವರಿಗೆ ಪಾಸಿಟಿವ್ ರಿಪೋರ್ಟ್ ಬಂದಿತ್ತು
ಯಾರು ಯಾರು ಬಂಧಿತರು
ಹಿಂದಿ ಚಿತ್ರರಂಗದ ಜನಪ್ರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್, ಇಂದಿರಾನಗರ ನಿವಾಸಿ, ಉದ್ಯಮಿ ಅಕಿಲ್ ಸೋನಿ, ಪಂಜಾಬ್ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಹರ್ಜೋತ್ ಸಿಂಗ್ ಆಗಿದ್ದಾನೆ. ಬಿಟಿಎಂ ಲೇಔಟ್ ನಿವಾಸಿ ಹನಿ ಹಾಗೂ ಮಾಗಡಿ ರೋಡ್ ನಿವಾಸಿ ಅಕಿಲ್ ಎಂಬಾತ ಸೇರಿದಂತೆ 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಕಾನೂನಿನ ಪ್ರಕಾರ ಎಲ್ಲರ ವೈದ್ಯಕೀಯ ಪರೀಕ್ಷೆ ನಡೆಸಿ, ಡ್ರಗ್ಸ್ ಸೇವನೆ ಬಗ್ಗೆ ದೃಢಪಟ್ಟ ಬಳಿಕ ಠಾಣೆಗೆ ಕರೆದೊಯ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು.
ಖಾಸಗಿ ಹೊಟೇಲ್ ಮೇಲೆ ನಡೆದ ದಾಳಿ
ಖಾಸಗಿ ಹೊಟೇಲ್ ಮೇಲೆ ನಡೆದ ದಾಳಿಯಲ್ಲಿ ನಟ ಸೇರಿದಂತೆ ಐವರು ಬಂಧನ ಪ್ರಕರಣ ಸಂಬಂಧ ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಪ್ರತಿಕ್ರಿಯೆ ನೀಡಿ "ಡ್ರಗ್ಸ್ ಪಾರ್ಟಿ ಸಂಬಂಧ ನಮ್ಮ ಅಧಿಕಾರಿಗಳು ಭಾನುವಾರ ರಾತ್ರಿ ದಾಳಿ ನಡೆಸಿದ್ದಾರೆ. ಅದರಲ್ಲಿ ಈಗಾಗಲೆ 30 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ ಐದು ಜನರನ್ನ ಬಂಧಿಸಲಾಗಿದೆ. ಬಂಧಿತರ ಪೈಕಿ ಬಾಲಿವುಡ್ ನ ಖ್ಯಾತ ನಟ, ಡಿಜೆ ಕೂಡ ಇದ್ದಾನೆ. ಮುಖ್ಯವಾಗಿ ಪಾರ್ಟಿಯನ್ನು ಆಯೋಜನೆ ಯಾರು ಮಾಡಿದ್ದು ಎಂದು ತಿಳಿಯಬೇಕಿದೆ'' ಎಂದಿದ್ದಾರೆ.
Recommended Video
ಡಿಸಿಪಿ ಡಾ.ಭೀಮಾಶಂಕರ್ ಗುಳೇದ್
ಈ ಬಗ್ಗೆ ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, "ರಾತ್ರಿ ಹೋಟೆಲ್ನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ರೇಡ್ ಮಾಡಲಾಗಿತ್ತು. 100 ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿದ್ದರು. ಅದರಲ್ಲಿ ಭಾಗಿಯಾಗಿದ್ದ ಕೆಲವರನ್ನ ಡ್ರಗ್ಸ್ ಟೆಸ್ಟ್ಗೆ ಒಳಪಡಿಸಲಾಗಿತ್ತು. ಐವರಿಗೆ ಪಾಸಿಟಿವ್ ಬಂದಿತ್ತು. ಪಾರ್ಟಿಯಲ್ಲಿ ಉತ್ತರ ಭಾರತದವರು ಜಾಸ್ತಿಯಿದ್ದರು. ಬಂಧಿತ ಪ್ರಮುಖರಲ್ಲಿ ಐದೂ ಜನ ಕೂಡ ಕರ್ನಾಟಕದವರಲ್ಲ. ಈ ಪೈಕಿ ಮೂವರು ರಾಜ್ಯದಲ್ಲಿ ವಾಸವಾಗಿದ್ದಾರೆ. ಎಲ್ಲರ ಫೋನ್ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪಾರ್ಟಿ ಓಪನ್ ಫಾರ್ ಪಬ್ಲಿಕ್ ಆಗಿದೆ. ಡಸ್ಟ್ ಬಿನ್ ಬಳಿ 7 ಎಂಡಿಎಂಎ, ಗಾಂಜಾ ಸಿಕ್ಕಿದೆ. ನಟ ಸಿದ್ಧಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದರು'' ಎಂದು ಮಾಹಿತಿ ನೀಡಿದ್ದಾರೆ