ಡ್ರಗ್ಸ್ ಕೇಸ್: ಸಿಪಿಐಎಂ ಕಾರ್ಯದರ್ಶಿ ಪುತ್ರ ಬಿನೀಶ್ ಬಂಧನ
ಬೆಂಗಳೂರು, ಅ. 29: ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ. ಜೊತೆ ಅನೂಪ್ ಜೊತೆ ಬಿನೀಶ್ ಸಂಪರ್ಕ ಹೊಂದಿದ್ದಾರೆ. ಕಮ್ಮನಹಳ್ಳಿಯಲ್ಲಿ ಅನೂಪ್ ಆರಂಭಿಸಿದ ರೆಸ್ಟೋರೆಂಟ್ ಮೇಲೆ ಬಿನೀಶ್ 50 ಲಕ್ಷ ಹೂಡಿಕೆ ಮಾಡಿದ್ದಾರೆ ಎಂಬುದು ಈಗ ವಿಚಾರಣೆ ಹಂತದಲ್ಲಿದೆ.
ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್
ಆಗಸ್ಟ್ ನಲ್ಲಿ ಬಂಧಿತರಾದ ಅನಿಕಾ, ಅನೂಪ್ ಹಾಗೂ ರಿಜೇಶ್ ಜೊತೆ ಸಂಪರ್ಕ ಹೊಂದಿದ್ದು, ಬೆಂಗಳೂರಿನ ಡ್ರಗ್ಸ್ ಜಾಲ, ಅನೂಪ್ ಹೋಟೆಲ್ ವಹಿವಾಟಿಗೆ ಬಿನೀಶ್ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ, ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 6ರಂದು ಬೆಂಗಳೂರಿನ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ NCB ಕಚೇರಿಯಲ್ಲಿ ಬಿನೀಶ್ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ವೇಳೆಯಲ್ಲಿ ಅನೂಪ್ ನನ್ನ ಸ್ನೇಹಿತ ಆತನಿಗೆ ಹಣಕಾಸು ತೊಂದರೆ ಇತ್ತು. ಹೀಗಾಗಿ 6 ಲಕ್ಷ ನೀಡಿದ್ದೆ. ಮತ್ತೊಮ್ಮೆ ಬೆಂಗಳೂರಿನಿಂದ ಕೊಚ್ಚಿಗೆ ಬರಲು ಹಣ ಇಲ್ಲ ಎಂದಿದ್ದಾಗ 15, 000 ನೀಡಿದ್ದೆ ಎಂದು ಬಿನೀಶ್ ಹೇಳಿಕೆ ನೀಡಿದ್ದ.
ಅಣ್ಣ ಬಿನಾಯ್ ರೇಪ್ ಆರೋಪಿ, ತಮ್ಮ ಬಿನೀಶ್ ವಂಚನೆ ಆರೋಪಿ
ಕೇರಳ ಹಾಗೂ ಕರ್ನಾಟಕದ ನಟ, ನಟಿಯರು, ಸೆಲೆಬ್ರಿಟಿಗಳು, ಉದ್ಯಮಿಗಳ ಸಂಪರ್ಕ ಹೊಂದಿದ್ದ ಅನೂಪ್ ಪೆಡ್ಲರ್ ಆಗಿ ಎಲ್ ಎಸ್ ಡಿ, ಎಂಡಿಎಂಎ, ಕೊಕೈನ್ ಮಾರಾಟ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ. ಅನೂಪ್ ಹಾಗೂ ಬಿನೀಶ್ ನಡುವಿನ ಆರ್ಥಿಕ ವ್ಯವಹಾರ ವಿದೇಶಕ್ಕೂ ವ್ಯಾಪಿಸಿದ್ದು, ಈ ಬಗ್ಗೆ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.